ಉತ್ಸವ ಸಮಿತಿಗಳು ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಲಿ: ಜಿಲ್ಲಾಧಿಕಾರಿ ನಕುಲ್
ಕರಾವಳಿ ಉತ್ಸವಕ್ಕೆ ಸಿದ್ಧತೆ

ಕಾರವಾರ, ನ.2: ಡಿಸೆಂಬರ್ 10ರಿಂದ 12ರವರೆಗೆ ಕಾರವಾರದಲ್ಲಿ ನಡೆಯುವ ಕರಾವಳಿ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲು ಈಗಾಗಲೇ ರಚಿಸಿರುವ ಸಮಿತಿಗಳು ತಮಗೆ ವಹಿಸಿರುವ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರಾವಳಿ ಉತ್ಸವ ಪೂರ್ವಸಿದ್ಧತಾ ಸಭೆಯನ್ನು ನಡೆಸಿದರು. ಈ ಬಾರಿಯ ಕರಾವಳಿ ಉತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರವಲ್ಲದೆ ಇನ್ನಿತರ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸಬೇಕು. ಫಲ ಪುಷ್ಪ ಪ್ರದರ್ಶನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಬೇಕು ಎಂದರು.
ಫಲ ಪುಷ್ಪಪ್ರದರ್ಶನದಲ್ಲಿ ಕೇವಲ ಹೂವುಗಳನ್ನು ತಂದು ಪ್ರದರ್ಶಿಸದೆ, ವಿವಿಧ ರೀತಿಯ ಆಕರ್ಷಕ ಹೂವುಗಳನ್ನು ಬೆಳೆಸಲು ಈಗಿನಿಂದಲೇ ಸಿದ್ಧತೆ ನಡೆಸಬೇಕು. ಫಲ ಪುಷ್ಪಪ್ರದರ್ಶನಕ್ಕೆ ಸೂಕ್ತ ಸ್ಥಳವನ್ನು ನೀಡಲಾಗುವುದು. ಜಿಲ್ಲೆಯ ಖಾಸಗಿ ನರ್ಸರಿಗಳ ಸಹಕಾರದೊಂದಿಗೆ ಪ್ರದರ್ಶನ ಮತ್ತು ಮಾರಾಟವನ್ನು ಸಹ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಅವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮ್ಯಾರಥಾನ್ ಈ ಬಾರಿ ವೃತ್ತಿಪರ ರೀತಿಯಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ತಾರೆಯರನ್ನು ಸಹ ಮ್ಯಾರಥಾನ್ ಉದ್ಘಾಟನೆಗೆ ಆಹ್ವಾನಿಸಲಾಗುವುದು. ಶ್ವಾನ ಪ್ರದರ್ಶನ, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು, ಕುಸ್ತಿ, ದೇಹದಾರ್ಢ್ಯ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬೇಕು. ಅಡುಗೆ ಸ್ಪರ್ಧೆಯನ್ನು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿರಿಸದೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದರು.
ಜಿಲ್ಲೆಯ ಸಾಧನೆ-ಸಾಧಕರು ಅಭಿವೃದ್ಧಿಯನ್ನು ಪ್ರತಿಬಿಂಬಿಸುವ ಮೌಲ್ಯಯುತ ಬರಹಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಉತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಇಲ್ಲಿನ ಪ್ರಮುಖ ತಾಣಗಳು, ನೆಲ, ಜಲ, ಅರಣ್ಯ, ಕಡಲ ತೀರ, ಪ್ರಾಣಿ ಪಕ್ಷಿಗಳ ಆಕರ್ಷಕ ಛಾಯಾಚಿತ್ರಗಳನ್ನು ಒಳಗೊಂಡ ಸಮಗ್ರ ಸಂಪುಟವನ್ನು ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕರಾವಳಿ ಉತ್ಸವ ಸಂದರ್ಭದಲ್ಲಿ ಚಿತ್ರಕಲೆ, ಶಿಲ್ಪಕಲೆ ಕಾರ್ಯಾಗಾರ ಆಯೋಜಿಸಲಾಗುವುದು. ಇದೇ ಮೊದಲ ಬಾರಿಗೆ ಮರಳು ಶಿಲ್ಪ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದರು.





