ತೆಂಕುತಿಟ್ಟು ಮಕ್ಕಳ ಯಕ್ಷಗಾನ ಸ್ಪರ್ಧೆ ಉದ್ಘಾಟನೆ
ಮೂಡುಬಿದಿರೆ, ಅ.22: ಧಾರ್ಮಿಕವಾಗಿ, ಬೌದ್ಧಿಕವಾಗಿ ಬೆಳೆಸಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಈ ಕಲೆಗೆ ಸಾಂಸ್ಕೃತಿಕ ವಲಯದಲ್ಲಿ ಪ್ರತ್ಯೇಕ ಸ್ಥಾನವಿದೆ ಎಂದು ಕಟೀಲು ಮೇಳದ ಭಾಗವತರಾದ ಕುಬಣೂರು ಶ್ರೀಧರರಾವ್ ಹೇಳಿದರು.
ಬೆಳುವಾಯಿಯ ಶ್ರೀಯಕ್ಷದೇವ ಮಿತ್ರಕಲಾ ಮಂಡಳಿಯ ವಿಶಂತಿ ವರ್ಷದ ಅಂಗವಾಗಿ ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ಆಯೋಜಿಸಲಾದ ತೆಂಕುತಿಟ್ಟು ಮಕ್ಕಳ ಯಕ್ಷಗಾನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಕ್ಷಗಾನ ಜನರಲ್ಲಿ ನೈತಿಕ ಶ್ರೇಷ್ಠತೆಯನ್ನು ನೀಡುತ್ತಾ ಬಂದಿದ್ದು, ಈ ಕಲೆಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಲು ಹಾಗೂ ಸಾಂಸ್ಕೃತಿಕ ಒಲವನ್ನು ಹೆಚ್ಚಿಸಲು ಇಂತಹ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಶ್ಲಾಘನೀಯ ಎಂದರು.
ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಡಾ.ಶ್ರೀಧರ ಭಂಡಾರಿ ಮಾತನಾಡಿ, ಯಕ್ಷಗಾನ ಕಲೆಯು ಅವನತಿ ಹಾದಿಯಲ್ಲಿರುವಾಗ ಇಂತಹ ಸ್ಪರ್ಧೆಗಳು ಕಲೆಗೆ ಹೊಸ ಚೈತನ್ಯ ತುಂಬಲು ಸಹಕಾರಿಯಾಗಿವೆ ಎಂದರು. ಕಟೀಲು ಮೇಳದ ಸಂಚಾಲಕ ವಿಷ್ಣು ಶರ್ಮ ಪಣಕಜೆ ಮಾತನಾಡಿದರು.
ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ವಂದಿಸಿದರು. ಕಲಾವಿದ ಮಹಾವೀರ ಪಾಂಡಿ ಕಾರ್ಯಕ್ರಮ ನಿರ್ವಹಿಸಿದರು.