ಮನಪಾದಿಂದ ನಿವೇಶನರಹಿತರ ಪಟ್ಟಿಯಿಂದ ಹೆಸರು ಕಣ್ಮರೆ: ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ
![ಮನಪಾದಿಂದ ನಿವೇಶನರಹಿತರ ಪಟ್ಟಿಯಿಂದ ಹೆಸರು ಕಣ್ಮರೆ: ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ ಮನಪಾದಿಂದ ನಿವೇಶನರಹಿತರ ಪಟ್ಟಿಯಿಂದ ಹೆಸರು ಕಣ್ಮರೆ: ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ](https://www.varthabharati.in/sites/default/files/images/articles/2016/10/25/niveshana.gif)
ಮಂಗಳೂರು, ಅ.24: ಮಂಗಳೂರು ಮಹಾನಗರ ಪಾಲಿಕೆ ಸಿದ್ಧಪಡಿಸಿದ ನಗರದ ನಿವೇಶನರಹಿತರ ಪಟ್ಟಿಯಲ್ಲಿ ಸಿಪಿಎಂ ನೇತೃತ್ವದ ನಿವೇಶನರಹಿತರ ಹೋರಾಟ ಸಮಿತಿ ಕ್ರಮಬದ್ದವಾಗಿ ಸಲ್ಲಿಸಿದ್ದ ಅನೇಕ ಅರ್ಜಿದಾರರ ಹೆಸರು ಕಾಣೆಯಾಗಿದೆ. ಪುರುಷ ಅರ್ಜಿದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಮಂಗಳೂರು ನಗರದ ಬಡ ನಿವೇಶನರಹಿತರು ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ನಿವೇಶನರತರ ಹೋರಾಟ ಸಮಿತಿಯ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಗರದ ನಿವೇಶನರಹಿತರು ಎಡೂವರೆ ವರ್ಷಗಳಿಂದ ನಿವೇಶನಗಳನ್ನು ಮಹಾನಗರ ಪಾಲಿಕೆಗೆ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿಯ ಮೂಲಕ ಈಗಾಗಲೇ ಏಳು ಬಾರಿ ಸಾಮೂಹಿಕ ಪ್ರತಿಭಟನೆ ನಡೆಸಿದ್ದಾರೆ. ಆದರೂ ಪಾಲಿಕೆ ಬಡವರಿಗೆ ನಿವೇಶನ ಹಂಚಲು ಮೀನಮೇಷ ಎಣಿಸುತ್ತಿದೆ ಎಂದರು.
ನಿವೇಶನರಹಿತರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳನ್ನು ಪುರುಷ ಅರ್ಜಿದಾರರ ಹೆಸರನ್ನು ಸೇರಿಸಬೇಕು, ಕಣ್ಣೂರಿನ ಕನ್ನಗುಡ್ಡೆಯಲ್ಲಿ 11.25 ಎಕ್ರೆ ನಿವೇಶನಕ್ಕಾಗಿ ಕಾದಿರಿಸಿದ ಜಮೀನಿನ ಸ್ಪಷ್ಟ ಮಾಹಿತಿ ನೀಡಬೇಕು. ಮಂಗಳೂರು ನಗರದಲ್ಲಿ ಆಯ್ಕೆಯಾದ 2,000 ನಿವೇಶನರಹಿತರ ಅಂತಿಮ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಪಿಎಂ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿ, ಸಿಪಿಎಂ ನಗರ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಜಯಂತಿ ಬಿ. ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್, ನಿವೇಶನರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ ,ಕಾರ್ಯದರ್ಶಿ ಸಂತೋಷ್ಶಕ್ತಿನಗರ, ಪ್ರಭಾವತಿ ಬೋಳಾರ ಪಾಲ್ಗೊಂಡಿದ್ದರು.