ಮಾರುಕಟ್ಟೆಯಲ್ಲಿ ಕಸದ ರಾಶಿ: ಸಾರ್ವಜನಿಕರಿಗೆ ತೊಂದರೆ
ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ಗ್ರಾಪಂ

ಸುಂಟಿಕೊಪ್ಪ, ಅ.25: ಇಲ್ಲಿಗೆ ಸಮೀಪದ ಮಾದಾಪುರದ ಮಾರುಕಟ್ಟೆಯು ಕಸದ ರಾಶಿಯಿಂದ ಕೂಡಿದ್ದು, ಸಾರ್ವಜನಿಕರು ಗ್ರಾಮ ಪಂಚಾಯತ್ನ ಕಾರ್ಯ ವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಾದಾಪುರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಪ್ರತೀ ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆಯ ಕಸಗಳು, ತರಕಾರಿಗಳನ್ನು ಅಲ್ಲೆ ಹಿಂಭಾಗಕ್ಕೆ ಎಸೆದು ಹೋಗುವುದಲ್ಲದೆ ಕೆಲವೊಂದು ತ್ಯಾಜ್ಯ ವಸ್ತುಗಳನ್ನು ಅದೇ ಜಾಗದಲ್ಲಿ ಹಾಕುವಂತಹ ದೃಶ್ಯ ಕಂಡುಬಂದಿದೆ.
ಈ ಭಾಗದಲ್ಲಿ ಹಲವಾರು ವಾಸದ ಮನೆಗಳಿದ್ದು, ಆ ಕಸದ ರಾಶಿಯಿಂದಾಗಿ ಇಲಿ ಹೆಗ್ಗಣಗಳ ಹಾವಳಿ ಹೆಚ್ಚಾಗಿ ಮನೆಯ ಗೋಡೆಗಳನ್ನು ಕೊರೆಯುವುದು, ಗಿಡಗಳನ್ನು ನಾಶಮಾಡುತ್ತಿವೆ. ಅಲ್ಲದೆ ಆ ಕಸದ ರಾಶಿಯಿಂದಾಗಿ ಆ ಭಾಗ ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಇಲ್ಲಿನ ಗ್ರಾಮ ಪಂಚಾಯತ್ಗೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ತನಗೆ ಸಂಬಂಧವೇ ಇಲ್ಲವೆಂಬಂತೆ ಕೈ ಕಟ್ಟಿ ಕುಳಿತಿರುವುದು ವಿಪರ್ಯಾಸವೇ ಸರಿ.
ಕೂಡಲೇ ಸಂಬಂಧಪಟ್ಟ ಗ್ರಾಪಂ ಕಸದ ವಿಲೆವಾರಿ ಮಾಡಿಕೊಟ್ಟು ಸ್ವಚ್ಛತೆಗೆ ಆದ್ಯತೆ ನೀಡಲಿ ಎಂಬುದು ಗ್ರಾಮಸ್ಥರ ಮನವಿಯಾಗಿದೆ.





