ಕನ್ನಡತನವನ್ನು ಉಳಿಸಿಕೊಳ್ಳಲು ಬದ್ಧರಾಗೋಣ: ಪ್ರೊ.ಬಿ.ಎಂ.ಇಚ್ಲಂಗೋಡ್
![ಕನ್ನಡತನವನ್ನು ಉಳಿಸಿಕೊಳ್ಳಲು ಬದ್ಧರಾಗೋಣ: ಪ್ರೊ.ಬಿ.ಎಂ.ಇಚ್ಲಂಗೋಡ್ ಕನ್ನಡತನವನ್ನು ಉಳಿಸಿಕೊಳ್ಳಲು ಬದ್ಧರಾಗೋಣ: ಪ್ರೊ.ಬಿ.ಎಂ.ಇಚ್ಲಂಗೋಡ್](https://www.varthabharati.in/sites/default/files/images/articles/2016/11/1/DSC_3705.jpg)
ಮಂಗಳೂರು,ನ.1: ಕನ್ನಡತನವನ್ನು ಉಳಿಸಿಕೊಳ್ಳಲು ಬದ್ಧರಾಗೋಣ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಇಚ್ಲಂಗೋಡು ಕರೆ ನೀಡಿದರು.
ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜೋತ್ಸವದ ಸಾಂಸ್ಕ್ಕೃತಿಕ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ನಮ್ಮ ನಡುವಿನ ತಾಂತ್ರಿಕ ಕ್ಷೇತ್ರದಲ್ಲಾಗಿರುವ ಬೆಳವಣಿಗೆ ನಮ್ಮ ಸಂಸ್ಕೃತಿಯನ್ನು ಪಲ್ಲಟಗೊಳಿಸಿದೆ. ಅಂತರ್ಜಾಲದ ವ್ಯಾಪಕತೆಯ ಪರಿಣಾಮವಾಗಿ ನಮ್ಮತನವನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗತೊಡಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪರಿಣಾಮವಾಗಿ ಕನ್ನಡಿಗರು ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಗಾಂಧೀಜಿಯವರ ರಾಮರಾಜ್ಯದ, ಸ್ವತಂತ್ರ ಭಾರತದ ಕಲ್ಪನೆಯಲ್ಲಿ ಒಂಟಿ ಮಹಿಳೆ ಮಧ್ಯರಾತ್ರಿ ನಡೆದುಕೊಂಡು ಹೋಗುವ ಪರಿಸ್ಥಿತಿ ಇರಬೇಕು ಎಂದಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಹಗಲು ಹೊತ್ತು ಒಂಟಿ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಕಷ್ಟ. ರಾಜಕೀಯ ಪ್ರೇರಿತ ಪರಿವರ್ತನೆಯಿಂದ ಆಗಿರುವ ಮನೋಭಾವದಿಂದಾಗಿ ಜಾತಿ, ಮತದ ಭೂತ ನಮ್ಮನ್ನು ಕಾಡುತ್ತಿದೆ. ಭಾರತೀಯತೆಗೆ, ಹಿಂದುತ್ವಕ್ಕೆ ಕೋಮುವಾದದ ರಾಜಕೀಯವನ್ನು ಬಳಿದು ಈ ಪದವನ್ನು ಬಳಸಲು ಹಿಂದು ಮುಂದು ನೋಡುವಂತಾಗಿದೆ. ಆಧಾರ್ ಕಾರ್ಡಿನಿಂದ ಹಿಡಿದು ಎಲ್ಲಾ ಸರಕಾರಿ ದಾಖಲೆಗೂ ನಾವು ಜಾತಿ ದಾಖಲಿಸಬೇಕಾದ ಪರಿಸ್ಥಿತಿ ಇದೆ. ಕನ್ನಡಿಗರು ಸ್ವಂತಿಕೆಯನ್ನು ಮರೆತು ವರ್ತಿಸಬಾರದು ಎಂದು ಬಿ.ಎಂ.ಇಚ್ಲಂಗೋಡ್ ಕರೆ ನೀಡಿದರು.
ಸಮಾರಂಭದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಮ್ಮ ಭಾಷೆ,ಸಂಸ್ಕೃತಿ ಪರಂಪರೆ ನಮ್ಮೆಲ್ಲರನ್ನು ಒಂದುಗೂಡಿಸುವಂತಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಮುಂಬೈನಲ್ಲಿ ನೆಲೆಸಿರುವ ಬಾಲಪ್ರತಿಭೆಗಳನ್ನು, ಕಾಸರಗೋಡು, ಸ್ಥಳೀಯ ಕನ್ನಡದ ಬಾಲ ಪ್ರತಿಭೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನೆ, ಕವಿಗೋಷ್ಠಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮಂಗಳೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಮಹಾದೇವಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.