ಉಡುಪಿ ಸರಕಾರಿ ಆಸ್ಪತ್ರೆಯ ಖಾಸಗೀಕರಣ ವಿರೋಧಿಸಿ ಅ.28ರಂದು ಪ್ರತಿಭಟನೆ
ಉಡುಪಿ, ಅ.27: ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿದ ಭೂಮಿಯಲ್ಲಿರುವ ಉಡುಪಿ ಸರಕಾರಿ ಮಕ್ಕಳ ಮತ್ತು ಮಹಿಳೆಯರ ಹೆರಿಗೆ ಆಸ್ಪತ್ರೆಯ ಖಾಸಗೀಕರಣವನ್ನು ವಿರೋಧಿಸಿ ಉಡುಪಿಯ ಸರಕಾರಿ ಮಕ್ಕಳ ಹಾಗೂ ಮಹಿಳಾ ಹೆರಿಗೆ ಆಸ್ಪತ್ರೆ ರಕ್ಷಣಾ ನಾಗರಿಕ ಒಕ್ಕೂಟವು ಅ.28ರಂದು ಸಂಜೆ 4ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ನಗರದ ಜೋಡುಕಟ್ಟೆಯಿಂದ ಹೊರಡುವ ಮೌನ ಮೆರವಣಿಗೆಯು ಕೆ.ಎಂ.ಮಾರ್ಗವಾಗಿ ಸರ್ವಿಸ್ ಬಸ್ನಿಲ್ದಾಣದ ಕ್ಲಾಕ್ ಟವರ್ ಎದುರು ಸಮಾಪ್ತಿಗೊಳ್ಳಲಿದೆ. ಬಳಿಕ ಅಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳ ಲಾಗಿದೆ. ಜಿಲ್ಲೆಯ ಜನರು ಮಾತ್ರವಲ್ಲದೆ ವಲಸೆ ಕಾರ್ಮಿಕರು ಮತ್ತು ಇತರ ಜಿಲ್ಲೆಗಳ ಜನರಿಗೂ ಸೇವೆ ನೀಡುತ್ತಿರುವ ಈ ಆಸ್ಪತ್ರೆಯನ್ನು ಉಳಿಸುವಲ್ಲಿ ಸಾರ್ವಜನಿಕರು ಕೈ ಜೊಡಿಸಬೇಕೆಂದು ಒಕ್ಕೂಟ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ಬೆಂಬಲ
ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರಕಾರ ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ವಿರುದ್ಧ ನಾಳೆ ನಡೆಯುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿರುವ ಈ ಜಾಗವನ್ನು ಸರಕಾರ ಖಾಸಗಿಯವರಿಗೆ ನೀಡಬಾರದು. ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ನಾಳೆ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಒಕ್ಕೂಟ ಹೇಳಿಕೆಯಲ್ಲಿ ವಿನಂತಿಸಿದೆ.







