ಕುಡಿಯುವ ನೀರು ಸಂಪರ್ಕದ ಬಿಲ್ ವಿವಾದ ಕಿಲ್ಪಾಡಿ ಗ್ರಾಪಂ ವಿರುದ್ಧ ದಸಂಸ ಆಕ್ರೋಶ
ಮುಲ್ಕಿ, ಅ.22: ಇಲ್ಲಿನ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೆರೆಕಾಡಿನಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದಿರುವ ದಲಿತ ಸಮುದಾಯದ ಮನೆಯ ನೀರಿನ ಸಂಪರ್ಕಗಳನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಲು ಹೊರಟಿರುವ ಪಂಚಾಯತ್ ಕ್ರಮವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ದಸಂಸ) ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ, ಕೆರೆಕಾಡಿನ ಹಲವಾರು ದಲಿತ ಸಮುದಾಯದ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ನೀಡಲಾಗಿತ್ತು. ಆದರೆ, ಸಾವಿರಾರು ರೂ. ಬಿಲ್ಲನ್ನು ಒಮ್ಮೆಲೆ ನೀಡಿ, ಕಟ್ಟದಿದ್ದರೆ ಸಂಪರ್ಕವನ್ನು ಕಡಿತಗೊಳಿಸುತ್ತೇವೆ ಎಂದು ಪಂಚಾಯತ್ ಹೇಳಿದೆ. ಈ ಬಗ್ಗೆ ಪ್ರಶ್ನಿಸಲು ಪಂಚಾಯತ್ಗೆ ತೆರಳಿದರೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ದಲಿತರೆಂಬ ಕಾರಣಕ್ಕೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂದು ದಲಿತ ನಾಯಕರು ಆರೋಪಿಸಿದ್ದಾರೆ. ಸಂಪರ್ಕ ಕಡಿತಗೊಳಿಸಿ ಮರುಜೋಡಣೆಗೆ ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿರನ್ನು ಒಗ್ಗೂಡಿಸಿಕೊಂಡು ಪಂಚಾಯತ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.