ಉಚ್ಚಾಟಿತ ಶಾಸಕರ ಮರು ಸೇರ್ಪಡೆ ಅಸಾಧ್ಯ: ದೇವೇಗೌಡ
ಸುದ್ದಿಗೋಷ್ಠಿ,

ಶಿವಮೊಗ್ಗ, ಅ. 28: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಮೇರೆಗೆ ಉಚ್ಚಾಟಿಸಲಾಗಿರುವ 9 ಶಾಸಕರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಮುಗಿದ ಅಧ್ಯಾಯ ಎಂದು ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪಕ್ಷವನ್ನು ನಿರ್ನಾಮ ಮಾಡಬೇಕೆಂದು ಹೊರಟವರಿಗೆ ಸರಿಯಾದ ಪಾಠ ಕಲಿಸಲಾಗಿದೆ. ಪಕ್ಷದ ಸಂಘಟನೆಯ ಹೆಸರಿನಲ್ಲಿ ಮತ್ತೆ ಅವರನ್ನು ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಪಕ್ಷ ಸಂಘಟಿಸಲು ಉತ್ತಮ ಕಾರ್ಯಕರ್ತರು ಸಾಕು ಎಂದು ತಿಳಿಸಿದ್ದಾರೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪಕ್ಷ ಬಲಿಷ್ಠವಾಗಿಲ್ಲ. ಇಲ್ಲಿ ಪಕ್ಷವನ್ನು ಕಟ್ಟಲು ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸತತವಾಗಿ ರಾಜ್ಯ ಪ್ರವಾಸ ಮಾಡುವ ಮೂಲಕ ಎಲ್ಲ ಜಿಲ್ಲೆಯಲ್ಲಿ ಪಕ್ಷ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವಂತೆ ಮಾಡಲಾಗುವುದು ಎಂದರು.
ಕೇಂದ್ರದಲ್ಲಿರುವ ಸರಕಾರಗಳು ಸಿಬಿಐಯನ್ನು ಬಹು ಹಿಂದಿನಿಂದಲೂ ದುರುಪಯೋಗ ಪಡಿಸಿಕೊಳ್ಳುತ್ತಲೇ ಬರುತ್ತಿವೆ.
ಆ ಸಂಸ್ಥೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಇದರಿಂದ ಭ್ರಷ್ಟಾಚಾರದ ಆರೋಪ ಹೊತ್ತ ರಾಜಕಾರಣಿಗಳು ಸುಲಲಿತವಾಗಿ ಹೊರಬರುತ್ತಿದ್ದಾರೆ. ಭ್ರಷ್ಟರಿಗೆ ಸಿಬಿಐ ಹೆದರಿಕೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರತಿ ಘಟನೆಯನ್ನು ಸಿಬಿಐಗೆ ವಹಿಸಿ ಎಂಬ ಕೂಗು ಹಾಕಲಾಗುತ್ತಿದೆ ಎಂದರು.
ನ್ಯಾಯಾಲಯದ ಇತ್ತೀಚಿನ ಕೆಲವು ತೀರ್ಪುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರಿಯಾದ ತೀರ್ಪು ಕೊಡುವವರಿಲ್ಲ. ಇದರಿಂದ ನ್ಯಾಯಾಂಗವನ್ನು ಸಹ ಸಾರ್ವತ್ರಿಕವಾಗಿ ಟೀಕಿಸುವ ಸಂದರ್ಭ ಎದುರಾಗಿದೆ. ಇದಕ್ಕೆ ಯಾರೊಬ್ಬರನ್ನೂ ದೂಷಿಸಲು ಸಾಧ್ಯವಿಲ್ಲ. ಇಡೀ ವ್ಯವಸ್ಥೆಯನ್ನು ಸುಧಾರಿಸಬೇಕಾದ ಕೆಲಸವಾಗಬೇಕು ಎಂದು ತಿಳಿಸಿದರು.
ರಾಜ್ಯದ ಹಿತರಕ್ಷಣೆಯನ್ನು ಕಾಪಾಡಲು ಪ್ರಾದೇಶಿಕ ಪಕ್ಷಗಳು ಆವಶ್ಯಕವಾಗಿವೆ. ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಹೆಸರಿನಲ್ಲಿ ನಿಯಂತ್ರಿಸಲ್ಪಡುತ್ತ, ರಾಷ್ಟ್ರೀಯ ಹಿತವನ್ನು ಗಮನಿಸುತ್ತಿದೆ.
ಇದರಿಂದ ಎಲ್ಲ ರಾಜ್ಯಗಳೂ ನ್ಯಾಯ ಸಿಗದೆ ಪರದಾಡುವಂತಾಗಿದೆ. ಕಾವೇರಿ ವಿಚಾರ, ಮಹಾದಾಯಿ ಸಮಸ್ಯೆ ಇವುಗಳ ಪರಿಹಾರಕ್ಕೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಗೋಷ್ಠಿಯಲ್ಲಿ ಶಾಸಕರಾದ ಮಧು ಬಂಗಾರಪ್ಪ, ಶಾರದಾ ಪೂರ್ಯನಾಯ್ಕಿ, ಎಂ.ಶ್ರೀಕಾಂತ್, ಮಾದಪ್ಪಉಪಸ್ಥಿತರಿದ್ದರು.







