ಕಟೀಲು ಆಸ್ರಣ್ಣರ ಮನೆ ದರೋಡೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

ಮಂಗಳೂರು, ಅ. 25: ಅಕ್ಟೋಬರ್ 4ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಮತ್ತೋರ್ವ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಶಿಜು (21) ಎಂದು ಗುರುತಿಸಲಾಗಿದೆ.
ವಾಸುದೇವ ಆಸ್ರಣ್ಣ ಅಂದು ರಾತ್ರಿ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅವರ ಮನೆ ನುಗ್ಗಿ ದರೋಡೆ ಮಾಡಿದ ತಂಡದಲ್ಲಿ ಶಿಜು ಕೂಡ ಇದ್ದ. ಈತ ಆಸ್ರಣ್ಣರ ಮನೆಗೆ ಬಂದು ಅನಾರೋಗ್ಯದ ನೆಪ ಹೇಳಿ ಪ್ರಸಾದವನ್ನು ಕೇಳಿದ್ದ. ಆದರೆ, ಮನೆಯವರು ಪ್ರಸಾದ ಕೊಡಲು ನಿರಾಕರಿಸಿದಾಗ ತಂಡ ಬಲವಂತವಾಗಿ ಬಾಗಿಲನ್ನು ಒಡೆದು ಮನೆಗೆ ನುಗ್ಗಿತ್ತು. ಈ ಸಂದರ್ಭದಲ್ಲಿ ಶಿಜು ಮನೆಯವರಿಗೆ ಚೂರಿಯನ್ನು ತೋರಿಸಿ ಬೆದರಿಸಿದ್ದ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಅದರಂತೆ ಬಜ್ಪೆ ಠಾಣಾ ಪಿಎಸ್ಸೈ ಸತೀಶ್ ಮತ್ತು ಸಿಬ್ಬಂದಿ ಸೋಮವಾರ ಸಂಜೆ ಶಿಜುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನಿಂದ ದರೋಡೆಗೈದ ಸೊತ್ತುಗಳ ಪೈಕಿ ಒಂದು ಉಂಗುರವನ್ನು ತನ್ನಲ್ಲೇ ಉಳಿಸಿ ನಗರದ ಫೈನಾನ್ಸ್ವೊಂದರಲ್ಲಿ ಅಡಮಾನ ಇಟ್ಟಿದ್ದ. ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿಜು 2016ರಲ್ಲಿ ಉಪ್ಪಿನಂಗಡಿಯಲ್ಲಿ ಮನೆಯಿಂದ ಅಡಿಕೆ ಕಳವು ಮಾಡಿದ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಹೊರಬಂದಿದ್ದ.
ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





