ಟಿಪ್ಪುಜಯಂತಿಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವಿರೋಧ
ಮೂಡುಬಿದಿರೆ, ಅ.26: ದೇಶಕ್ಕಾಗಿ ಯಾವುದೇ ಕೊಡುಗೆ ನೀಡದ ಮತ್ತು ಕನ್ನಡಿಗರಿಗೂ ಯಾವುದೇ ರೀತಿಯ ಕೊಡುಗೆಯನ್ನು ನೀಡದ, ಮುಸ್ಲಿಂ ಸಮುದಾಯದ ಓಟಿನ ಬೇಟೆಗಾಗಿ ಟಿಪ್ಪು ಜಯಂತಿಯನ್ನು ಸಾರ್ವಜನಿಕರ ಹಣದಿಂದ ಕಾಂಗ್ರೆಸ್ ಸರಕಾರ ಆಚರಿಸಲು ಸಿದ್ಧತೆ ನಡೆಸಿರುವುದಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಖಂಡಸಿ, ವಿರೋಧ ವ್ಯಕ್ತಪಡಿಸುತ್ತದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೋಯ್ಲಸ್ ಡಿಸೋಜ ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಈ ಆಚರಣೆಯಿಂದಾಗಿ ರಾಜ್ಯಾದ್ಯಂತ ಅರಾಜಕತೆ ನಿರ್ಮಾಣವಾಗಿತ್ತು. ಕೊಲೆ, ಸುಲಿಗೆ, ಲಾಠಿ ಚಾರ್ಜ್ ನಡೆದು ಕನ್ನಡಿಗರು ಸಂಕಟ ಪಡುವಂತಾಗಿತ್ತು. ಜನ ವಿರೋಧಿ ನೀತಿಯನ್ನು ಹೊಂದಿರುವ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಿಸುವ ಬದಲು ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ ಜಯಂತಿಯನ್ನು ಆಚರಣೆ ಮಾಡಲು ರಾಜ್ಯ ಸರಕಾರ ಯೋಜನೆ ಹಾಕಿಕೊಳ್ಳುತ್ತಿದ್ದರೆ ಬಹುಶ: ರಾಜ್ಯದ ಜನ ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದರು ಎಂದು ಹೇಳಿದ ಅವರು ಕ್ರೈಸ್ತ ಜನಾಂಗವು ಜನಪ್ರತಿನಿಧಿಗಳ ಮತ್ತು ಸಂಘಸಂಸ್ಥೆಗಳು ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಜನ ವಿರೋಧಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ರಾಜ್ಯ ಸರಕಾರದ ಮೇಲೆ ಪ್ರಬಾವ ಬೀರುವಂತೆ ಒತ್ತಾಯಿಸುತ್ತೇನೆಂದು ಜೊಯ್ಲೆಸ್ ತಿಳಿಸಿದರು.
ಅಲ್ಪ ಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಜೋಕಿಂ ಡಿಕೋಸ್ತಾ, ಬಿಜೆಪಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಕಾರ್ಯದರ್ಶಿಗಳಾದ ಜಾನ್ಸಿ ಮೆಂಡೋನ್ಸ ಮತ್ತು ಮುಹಮ್ಮದ್ ಆರಿಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಗೋವು ವಿತರಣೆ ಜನ ಮರುಳು ಕಾರ್ಯಕ್ರಮ
ಕಾಂಗ್ರೆಸಿಗರು ಜಿಲ್ಲೆಯ ಆಯ್ದ ಕೆಲವು ಜನರಿಗೆ ಗೋಪೂಜೆಯ ದಿನ ಮೂಡುಬಿದಿರೆಯಲ್ಲಿ ಗೋವುಗಳನ್ನು ನೀಡುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ, ಓಟಿನ ಗಿಮಿಕ್ಗಾಗಿ ಕಾಂಗ್ರೆಸ್ ಜನರನ್ನು ಮರುಳು ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಾಧ್ಯಮ ವರದಿಗಾರರಲ್ಲಿ ಜೊಯ್ಲೆಸ್ ತಿಳಿಸಿದ್ದಾರೆ.
ಗೋವುಗಳ ಬಗ್ಗೆ ಮತ್ತು ಹೈನುಗಾರಿಕೆಯ ಬಗ್ಗೆ ಕಾಳಜಿ ಇದ್ದರೆ ಹೈನುಗಾರಿಕೆಗೆ ಸಬ್ಸಿಡಿ ನೀಡಲಿ. ಹಾಲಿಗೆ ನೀಡಿರುವ ಸಬ್ಸಿಡಿಯನ್ನೇ ಸರಕಾರ ಸರಿಯಾಗಿ ನೀಡುತ್ತಿಲ್ಲ. ಅಲ್ಲದೆ ಈಗಾಗಲೇ ಹಿಂಡಿಗೆ 30-40 ರೂ.ನ್ನು ಹೆಚ್ಚಿಸಿದೆ. ಕೃಷಿಕರ ಬಗ್ಗೆ ಕಾಳಜಿ ಇದ್ದರೆ ಸರಕಾರ ಸಬ್ಸಿಡಿಯನ್ನು ಘೋಷಿಸಲಿ ಎಂದು ಸವಾಲು ಹಾಕಿದರು.