ಅಂಬ್ಲಮೊಗರು: ಕಾಂಗ್ರೆಸ್ನಿಂದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

ಕೊಣಾಜೆ, ಅ.25: ಮಂಗಳೂರು ಕ್ಷೇತ್ರ ಕಾಂಗ್ರೆಸ್ ವತಿಯಿಂದ ಅಂಬ್ಲಮೊಗರು ಗ್ರಾಮದ ಬರುವದಲ್ಲಿ ‘ಕಾಂಗ್ರೆಸ್ ನಡಿಗೆ, ಗ್ರಾಮ ಸ್ವರಾಜ್ಯ ಕಡೆ’ ಪ್ರಯುಕ್ತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್, ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಎನ್ನುವುದು ಬಿಜೆಪಿ ಧ್ಯೇಯವಾಗಿದ್ದರೆ, ಬಿಜೆಪಿ ಮುಕ್ತ ಕರ್ನಾಟಕ ಎನ್ನುವ ಧ್ಯೇಯ ಕಾಂಗ್ರೆಸ್ನದ್ದಲ್ಲ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಧ್ಯೇಯ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮೂರು ವರ್ಷ ಪೂರೈಸಿದ್ದು ಚುನಾವಣೆ ಸಂದರ್ಭ ನೀಡಿದ್ದ ಪ್ರಣಾಳಿಕೆಯಂತೆ ಶೇ.70ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ. ಈ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ವಿರೋಧ ಪಕ್ಷಕ್ಕೆ ಯಾವುದೇ ಕಾರಣಗಳು ಸಿಗದ ಹಿನ್ನೆಲೆಯಲ್ಲಿ ಯಾರು ವಾಚ್ ಕಟ್ಟಿದ್ದಾರೆ, ಶೂ ಹಾಕಿದ್ದಾರೆ ಎಂದು ನೋಡುತ್ತಾ ಆರೋಪ ಮಾಡಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತ ನಡೆಸಲು ಜನರು ಅವಕಾಶ ನೀಡಿದರೂ ಸಿಕ್ಕಿದ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿ ಪರಸ್ಪರ ಕಚ್ಚಾಡಿ ಜೈಲಿಗೆ ಹೋಗಿ ಅಧಿಕಾರ ಕಳೆದುಕೊಂಡರು. ಮುಂದಿನ ಚುನಾವಣೆಯಲ್ಲೂ ಜನ ಈ ಅಂಶ ಗಮನದಲ್ಲಿಟ್ಟುಕೊಂಡು ಉತ್ತಮ ಕೆಲಸ ಮಾಡಿರುವ ಕಾಂಗ್ರೆಸ್ಗೆ ಆಶೀರ್ವಾದ ನೀಡುತ್ತಾರೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸರಕಾರದ ಸಾಧನೆ ಬಗ್ಗೆ ಧೈರ್ಯವಾಗಿ ಹೇಳಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕೆಪಿಸಿಸಿ ಸದಸ್ಯ ಪ್ರೊ.ರಾಧಾಕೃಷ್ಣ ಇತಿಹಾಸದ ಮೆಲುಕು, ದೇಶಕ್ಕೆ ಇಂದಿರಾ, ನೆಹರೂ, ರಾಜೀವ್ ಗಾಂಧಿ ಕೊಡುಗೆ ಬಗ್ಗೆ ಮಾತನಾಡಿದರು. ಬೈಬಲ್, ವೇದ, ಉಪನಿಷತ್, ಕುರ್ಆನ್ನಲ್ಲಿ ಧರ್ಮ ಸಮನ್ವಯತೆ ಸಾರಿದೆ. ರಾಮ ಶಾಂತಿಯ ಅವಧೂತ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಶ್ರೀರಾಮ, ಶ್ರೀಕೃಷ್ಣರ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಹಿಡಿ ಕಬ್ಬಿಣ ಕೇಳಿದರೂ ಪ್ರತಿಮೆ ಆಗಿಲ್ಲ, ಮಂದಿರ ನಿರ್ಮಾಣಕ್ಕೆ ಪಡೆದ ಕಲ್ಲುಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ವಿ.ಆರ್.ಸುದರ್ಶನ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮುಖಂಡ ಯು.ಕೆ.ಮೋನು, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಕ್ತಾರ ಫಾರೂಕ್ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಸದಾಶಿವ ಉಳ್ಳಾಲ್, ಕ್ಷೇತ್ರಾಧ್ಯಕ್ಷ ದಿನೇಶ್ ಕುಂಪಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಪ್ರಶಾಂತ ಕಾಜವ, ಅಬ್ದರ್ರಹ್ಮಾನ್ ಕೋಡಿಜಾಲ್, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮುಂತಾದವರು ಉಪಸ್ಥಿತರಿದ್ದರು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.







