ನನ್ನ ಸರಕಾರ ಖಾಸಗೀಕರಣದ ಪರವಾಗಿಲ್ಲ: ಮುಖ್ಯಮಂತ್ರಿ ಸ್ಪಷ್ಟನೆ
![ನನ್ನ ಸರಕಾರ ಖಾಸಗೀಕರಣದ ಪರವಾಗಿಲ್ಲ: ಮುಖ್ಯಮಂತ್ರಿ ಸ್ಪಷ್ಟನೆ ನನ್ನ ಸರಕಾರ ಖಾಸಗೀಕರಣದ ಪರವಾಗಿಲ್ಲ: ಮುಖ್ಯಮಂತ್ರಿ ಸ್ಪಷ್ಟನೆ](https://www.varthabharati.in/sites/default/files/images/articles/2016/10/30/UD-O30-UDUPI-CM1.jpg)
ಉಡುಪಿ, ಅ.30: ನನ್ನ ಸರಕಾರ ಖಾಸಗೀಕರಣದ ಪರವಾಗಿ ಇಲ್ಲ. ಆರೋಗ್ಯ ಸೇರಿದಂತೆ ಯಾವುದೇ ಕ್ಷೇತ್ರವನ್ನು ನಾವು ಖಾಸಗೀಕರಣ ಮಾಡಲು ಹೊರಟಿಲ್ಲ. ಮುಂದೆ ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಬಿ.ಆರ್.ಎಸ್.ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುವ ‘ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯ ಶಂಕುಸ್ಥಾಪನೆ ನೆರವೇರಿಸಿದ ಅಜ್ಜರಕಾಡಿನ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ಈಗ ನಿರ್ಮಾಣಗೊಳ್ಳುವ ಆಸ್ಪತ್ರೆಯ ಕುರಿತಂತೆ ಜನರಿಗೆ ಕೆಲವು ಸಂದೇಹಗಳಿವೆ. ಅದು ಮಾಹಿತಿಯ ಕೊರತೆಯಿಂದ ಆಗಿರುವುದು. ಇನ್ನು ಕೆಲವು ರಾಜಕೀಯ ಕಾರಣಗಳಿಗಾಗಿ ಪ್ರತಿಭಟನೆ, ಹೋರಾಟ ನಡೆಸುತಿದ್ದಾರೆ. ಆದರೆ ಇಲ್ಲೀಗ ನಡೆದಿರುವ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮ. ಈಗಿನ 70 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯಲಿದೆ. ಬಿ.ಆರ್.ಶೆಟ್ಟಿ ಅವರು ತನ್ನದೇ ದುಡ್ಡಿನಲ್ಲಿ 200 ಹಾಸಿಗೆಗಳ ವಿಶಾಲ, ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ಇಲ್ಲಿ ಈಗಿರುವಂತೆ ಎಲ್ಲವೂ ಉಚಿತವಾಗಿಯೇ ದೊರಕಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ರಾಜ್ಯ ಸರಕಾರ ವರ್ಷಕ್ಕೆ 1.63 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಇದರಲ್ಲಿ ಆರೋಗ್ಯ ಕ್ಷೇತ್ರಕ್ಕೆ 6ರಿಂದ 7 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸುತ್ತೇವೆ. ಇದು ಬಡವರ ಪರವಾಗಿ ಸರಕಾರಕ್ಕಿರುವ ಕಾಳಜಿಗೆ ನಿದರ್ಶನ. ಅಲ್ಲದೇ ಜನರ ಆರೋಗ್ಯದ ದೃಷ್ಠಿಯಿಂದ ವರ್ಷಕ್ಕೆ 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದೇವೆ ಎಂದರು.
ಬಡ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯಕ್ಕೆ ಸರಕಾರ ಪ್ರಥಮ ಆದ್ಯತೆ ನೀಡುತ್ತಿದೆ. ನಾವು ಖಾಸಗೀಕರಣದ ಪರವಾಗಿಲ್ಲದಿದ್ದರೂ, ಎಲ್ಲವನ್ನೂ ಸರಕಾರವೇ ಮಾಡಲಾಗುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಅವರಾಗಿಯೇ ಮುಂದೆ ಬರುವ ಖಾಸಗಿಯವರೊಂದಿಗೆ ಸೇರಿ ಸರಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತೇವೆ. ಖಾಸಗಿಯವರ ಸಹಭಾಗಿತ್ವದೊಂದಿಗೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ಸಬಲಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದರು.
ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಅವರ ಹೆತ್ತವರ ಹೆಸರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸಲು ಬಿ.ಆರ್.ಶೆಟ್ಟಿ ಮುಂದೆ ಬಂದಿದ್ದಾರೆ. ಈ ಮೂಲಕ ಅವರು ಹುಟ್ಟೂರಿನ ಋಣ ತೀರಿಸಲು ಸಂಕಲ್ಪಿಸಿದ್ದಾರೆ. ಇದು ಸಂಪೂರ್ಣ ಉಚಿತ ಸೇವೆಯ ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯುವುದು. ಯಾವುದೇ ಕಾರಣಕ್ಕೂ ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದರು.
ಅಲ್ಲದೇ ಈಗಿರುವ ಆಸ್ಪತ್ರೆಯ ಜಾಗದಲ್ಲಿ ಅವರು 400 ಹಾಸಿಗೆಗಳ ಅತ್ಯಾಧುನಿಕ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದ್ದು, ಅಲ್ಲೂ ಅಗತ್ಯವುಳ್ಳ ಬಡ ರೋಗಿಗಳಿಗೆ ಉಚಿತ ಸೇವೆ ಲಭಿಸಲಿದೆ. ಇವುಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸರಕಾರಿ ನೇಮಿತ ಅಧಿಕಾರಿಗಳ ಸಮಿತಿ ಮೇಲ್ವಿಚಾರಣೆ ನಡೆಸಲಿದೆ ಎಂದೂ ಮುಖ್ಯಮಂತ್ರಿಗಳು ಹೇಳಿದರು.
ನಮ್ಮ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಶೇ.80ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ. ನಾವು ಯಾವತ್ತೂ, ಎಲ್ಲ ಸಂದರ್ಭಗಳಲ್ಲೂ ಬಡವರ, ಹಿಂದುಳಿದವರ, ರೈತರ, ಅಲ್ಪಸಂಖ್ಯಾತರ, ಮಹಿಳೆಯರ ಪರವಾಗಿ ಕೆಲಸ ಮಾಡಿದ್ದೇವೆ ಮುಂದೆ ಮಾಡಲಿದ್ದೇವೆ ಎಂದವರು ಭರವಸೆ ನೀಡಿದರು.
ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿ.ಆರ್.ಎಸ್.ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಯ ನಡುವೆ ಆದ ‘ಒಪ್ಪಂದ ಪತ್ರ’ (ಎಂಓಯು) ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಹಾಗೂ ಬಿ.ಆರ್. ಶೆಟ್ಟಿ ಅವರು ವಿನಿಮಯ ಮಾಡಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅತಿಥಿಗಳನ್ನು ಸ್ವಾಗತಿಸುತ್ತಾ, ಇದೀಗ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ‘ಹಾಜಿ ಅಬ್ದುಲ್ಲಾ ಜಿಲ್ಲಾಸ್ಪತ್ರೆ’ ಎಂಬುದಾಗಿ ನಾಮಕರಣ ಮಾಡವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎನ್ಆರ್ಐ ಉದ್ಯಮಿಯಾಗಿರುವ, ಮಾಜಿ ನಗರಸಭಾ ಉಪಾಧ್ಯಕ್ಷ ಬಿ. ಆರ್. ಶೆಟ್ಟಿ ಪ್ರಾಸ್ತಾವಿಕ ನುಡಿಗಳಲ್ಲಿ ನಾನು ಈ ಆಸ್ಪತ್ರೆಯ ಎಲ್ಲಾ ಸೇವೆಗಳನ್ನು ಈಗಿರುವಂತೆ ಉಚಿತವಾಗಿ ನೀಡಲು ಬದ್ಧನಾಗಿರುವುದಾಗಿ ಘೋಷಿಸಿದರು.
ವೇದಿಕೆಯಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಸಚಿವ ಹಾಗೂ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ನಲ್ಲಿ ರಾಜ್ಯ ಸರಕಾರದ ಮುಖ್ಯ ಸಚೇತಕ ಐವಾನ್ ಡಿಸೋಜಾ, ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಬಿಆರ್ಎಸ್ ಸ್ವಾಸ್ಥ್ಯ ಮತ್ತು ಸಂಶೋಧನಾ ಸಂಸ್ಥೆಯ ಡಾ.ಚಂದ್ರಕಲಾ ಆರ್. ಶೆಟ್ಟಿ, ಜಿಲ್ಲಾಧಿಕಾರಿ ಟಿ ವೆಂಕಟೇಶ್, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಬಾಗಾಧಿಕಾರಿ ಅಶ್ವಥಿ, ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಉಪಸ್ಥಿತರಿದ್ದರು.
ಕರಾವಳಿಯ ಸಾಮರಸ್ಯ ಕಾಪಾಡಲು ಬದ್ಧ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ಧರ್ಮೀಯರ ಸಾಮರಸ್ಯದ ಬದುಕಿಗೆ, ಕೋಮು ಸೌಹಾರ್ದತೆಗೆ ಮೊದಲಿನಿಂದಲೂ ಹೆಸರುವಾಸಿಯಾದುದು. ಮೊಗವೀರ ಜಾತಿಯ ರಾಣಿ ಅಬ್ಬಕದೇವಿ ಹಾಗೂ ಬಪ್ಪನಾಡಿನ ದೇವಸ್ಥಾನ ಇದಕ್ಕೆ ಉದಾಹರಣೆಯಾಗಿದೆ. ಕಾಂಗ್ರೆಸ್ ಯಾವತ್ತೂ ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟ ಪಕ್ಷ. ಆದರೆ ಹಿಂದಿನ ಸರಕಾರದ ವೇಳೆ ನಾವು ಉಳ್ಳಾಲದಿಂದ ಮಲ್ಪೆಯವರೆಗೆ ‘ಸಾಮರಸ್ಯದ ನಡೆ’ ನಡೆಸಬೇಕಾಯಿತು. ಇಲ್ಲಿನ ಜನರ ಸಾಮರಸ್ಯವನ್ನು, ಸೌಹಾರ್ದ ಬದುಕನ್ನು ಹಾಳು ಮಾಡಲು ನಾವು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದರು.