ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಸರಕಾರ ಬದ್ಧ : ರಮಾನಾಥ ರೈ

ಮುಲ್ಕಿ, ಅ.31: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಬೀಚನ್ನು ಕರ್ನಾಟಕ ಸರಕಾರದ ಅನುದಾನಗಳ ಮೂಲಕ ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಸಸಿಹಿತ್ಲು ಬೀಚ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿ ಮಾತನಾಡಿದ ಅವರು, ಅರಣ್ಯ ಇಲಾಖೆ, ಪರಿಸರ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಅನುದಾನಗಳನ್ನು ಬಳಸಿಕೊಂಡು ಸ್ಥಳೀಯ ಶಾಸಕರಾದ ಕೆ. ಅಭಯಚಂದ್ರ ಅವರ ಮನವಿಯಂತೆ ಸಸಿಹಿತ್ಲು ಬೀಚ್ನ್ನು ಮಾದರಿ ಬೀಚ್ಆಗಿ ಮಾರ್ಪಡಿಸುವ ಯೋಜನೆ ಸರಕಾರದ ಮುಂದಿದೆ. ಈ ಅಭಿವೃದ್ಧಿ ಕೆಲಸವನ್ನು ಹಳೆಯಂಗಡಿ ಗ್ರಾಮ ಪಂಚಾಯತ್ನ ಮೂಲಕವೇ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಸಚಿವರೊಂದಿಗೆ ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಪರಿಸರ ಸಮಿತಿ ಸದಸ್ಯ ಸೂರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಕುಮಾರ್, ಅಬ್ದುಲ್ ಖಾದರ್, ಸ್ಥಳೀಯ ನಾಯಕರಾದ ಧನರಾಜ್ ಕೋಟ್ಯಾನ್, ಅರವಿಂದ ಸಸಿಹಿತ್ಲು, ಎಸಿಎಫ್ ಶ್ರೀಧರ ಹಾಗೂ ಅರಣ್ಯ ಮತ್ತು ಪರಿಸರ ಇಲಾಖಾ ಅಧಿಕಾರಿಗಳು ಜೊತೆಗಿದ್ದರು.





