ತಲಪಾಡಿ-ಕಾಲಿಕಡವು ರಾ.ಹೆದ್ದಾರಿ ಚತುಷ್ಪಥ: ಕಾಮಗಾರಿ ಆರಂಭ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮ್ಮುಖದಲ್ಲಿ ನಡೆದ
ಕಾಸರಗೋಡು, ಅ.31: ತಲಪಾಡಿಯಿಂದ ಕಾಲಿಕಡವುವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಟೆಂಡರ್ ಪ್ರಕ್ರಿಯೆಯ ಅಧಿಸೂಚನೆ ಡಿಸೆಂಬರ್ನಲ್ಲಿ ಹೊರಬೀಳಲಿದ್ದು, 2017ರ ಮೇ 1ರಿಂದ ಕಾಮಗಾರಿ ಆರಂಭಗೊಳ್ಳಲಿದೆ. ಈ ಕುರಿತು ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮ್ಮುಖದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಜೊತೆಗೆ ನೀಲೇಶ್ವರ ಪಳ್ಳಿಕೆರೆ ಮೇಲ್ಸೇತುವೆ ನಿರ್ಮಾಣಕ್ಕೂ ತೀರ್ಮಾನಿಸಲಾಗಿದ್ದು, ಪಳ್ಳಿಕೆರೆಯಲ್ಲಿ ಚತುಷ್ಪಥ ಮೇಲ್ಸೇತುವೆ ನಿರ್ಮಿಸಲು ಯೋಜನೆ ತಯಾರಿಸಲಾಗಿದೆ. ಸೇತುವೆಗೆ ಅಗತ್ಯ ಸ್ಥಳ ಸ್ವಾಧೀನ ಮಾಡಲಾಗಿದೆ. ಕಾಮಗಾರಿ ವಿಳಂಬವಿಲ್ಲದೆ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ತಲಪಾಡಿಯಿಂದ ಕಾಲಿಕಡವಿನವರೆಗೆ 87 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಜಿಲ್ಲೆಯಲ್ಲಿ 110 ಹೆಕ್ಟೇರ್ ಸ್ಥಳ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಅದರಲ್ಲಿ 64 ಹೆಕ್ಟೇರ್ ಸ್ಥಳ ಸ್ವಾಧೀನಕ್ಕೆ 2011 ಮತ್ತು 2013ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಕುರಿತು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಸ್ವಾಧೀನ ಪಡಿಸಿಕೊಳ್ಳುವ ಸ್ಥಳದ, ಕಟ್ಟಡದ ಬೆಲೆ ನಿಗಧಿಯನ್ನು ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ನಿರ್ಣಯಿಸಿ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ನಷ್ಟ ಪರಿಹಾರ ನೀಡಿ ಸ್ಥಳ ಸ್ವಾಧೀನ ಪಡಿಸುವ ಪ್ರಕ್ರಿಯೆ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಸಭೆಯಲ್ಲಿ ಸಂಸದ ಪಿ.ಕರುಣಾಕರನ್, ಕೇಂದ್ರ ಹೆದ್ದಾರಿ ಸಚಿವಾಲಯ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು, ರಾಜ್ಯ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು, ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.





