ಟಿಪ್ಪು ಜಯಂತಿ ಸರಕಾರದ ಕಾರ್ಯಕ್ರಮ
ಟಿಪ್ಪು ಅಭಿಮಾನಿ ವೇದಿಕೆ

ಮಡಿಕೆೇರಿ, ಅ.30: ಟಿಪ್ಪುಸುಲ್ತಾನ್ ಕೆೇವಲ ಮುಸಲ್ಮಾನರಿಗೆ ಸೀಮಿತವಾದ ವ್ಯಕ್ತಿಯಲ್ಲವೆಂದು ಅಭಿಪ್ರಾಯಪಟ್ಟಿರುವ ಟಿಪ್ಪುಅಭಿಮಾನಿ ವೇದಿಕೆ, ಟಿಪ್ಪುಜಯಂತಿಯನ್ನು ಘೋಷಿಸಿರುವ ಸರಕಾರವೇ ಜಯಂತಿ ಆಚರಣೆಯನ್ನು ಶಾಂತಿಯುತವಾಗಿ ಮಾಡಲಿ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಖಾನ್ ಮಾತನಾಡಿ, ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಟಿಪ್ಪುಜಯಂತಿ ಶಾಂತಿಯುತವಾಗಿ ನಡೆಯಬೇಕೆನ್ನುವುದೇ ನಮ್ಮ ಉದ್ದೇಶವೆಂದರು. ಟಿಪ್ಪುಸುಲ್ತಾನ್ ಮುಸ್ಲಿಮ್ ಎನ್ನುವ ಹೆಮ್ಮೆಯನ್ನು ನಾವು ಹೊಂದಿದ್ದೇವೆಯೇ ಹೊರತು ಟಿಪ್ಪುಒಂದು ಸಮುದಾಯಕ್ಕೆ ಸೇರಿದವರಲ್ಲವೆಂದು ತಿಳಿಸಿದರು.
ಮುಸಲ್ಮಾನರು ಜಯಂತಿ ಆಚರಿಸಿ ಎಂದು ಕೇಳಿ ಕೊಂಡಿರಲಿಲ್ಲ. ಆದರೆ ಸರಕಾರ ಟಿಪ್ಪು ನಡೆಸಿದ ಉತ್ತಮ ಆಡಳಿತವನ್ನು ನೋಡಿಯೇ ಜಯಂತಿ ಆಚರಣೆಯ ನಿರ್ಧಾರಕ್ಕೆ ಬಂದಿದೆ. ಕಳೆದ ಬಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ ನಡೆದ ಕಾರಣ ಗಲಭೆ ನಡೆದಿರಬಹುದೆಂದು ಅಭಿಪ್ರಾಯಪಟ್ಟ ಇಸ್ಹಾಕ್ ಖಾನ್ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುವ ಟಿಪ್ಪುಜಯಂತಿ ಸರಕಾರಿ ಜಯಂತಿಯಾಗಿಯೇ ಶಾಂತಿಯುತವಾಗಿ ನಡೆಯಲಿ ಎಂದರು.
ಟಿಪ್ಪುವಿನ ವಿಚಾರದಲ್ಲಿ ವಿವಾದ ಸೃಷ್ಟಿಸಿರುವುದು ದುರಂತವೆಂದು ಅಭಿಪ್ರಾಯಪಟ್ಟ ಅವರು , ಕೊಡಗು ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯಲು ಟಿಪ್ಪು ವಿಚಾರವೊಂದೇ ಕಾರಣವಲ್ಲ ಎಂದರು. ಕೊಡವರು ಹಾಗೂ ಕೊಡಗಿನ ಮೇಲೆ ಮುಸಲ್ಮಾನರಿಗೆ ಅಪಾರ ಅಭಿಮಾನವಿದೆ. ಆದರೆ, ಕೆಲವರು ಕೋಮುವಾದವನ್ನು ಬಂಡವಾಳ ಮಾಡಿಕೊಂಡು ಹಿಂದೂ ಹಾಗೂ ಮುಸ್ಲಿಮರ ನಡುವೆ ಬಿರುಕು ಮೂಡಿಸಿ ಲಾಭ ಪಡೆಯುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಸ್ಲಾಮಿನಲ್ಲಿ ವ್ಯಕ್ತಿಪೂಜೆ ಇಲ್ಲ, ಆದರೆ, ಟಿಪ್ಪುವನ್ನು ವಿರೋಧಿಸುವವರೇ ಟಿಪ್ಪು ಜಯಂತಿ ಆಚರಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದರು ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಮುಸಲ್ಮಾನರು ಮಾತ್ರವಲ್ಲ ಉಭಯ ಕಡೆಗಳಿಂದಲೂ ಶಾಂತಿಗಾಗಿ ಸಹಕಾರ ದೊರೆಯಬೇಕಾಗಿದೆ. ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಇಬ್ರಾಹೀಂ ಎಂಬವರು ನೀಡಿದ ಹೇಳಿಕೆ ಅರ್ಥಹೀನವಾಗಿದ್ದು, ಅವರು ಒತ್ತಡದಿಂದ ಜೀವನ ಸಾಗಿಸುವ ಅಗತ್ಯವಿಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗಿಷ್ಟ ಬಂದಲ್ಲಿ ಇದ್ದುಕೊಂಡು ಜೀವನ ಸಾಗಿಸಲಿ ಎಂದರು.
ಟಿಪ್ಪು ಜಯಂತಿಯನ್ನು ಮುಸಲ್ಮಾನರು ದೊಡ್ಡ ವಿಷಯವೆಂದು ತಿಳಿದುಕೊಳ್ಳಬಾರದು. ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಸರಕಾರವೇ ಇದನ್ನು ನಿಭಾಯಿಸಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸದಸ್ಯರಾದ ಜಬ್ಬಾರ್, ನಿಸಾರ್ ಹಾಗೂ ರಝಾಕ್ ಉಪಸ್ಥಿತರಿದ್ದರು.







