ಮಾಜಿ ಶಾಸಕ ರಘುಪತಿ ಭಟ್ರ ಬ್ಲೂಫಿಲ್ಮ್: ಕಾಂಗ್ರೆಸ್ನಿಂದ ಗಂಭೀರ ಆರೋಪ
![ಮಾಜಿ ಶಾಸಕ ರಘುಪತಿ ಭಟ್ರ ಬ್ಲೂಫಿಲ್ಮ್: ಕಾಂಗ್ರೆಸ್ನಿಂದ ಗಂಭೀರ ಆರೋಪ ಮಾಜಿ ಶಾಸಕ ರಘುಪತಿ ಭಟ್ರ ಬ್ಲೂಫಿಲ್ಮ್: ಕಾಂಗ್ರೆಸ್ನಿಂದ ಗಂಭೀರ ಆರೋಪ](https://www.varthabharati.in/sites/default/files/images/articles/2016/11/1/raghupati-bhat-13032811.jpg)
ಉಡುಪಿ, ನ.1: ರಘುಪತಿ ಭಟ್ ಶಾಸಕರಾಗಿದ್ದಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಸಂಚು ಹೂಡಿ, ದುಬೈಯ ಉದ್ಯಮಿಯೊಬ್ಬರಿಂದ ಒಂದು ಕೋಟಿ ರೂ. ಮುಂಗಡ ಪಡೆದಿದ್ದು, ಡೀಲ್ ಮುಂದಕ್ಕೆ ಹೋಗದೆ ಮುಂಗಡ ಹಿಂದಿರುಗಿಸದಿದ್ದಾಗ ರಘುಪತಿ ಭಟ್ರ ಬ್ಲೂ ಫಿಲಂನ್ನು ಬಹಿರಂಗಗೊಳಿಸಲಾಯಿತು. ಅದರಿಂದಾಗಿ ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡದಿರುವುದು ಎಲ್ಲರಿಗೂ ತಿಳಿದ ವಿಷಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ತುರ್ತು ಸಭೆಯಲ್ಲಿ, ಹೆಂಗಸರ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಗೆ ಸಂಬಂಧಿಸಿ ಮಾಜಿ ಶಾಸಕ ರಘುಪತಿ ಭಟ್ ನೀಡಿದ ಹೇಳಿಕೆಯನ್ನು ಪರಾಮರ್ಶಿಸಿ ಖಂಡಿಸಲಾಯಿತು.
ಉಡುಪಿಯಲ್ಲಿ ಪ್ರಸ್ತುತ ಇರುವ 60 ಹಾಸಿಗೆಯ ಹೆಂಗಸರ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯನ್ನಾಗಿಸಿ ಅಭಿವೃದ್ಧಿ ಪಡಿಸಲು ಸರಕಾರದ ಆರೋಗ್ಯ ಇಲಾಖೆ ಹಾಗೂ ಅನಿವಾಸಿ ಭಾರತೀಯ ಡಾ.ಬಿ.ಆರ್.ಶೆಟ್ಟಿ ನಡುವೆ ಒಡಂಬಡಿಕೆಯಾಗಿದೆ. ಈ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳು ಉಚಿತವಾಗಿರುತ್ತದೆ. ನೂತನವಾಗಿ ಕಟ್ಟುವ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ಶುಲ್ಕ ವಿಧಿಸಲಾಗುವುದು ಎಂದು ಸಮಿತಿ ತಿಳಿಸಿದೆ.
200 ಹಾಸಿಗೆಗಳ ಉಚಿತ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಉಳ್ಳವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. 200 ಹಾಸಿಗೆಗಳ ಉಚಿತ ಸರಕಾರಿ ಆಸ್ಪತ್ರೆಗೆ 150 ಕೋಟಿ ರೂ. ಹಾಗೂ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ವೆಚ್ಚ 350 ಕೋಟಿ ರೂ.ನ್ನು ವ್ಯಯಿಸಲಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆದಾಯದಲ್ಲಿ ಉಚಿತ ಆಸ್ಪತ್ರೆಯ ಖರ್ಚನ್ನು ಸರಿದೂಗಿಸಲಾಗುವುದು ಎಂದು ಡಾ. ಬಿ.ಆರ್.ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಕದ್ದು ಮುಚ್ಚಿ ವ್ಯವಹಾರ ನಡೆಸುವ ಅಥವಾ ಲಂಚ ಸ್ವೀಕರಿಸುವ ಅವಶ್ಯಕತೆ ಸಚಿವ ಪ್ರಮೋದ್ ಮಧ್ವರಾಜ್ಗೆ ಇಲ್ಲ ಎಂದು ಸಮಿತಿ ಸಭೆಯಲ್ಲಿ ಸ್ಪಷ್ಟಪಡಿಸಿದೆ.
ಡಾ.ಬಿ.ಆರ್.ಶೆಟ್ಟಿ ಲಂಚಕೋರರಾದರೆ ಇತ್ತೀಚೆಗೆ ಅವರ ಕೋರಿಕೆಯ ಮೇರೆಗೆ ದುಬೈಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದು ಎಷ್ಟು ಸಮಂಜಸ ಎಂದು ಸಮಿತಿ ಟೀಕಿಸಿದೆ.
ಸಭೆಯಲ್ಲಿ ಪ್ರಖ್ಯಾತ್ ಶೆಟ್ಟಿ, ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಶಶಿರಾಜ್ ಕುಂದರ್, ಆರ್.ಕೆ ರಮೇಶ್ ಪೂಜಾರಿ, ಜನಾರ್ಧನ ಭಂಡಾರ್ಕರ್, ಸುಕೇಶ್ ಕುಂದರ್, ವಿಜಯ ಪೂಜಾರಿ, ಹಾರ್ಮಿನ್ಸ್ ನೊರೊನ್ಹ, ವಿಜಯ ಮಂಚಿ ಮೊದಲಾದವರು ಉಪಸ್ಥಿತರಿದ್ದರು.