ಸನಾತನ ಸಂಸ್ಥೆ ನಿಷೇಧಕ್ಕೆ ಇರುವ ಅಡ್ಡಿ ಯಾವುದು?

ಈ ದೇಶದಲ್ಲಿ ಜನಸಾಮಾನ್ಯರ ಹಕ್ಕುಗಳಿಗಾಗಿ, ಪರಿಸರಕ್ಕಾಗಿ ಹೋರಾಡುವ ಸರಕಾರೇತರ ಸಂಸ್ಥೆಗಳ ನಿಷೇಧಗಳಿಗಾಗಿ ಕಾರಣಗಳನ್ನು ಭೂತಗನ್ನಡಿಯಿಟ್ಟು ಹುಡುಕುವ ಕೇಂದ್ರ ಸರಕಾರಕ್ಕೆ ಈಗಾಗಲೇ ಹಲವು ಕುಖ್ಯಾತಿಗಳಿಗಾಗಿ ಗುರುತಿಸಲ್ಪಟ್ಟಿರುವ ಸನಾತನ ಸಂಸ್ಥೆಯ ನಿಷೇಧಕ್ಕೆ ಕಾರಣಗಳೇ ಸಿಕ್ಕಿಲ್ಲವಂತೆ. ಹಾಗೆಂದು ಅದು ಮುಂಬೈ ಹೈಕೋರ್ಟಿಗೆ ಅರಿಕೆ ಮಾಡಿಕೊಂಡಿದೆ. ‘ಖ್ಯಾತ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಸಂಚು ನಡೆಸಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಗೋವಾದ ಸನಾತನ ಸಂಸ್ಥೆಯ ಮೇಲೆ ನಿಷೇಧ ಹೇರುವ ಬಗ್ಗೆ ಯಾವುದೇ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ. ಹೀಗಾಗಿ ಸಂಸ್ಥೆಯ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅನ್ವಯ ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರಕಾರ ಬಾಂಬೆ ಹೈಕೋರ್ಟಿಗೆ ತಿಳಿಸಿದೆ. ಸನಾತನ ಸಂಸ್ಥೆ ದೇಶದಲ್ಲಿ ನಡೆಸುತ್ತಿರುವ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ಮುಂದಿಟ್ಟು ವಿಜಯ ರೋಖಡೆ ಎಂಬವರು ಆ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಕೇಂದ್ರ ಸರಕಾರದ ಅಭಿಪ್ರಾಯವನ್ನು ಹೈ ಕೋರ್ಟ್ ಕೇಳಿದಾಗ, ಸನಾತನ ಸಂಸ್ಥೆ ಅದಾವುದೋ ಸಾಮಾಜಿಕ ಸಂಘಟನೆಯೆಂಬಂತೆ ತನ್ನ ಪ್ರೀತಿಯನ್ನು ಅದರ ಮೇಲೆ ಸುರಿಸಿದೆ. ನಡು ಸಭೆಯಲ್ಲಿ ತನ್ನ ಮಕ್ಕಳು ದ್ರೌಪದಿಯ ಸೀರೆಯನ್ನು ಎಳೆಯುತ್ತಿದ್ದರೂ, ಏನೂ ತಿಳಿಯದವನಂತೆ ವರ್ತಿಸಿದ ದೃತರಾಷ್ಟ್ರನಂತೆ ಕೇಂದ್ರ ಸರಕಾರ ತನ್ನ ಅಭಿಪ್ರಾಯವನ್ನು ಮಂಡಿಸಿದೆ. ಧೃತರಾಷ್ಟ್ರನ ಕುರುಡು ಅಂತಿಮವಾಗಿ ಅವನ ನಾಡಿಗೂ, ಅವನ ಮಕ್ಕಳಿಗೂ ಯಾವುದೇ ಒಳಿತನ್ನು ಮಾಡಲಿಲ್ಲ. ಸನಾತನ ಸಂಸ್ಥೆಯ ಕುರಿತಂತೆ ಸರಕಾರ ನಟಿಸಿರುವ ಕುರುಡುತನದ ಫಲವೂ ಅಂತಿಮವಾಗಿ ಇದೇ ಆಗಿದೆ.
ಸನಾತನ ಸಂಸ್ಥೆ ದೇಶದಲ್ಲಿ ನಡೆಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಮೊದಲು ಬಹಿರಂಗಪಡಿಸಿರುವುದು ಹೇಮಂತ್ ಕರ್ಕರೆ ಮತ್ತು ಅವರ ಸಹಚರರು. ಆದರೆ ಅಂತಿಮವಾಗಿ ಅವರ ತನಿಖೆಯೇ ಅವರನ್ನು ನಿಗೂಢವಾಗಿ ಬಲಿತೆಗೆದುಕೊಂಡಿತು. ಅವರ ತನಿಖೆಯನ್ನೇ ಆಧಾರವಾಗಿಟ್ಟುಕೊಂಡು ನಡೆದ ತನಿಖೆಗಲು ಅಂತಿಮವಾಗಿ ಈ ದೇಶದಲ್ಲಿ ಮಾಲೆಗಾಂವ್, ಅಜ್ಮೀರ್, ಸಂಜೋತಾ ಸ್ಫೋಟಗಳನ್ನು ನಡೆಸಿದ ಸ್ವದೇಶಿ ಉಗ್ರರ ಹೆಸರುಗಳನ್ನು ಬಹಿರಂಗಗೊಳಿಸಿತು. ಅವರು ಯಾವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನೂ ತನಿಖಾ ಸಂಸ್ಥೆ ಬಹಿರಂಗ ಪಡಿಸಿತು. ಅವರು ನಡೆಸಿದ ಅನಾಹುತಗಳು ಭಾರತ-ಪಾಕಿಸ್ತಾನ ದೇಶಗಳ ಮೇಲೆ ಮಾತ್ರವಲ್ಲ, ಭಾರತ ಉಪಖಂಡದ ಮೇಲೆಯೇ ಆತಂಕದ ನೆರಳುಗಳನ್ನು ಹರಡಿತ್ತು. ಆ ಸಂಸ್ಥೆಯ ಹೆಸರು ಬಹಿರಂಗವಾದ ಬೆನ್ನಿಗೇ ಅದರ ಮೇಲೆ ನಿಷೇಧ ಹೇರುವುದು ಸರಕಾರದ ಕರ್ತವ್ಯವಾಗಿತ್ತು. ಆ ಮೂಲಕ, ಯಾವುದೇ ರೀತಿಯ ಉಗ್ರವಾದವನ್ನೂ ನಾನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸರಕಾರ ವಿಶ್ವಕ್ಕೆ ನೀಡಬೇಕಾಗಿತ್ತು. ತನ್ನ ದೇಶದ ವಿರುದ್ಧವೇ ಸ್ಫೋಟ ನಡೆಸುವ ಸನಾತನ ಸಂಸ್ಥೆಯ ಉದ್ದೇಶ ನಿಗೂಢವಾದುದೇನೂ ಅಲ್ಲ. ಅಜ್ಮೀರ್, ಮಕ್ಕಾ ಮಸೀದಿ ಮೊದಲಾದೆಡೆ ಸ್ಪೋಟ ನಡೆಸಿ ಅದನ್ನು ಈ ದೇಶದ ಅಮಾಯಕ ಮುಸ್ಲಿಮರ ತಲೆಗೆ ಕಟ್ಟಿ ಅವರು ಜೈಲು ಸೇರುವಂತೆ ಮಾಡಿದ್ದು ಸನಾತನ ಸಂಸ್ಥೆ. ಈ ದೇಶದ ವ್ಯವಸ್ಥೆಯ ಕುರಿತಂತೆ ದೇಶಾದ್ಯಂತ ಮುಸ್ಲಿಮರಲ್ಲಿ ಅಸಹನೆಯನ್ನು ಬಿತ್ತುವಲ್ಲಿ ಸನಾತನಸಂಸ್ಥೆಯ ಪಾತ್ರ ಬಹುದೊಡ್ಡದಿದೆ. ಪರಸ್ಪರ ಅಪನಂಬಿಕೆಗಳನ್ನು ಹುಟ್ಟಿಸಿ ಧರ್ಮಗಳ ಆಧಾರದಲ್ಲಿ ದೇಶವನ್ನು ವಿಭಜಿಸುವುದು, ದೇಶವನ್ನು ವಿಚ್ಛಿದ್ರಗೊಳಿಸುವುದು ಅವರ ದುರುದ್ದೇಶ. ಅವರು ಮಾಡಿರುವ ಸ್ಫೋಟಗಳ ಪರಿಣಾಮಗಳಿಗಿಂತಲೂ ಬಹುದೊಡ್ಡ ದುರುದ್ದೇಶ, ಈ ದೇಶವನ್ನು ಅಪನಂಬಿಕೆಗಳ ಮೂಲಕ ಚೂರು ಚೂರು ಮಾಡುವುದಾಗಿದೆ. ಯಾವುದೋ ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಐಸಿಸ್ನಂತಹ ಸಂಘಟನೆಗಳು ಇಂತಹ ಕೃತ್ಯಗಳನ್ನು ಮಾಡಿದರೆ ಅವರನ್ನು ವಿದೇಶಿ ಉಗ್ರರು ಎಂದು ಎದುರಿಸಬಹುದು. ಆದರೆ ಇವರೋ, ನಮ್ಮದೇ ದೇಶವಾಸಿಗಳ ವೇಷಹಾಕಿಕೊಂಡು, ಭಾಷೆ, ಸಂಸ್ಕೃತಿಯನ್ನು ಬಳಸಿಕೊಂಡು ನಮ್ಮದೇ ದೇಶದ ವಿರುದ್ಧ ಯುದ್ಧ ಹೂಡಿದ್ದಾರೆ. ಈ ದೇಶದ ಜನಪರ ಹೋರಾಟಗಾರರಲ್ಲಿ ದೇಶದ್ರೋಹಗಳನ್ನು ಗುರುತಿಸಲು ಸಾಧ್ಯವಾಗುವ ಕೇಂದ್ರ ಸರಕಾರಕ್ಕೆ ಈ ಉಗ್ರ ಸಂಘಟನೆಗಳಲ್ಲಿ ದೇಶದ್ರೋಹದ ಅಂಶಗಳನ್ನು ಕಂಡುಕೊಳ್ಳಲು ಸಾಧ್ಯವಾಗದೇ ಇರುವುದು ದೇಶದ ವರ್ತಮಾನದ ಬಹುದೊಡ್ಡ ದುರಂತವಾಗಿದೆ.
ವಿಪರ್ಯಾಸದ ಸಂಗತಿಯೆಂದರೆ, ತನ್ನದೇ ಕಾಲ ಬುಡದಲ್ಲಿ, ತನ್ನದೇ ದೇಶದ ವಿರುದ್ಧ ತನ್ನವರ ವೇಷದಲ್ಲೇ ಇರುವ ಉಗ್ರರನ್ನು ಉಗ್ರರೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ, ಉಗ್ರ ಸಂಘಟನೆಗಳನ್ನು ನಿಷೇಧಿಸಲು ಸಿದ್ಧವಿಲ್ಲದ ಮೋದಿ ಸರಕಾರ;ಪಾಕಿಸ್ತಾನಕ್ಕೆ, ಚೀನಾಕ್ಕೆ ಅಲ್ಲಿರುವ ಉಗ್ರವಾದಿಗಳನ್ನು ನಿಯಂತ್ರಿಸಲು ಆಗ್ರಹಿಸುತ್ತಿದೆ. ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರುತಿಸಿ ಅವರನ್ನು ಮಟ್ಟ ಹಾಕಬೇಕು, ಭಾರತಕ್ಕೆ ಒಪ್ಪಿಸಬೇಕು ಎಂದು ಹೇಳುತ್ತಿದೆ. ಪಾಕಿಸ್ತಾನದ ಉಗ್ರವಾದಿಗಳಿಗೆ ಚೀನಾ ಬೆಂಬಲ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಆರೋಪಿಸುತ್ತಿದೆ. ಆರೋಪಗಳಲ್ಲಿ ನಿಜವೇನೋ ಇದೆ. ಆದರೆ ಇದೇ ಸಂದರ್ಭದಲ್ಲಿ ತನ್ನ ದೇಶದೊಳಗಿರುವ ಭಯೋತ್ಪಾದಕರನ್ನುಮಟ್ಟ ಹಾಕಲು ಮೋದಿ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ? ತನ್ನ ದೇಶದೊಳಗಿರುವ ಭಯೋತ್ಪಾದಕರನ್ನು ಹಾಲೂಡಿ ಸಾಕುತ್ತಿರುವ ನಮ್ಮ ಸರಕಾರಕ್ಕೆ ವಿದೇಶಿ ಉಗ್ರರ ಬಗ್ಗೆ ಮಾತನಾಡುವ ನೈತಿಕ ಹಕ್ಕಾದರೂ ಹೇಗೆ ಬರುತ್ತದೆ? ಉಗ್ರವಾದಿಗಳ ಕುರಿತಂತೆ ಕೇಂದ್ರ ಸರಕಾರ ಹೊಂದಿರುವ ಇಂತಹ ದ್ವಂದ್ವ ನಿಲುವುಗಳೇ, ಅದರ ದೌರ್ಬಲ್ಯಗಳಾಗಿವೆ. ಆದುದರಿಂದಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಿ ಉಗ್ರರ ವಿರುದ್ಧ ಅಭಿಪ್ರಾಯವನ್ನು ರೂಪಿಸಲು ಭಾರತ ವಿಫಲವಾಗುತ್ತಿದೆ. ಮೊದಲು ಆತ್ಮವಿಮರ್ಶೆ ನಡೆದ ಬಳಿಕವಷ್ಟೇ ಪರರ ವಿಮರ್ಶೆ ನಡೆಯಬೇಕು. ಭಾರತ ಉಗ್ರವಾದಿಗಳ ವಿರುದ್ಧ, ಭಯೋತ್ಪಾದಕರ ವಿರುದ್ಧ ನಿಜಕ್ಕೂ ಸ್ಪಷ್ಟ ನಿಲುವನ್ನು ಹೊಂದಿದೆ ಎಂದಾದರೆ ಭಾರತದೊಳಗಿರುವ ಉಗ್ರವಾದಿಗಳನ್ನು, ಅವರು ಯಾವ ಧರ್ಮದ ಹೆಸರಲ್ಲೇ ಸಂಘಟಿತವಾಗಿರಲಿ ಬಗ್ಗು ಬಡಿಯಬೇಕು. ಇದು ವಿಶ್ವಕ್ಕೂ ಭಯೋತ್ಪಾದನೆಯ ಕುರಿತಂತೆ ತನ್ನ ನಿಲುವನ್ನು ಸಾಬೀತು ಪಡಿಸುವುದಕ್ಕೆ ಸರಕಾರಕ್ಕಿರುವ ಅವಕಾಶವಾಗಿದೆ. ಈ ನಿಟ್ಟಿನಲ್ಲಿ, ಸನಾತನಸಂಸ್ಥೆಯನ್ನು ನಿಷೇಧಿಸಲು ಮತ್ತು ಅದರ ಕಾರ್ಯಕರ್ತರನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿಯಲ್ಲಿ ಬಂಧಿಸಲು ಸರಕಾರ ಹಿಂದೇಟು ಹಾಕಲೇ ಬಾರದು.







