ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕರ ಪಾತ್ರ ಮುಖ್ಯ: ಎಸ್ಪಿ ಬಾಲಕೃಷ್ಣ
![ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕರ ಪಾತ್ರ ಮುಖ್ಯ: ಎಸ್ಪಿ ಬಾಲಕೃಷ್ಣ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕರ ಪಾತ್ರ ಮುಖ್ಯ: ಎಸ್ಪಿ ಬಾಲಕೃಷ್ಣ](https://www.varthabharati.in/sites/default/files/images/articles/2016/10/26/UD-O26-HOME-GAURD.jpg)
ಉಡುಪಿ, ಅ.26: ಗೃಹ ರಕ್ಷಕ ದಳದ ಸಿಬ್ಬಂದಿಗಳು ಇತರ ಇಲಾಖೆ ಗಳಿಗಿಂತ ಪೊಲೀಸ್ ಇಲಾಖೆಗೆ ಅತಿ ಅಗತ್ಯವಾಗಿದ್ದು, ವಾಹನ ಸಂಚಾರ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.
ಉಡುಪಿಯ ಚಂದು ಮೈದಾನದಲ್ಲಿ ಬುಧವಾರ ನಡೆದ ಉಡುಪಿ ಜಿಲ್ಲಾ ಗೃಹರಕ್ಷಕ ದಳದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಹೆಚ್ಚಿನ ಪೊಲೀಸ್ ಠಾಣೆಗಳಲ್ಲಿ ಖಾಲಿ ಹುದ್ದೆಗಳು ಸಾಕಷ್ಟು ಇದ್ದು, ಅಂತಹ ಸ್ಥಳಗಳಿಗೆ ಸರಕಾರ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನೇಮಕ ಮಾಡಿ ಕೊಳ್ಳುತ್ತಿದೆ. ಜಿಲ್ಲೆಯ ಘಟಕಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದೆ ಪೊಲೀಸ್ ಇಲಾಖೆಗೆ ಇನ್ನಷ್ಟು ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ವಹಿಸಿದ್ದರು. ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಿರೀಕ್ಷಕ ರಾಘವೇಂದ್ರ ಉಪಸ್ಥಿತರಿದ್ದರು. ತರಬೇತಿ ಪಡೆದ ಗೃಹರಕ್ಷಕ ದಳದ ಸಿಬ್ಬಂದಿ ಗಳಿಗೆ ಪ್ರಮಾಣಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಡೆಪ್ಯುಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ ವಂದಿಸಿದರು. ಕಾರ್ಕಳ ಘಟಕಾಧಿಕಾರಿ ಪ್ರಭಾಕರ ಸುವರ್ಣ ಪ್ರತಿಜ್ಞಾ ವಿಧಿ ಬೋಧಿಸಿದರು. ಕ್ಯಾಂಪ್ ಕಮಾಂಡೆಂಟ್ ಸ್ವೀವನ್ ಪ್ರಕಾಶ್ ಪರೆಡ್ನ ನೇತೃತ್ವವನ್ನು ವಹಿಸಿದ್ದರು. ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಎನ್. ಕಾರ್ಯಕ್ರಮ ನಿರೂಪಿಸಿ ದರು.
10 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ನೂತನವಾಗಿ ಗೃಹರಕ್ಷಕ ದಳಕ್ಕೆ ಸೇರ್ಪಡೆಗೊಂಡ 50 ಮಂದಿ ಪ್ರಾಥಮಿಕ ಹಂತದ ತರಬೇತಿ ಪಡೆದರು. ಇವರು ಮುಂದಿನ ತರಬೇತಿಯನ್ನು ಬೆಂಗಳೂರಿನಲ್ಲಿರುವ ಗೃಹರಕ್ಷಕ ದಳದ ಕೇಂದ್ರ ಕಚೇರಿಯಲ್ಲಿ ಪಡೆಯಲಿದ್ದಾರೆ.