ಸ್ವಚ್ಚತಾ ಕಾರ್ಯಕ್ಕೆ ಯುವಕರು ಮುಂದಾಗಬೇಕು: ಧರ್ಮಾಮೃತಾನಂದ ಸ್ವಾಮೀಜಿ
ಉಳ್ಳಾಲ, ಅ.23: ಭಾರತವು ಪ್ರಪಂಚದಲ್ಲೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದ್ದು ಯುವಕರೇ ಮುಂದೆ ನಿಂತು ತಮ್ಮ ತಮ್ಮ ಊರು ಕೇರಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದಲ್ಲಿ ಮುಂದೊಂದು ದಿನ ದೇಶವು ಜಾಗತಿಕ ಮಟ್ಟದಲ್ಲೇ ಕಂಗೊಳಿಸುವುದು ನಿಶ್ಚಿತ ಎಂದು ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಧರ್ಮಾಮೃತಾನಂದ ಸ್ವಾಮೀಜಿ ಹೇಳಿದರು.
ಸ್ವಚ್ಛ ಭಾರತ ಪರಿಕಲ್ಪನೆಯಡಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡು, ಜೈ ವೀರ ಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟುವಿನ ಸಹಯೋಗದಲ್ಲಿ ರವಿವಾರ ಓವರ್ ಬ್ರಿಡ್ಜ್, ಕಾಪಿಕಾಡು ಹೆದ್ದಾರಿ ಇಕ್ಕೆಲಗಳಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಉಮಾಮಹೇಶ್ವರಿ ದೇವಸ್ಥಾನದ ಮೊಕ್ತೇಸರ ಈಶ್ವರ್ ಉಳ್ಳಾಲ್ ಮಾತನಾಡಿ, ಸ್ವಚ್ಛತೆಯು ಕೇವಲ ಫೋಟೊ,ವೀಡಿಯೊಗಳಿಗೆ ಸೀಮಿತವಾಗಬಾರದು. ಬದಲಾಗಿ ಎಲ್ಲರೂ ದಿನನಿತ್ಯವೂ ತಮ್ಮ ತಮ್ಮ ಪ್ರದೇಶವನ್ನು ಸ್ವಚ್ಛವಾಗಿಟ್ಟರೆ ಕಸದ ಸಮಸ್ಯೆ ಉದ್ಭವಿಸಲು ಸಾಧ್ಯವಿಲ್ಲ. ಸ್ವಚ್ಛತೆಯ ವಿಚಾರದಲ್ಲಿ ರಾಮಕೃಷ್ಣ ಮಿಷನ್ ನಡೆಸುತ್ತಿರುವ ಕಾರ್ಯಕ್ರಮಗಳು ದೇಶಕ್ಕೇ ಮಾದರಿ ಎಂದು ಹೇಳಿದರು.
ಉಮಾಮಹೇಶ್ವರೀ ದೇವಸ್ಥಾನದ ಅಧ್ಯಕ್ಷರಾದ ದಿನೇಶ್ ರೈ ಕಳ್ಳಿಗೆ,ಪ್ರದಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡು, ರಘುರಾವ್ ಶೆಟ್ಟಿ, ವೀರಮಾರುತಿ ವ್ಯಾಯಾಮ ಶಾಲೆಯ ಶಿಕ್ಷಕ ರಾಜೀವ ಮೆಂಡನ್, ಅಧ್ಯಕ್ಷರಾದ ರಾಮಚಂದ್ರ ತೊಕ್ಕೊಟ್ಟು, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ರಾಮಕೃಷ್ಣ ಮಠದ ಮೇಲ್ವಿಚಾರಕ ಉಮಾನಾಥ ಕೋಟೆಕಾರ್, ನಿವೇದಿತ್, ಮನೋಹರ್ ಮೊದಲಾದವರು ಉಪಸ್ಥಿತರಿದ್ದರು.