ವರುಣ್ ಗಾಂಧೀ ಹನಿಟ್ರ್ಯಾಪ್ ಹಗರಣ : ಮರುಕಳಿಸಿತು 40 ವರ್ಷಗಳ ಹಿಂದಿನ ಪ್ರಕರಣ !

ವರುಣ್ ತಾಯಿ ಮೇನಕಾ ಬಹಿರಂಗಪಡಿಸಿದ್ದರು ಭಾರತದ ಪ್ರಪ್ರಥಮ ರಾಜಕೀಯ ಲೈಂಗಿಕ ಹಗರಣ
ಅದರಲ್ಲಿ ಬಲಿಯಾಗಿತ್ತು ಹಿರಿಯ ನಾಯಕರೊಬ್ಬರ ರಾಜಕೀಯ ಭವಿಷ್ಯ
ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿ ಮಟ್ಟಿಗೆ ಇತ್ತೀಚೆಗಿನ ಹನಿಟ್ರ್ಯಾಪ್ ಪ್ರಕರಣ ದೊಡ್ಡ ದೇಜಾವೂ ಎನ್ನಬಹುದೇನೋ! ಈ ಹರಣದಲ್ಲಿ ವರುಣ್ ಗಾಂಧಿ ಯುವತಿಯೊಬ್ಬಳ ಜೊತೆಗೆ ಅಶ್ಲೀಲವಾಗಿ ಇರುವ ಚಿತ್ರಗಳನ್ನು ಬಳಸಿಕೊಂಡು ರಕ್ಷಣಾ ವಿಚಾರಗಳ ರಹಸ್ಯವನ್ನು ಹೊರ ಹಾಕುವಂತೆ ಬ್ಲಾಕ್ಮೇಲ್ ಮಾಡಲಾಗಿತ್ತು ಎನ್ನುವ ಆರೋಪವಿದೆ. ಆದರೆ ಹಿಂದೆ ಸೂರ್ಯ ಮ್ಯಾಗಝೀನ್ನ ಸಂಪಾದಕಿಯಾಗಿದ್ದಾಗ ಮೇನಕಾ ಗಾಂಧಿ ಹೀಗೇ ಜಗಜೀವನ್ ರಾಂ ಅವರ ಹಗರಣವನ್ನು ಬಯಲಿಗೆಳೆದು ಅವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಿದ್ದರು. ಆದರೆ ಮೊದಲ ಬಾರಿ ಸಂಸದರಾಗಿರುವ ವರುಣ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಬ್ಲಾಕ್ಮೇಲ್ ಮಾಡಲು ತನ್ನ ಬಳಿ ಯಾವುದೇ ರಕ್ಷಣಾ ಇಲಾಖೆಯ ರಹಸ್ಯಗಳೂ ಇರಲಿಲ್ಲ ಎಂದಿದ್ದಾರೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಇಷ್ಟಪಡದ ಬಿಜೆಪಿ ಪ್ರಕರಣವನ್ನು ನಿಭಾಯಿಸುವ ಜವಾಬ್ದಾರಿಯನ್ನು ವರುಣ್ರಿಗೇ ಬಿಟ್ಟಿರುವುದು ಗಾಯಕ್ಕೆ ಬರೆ ಎಳೆದಂತಾಗಿದೆ.
40 ವರ್ಷಗಳ ಹಿಂದೆ ದೇಶದ ಮೊದಲ ರಾಜಕೀಯ ಲೈಂಗಿಕ ಹಗರಣದಲ್ಲಿ ಉಪ ಪ್ರಧಾನಿಯಾಗಿದ್ದ ಜಗಜೀವನ್ರಾಂ ಅವರ ಮಗ ಸುರೇಶ್ರಾಂ ಸಿಕ್ಕಿಬಿದ್ದಿದ್ದರು. 21 ವರ್ಷದ ದಿಲ್ಲಿ ವಿದ್ಯಾರ್ಥಿನಿಯ ಜೊತೆಗೆ ಇದ್ದ 47 ವರ್ಷದ ಸುರೇಶ್ರ ಚಿತ್ರಗಳು ಬಹಳಷ್ಟು ದಿನಪತ್ರಿಕೆಗಳು ಮತ್ತು ಮ್ಯಾಗಝೀನ್ಗಳ ಮುಂದೆ ಬಂದಿದ್ದರೂ, ಕೇವಲ ಸೂರ್ಯ ಮ್ಯಾಗಝೀನ್ ಮಾತ್ರ ಅದನ್ನು ಪ್ರಕಟಿಸಿತ್ತು. "ಫೋಟೋಗಳು ನಮಗೂ ಬಂದಿದ್ದವು. ಆದರೆ ನಾವು ಅದನ್ನು ಪ್ರಕಟಿಸಲು ಒಪ್ಪಲಿಲ್ಲ. ಅದು ಕೆಟ್ಟ ಅಭಿರುಚಿಯಾಗಿತ್ತು. ಅದು ರಾಜಕೀಯ ಪ್ರೇರಿತವಾಗಿದ್ದ ಕಾರಣ ಅದರಲ್ಲಿ ಯಾರನ್ನೇ ಸಿಕ್ಕಿಸುವುದು ಕೆಟ್ಟ ನಡೆಯಾಗಿತ್ತು" ಎಂದು ಇಂಗ್ಲಿಷ್ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಇಂದರ್ ಮಲ್ಹೋತ್ರ ಹೇಳಿದ್ದರು.
ಮೇನಕಾ ಸಂಪಾದಕತ್ವದಲ್ಲಿ ಫೋಟೋಗಳ ಸಮೇತ ಎರಡು ಪುಟಗಳ ಲೇಖನ ಪ್ರಕಟವಾಗಿತ್ತು. ಅದರ ತಲೆಬರಹ, "ಸುಷ್ಮಾ ಪಾನ್ ಇನ್ ಇಂಟರ್ನಾಷನಲ್ ಸ್ಪೈ ರಿಂಗ್" ಮತ್ತು "ಡಿಫೆನ್ಸ್ ಸೀಕ್ರೇಟ್ಸ್ ಲೀಕ್ಡ್ ಟು ಚೈನೀಸ್ ಎಂಬಸಿ" ಎಂದಿತ್ತು. ಅಲ್ಲದೆ ಮ್ಯಾಗಝೀನ್ ವಿಶೇಷ ಪ್ರಿಂಟ್ಗಳನ್ನು ಈ ಸಂಚಿಕೆಗಾಗೇ ಪ್ರಕಟಿಸಿತ್ತು. ಸುಮಾರು 1.2 ಲಕ್ಷ ಪ್ರತಿಗಳಲ್ಲಿ 20,000 ದಿಲ್ಲಿಯಲ್ಲೇ ಮಾರಾಟವಾಗಿತ್ತು. ಸೂರ್ಯ ಮ್ಯಾಗಝೀನ್ಗೆ ಕುಸಿಯುತ್ತಿದ್ದ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಈ ಹಗರಣವನ್ನು ಬಳಸಿಕೊಳ್ಳುವ ಅಗತ್ಯವಿತ್ತು. ಆದರೆ ಫೋಟೋಗಳನ್ನು ಪ್ರಕಟಿಸಿದ ಕಾರಣ ಮಾತ್ರ ರಾಜಕೀಯ ಪ್ರೇರಿತವೇ ಆಗಿತ್ತು. 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ದಲಿತ ಮುಖವಾಗಿದ್ದ ಜಗಜೀವನ್ ರಾಂ ಅವರು ಇಂದಿರಾ ಗಾಂಧಿಯನ್ನು ತೊರೆದು ಜನತಾ ಮೈತ್ರಿಕೂಟ ಸೇರಿದ್ದರು ಮತ್ತು ಪ್ರಧಾನಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದರು. ಒಮ್ಮೆ ಸುರೇಶ್ ಚಿತ್ರಗಳು ಮಾರುಕಟ್ಟೆಯಲ್ಲಿ ಬಿಕರಿಯಾದ ಮೇಲೆ ಜಗಜೀವನ್ ಮುಖಕ್ಕೆ ದೊಡ್ಡ ಹೊಡೆತ ಬಿದ್ದಿತ್ತು.
ಈಗ ಅಂತಹುದೇ ಆರೋಪಗಳು ಮೇನಕಾರ ಮಗ ವರುಣ್ ಮೇಲೆ ಬಂದಿದೆ. ಅಂತಹುದೇ ಸನ್ನಿವೇಶಗಳನ್ನೂ ಅವರು ಎದುರಿಸುತ್ತಿದ್ದಾರೆ. ವರುಣ್ ಗಾಂಧಿ ಅವರನ್ನು ಉತ್ತರ ಪ್ರದೇಶದ ಸಂಭಾವ್ಯ ಬಿಜೆಪಿಯ ಮುಖ್ಯಮಂತ್ರಿಯಾಗಿ ಮುಂದಿಡುವ ಪ್ರಯತ್ನದಲ್ಲೇ ಈ ಆರೋಪ ಬಂದಿದೆ. ಹೀಗಾಗಿ ಅವರು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎನ್ನುವ ಆರೋಪ ರಾಜಕೀಯವಾಗಿ ಅವರ ವೃತ್ತಿಬದುಕಿಗೆ ದೊಡ್ಡ ಆಘಾತ ನೀಡಲಿದೆ. ಭಾರತೀಯ ರಾಜಕೀಯದಲ್ಲಿ ಬಹಳಷ್ಟು ವಿಷಯಗಳು ಬದಲಾಗುವುದೇ ಇಲ್ಲ ಎನ್ನುವುದು ಇದಕ್ಕೇ ಹೇಳುವುದೇನೋ!
ಕೃಪೆ: http://www.thenewsminute.com/







