ಶ್ರೀನಿವಾಸ್ ಕಾಲೇಜಿನಲ್ಲಿ ‘ಸೃಸ್ಟಿಕ’ಉದ್ಘಾಟನೆ

ಮಂಗಳೂರು, ನ.3: ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘಟನೆ ಸೃಸ್ಟಿಕ 2016-17 ರ ಉದ್ಘಾಟನಾ ಸಮಾರಂಭವು ಮುಕ್ಕದ ಶ್ರೀ ನಿವಾಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ನಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ವೆಸ್ಟ್ಲೈನ್ ಕನ್ಸ್ಟ್ರಕ್ಷನ್ಸ್ ಮತ್ತು ಡೆವಲಪ್ಮೆಂಟ್ಸ್ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರೂ ಆದ ನಾಸಿರ್ ಮೊಯ್ದಿನ್ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಬಿ., ಉಪಪ್ರಾಂಶುಪಾಲ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರಾಮಕೃಷ್ಣ ಹೆಗಡೆ, ಸೃಸ್ಟಿಕ 2016-17ನೆ ಅವಧಿಯ ಸಂಯೋಜಕ ಹಾಗೂ ಉಪನ್ಯಾಸಕ ಭವಾನಿ ಶಂಕರ್, ಸೃಸ್ಟಿಕದ ಅಧ್ಯಕ್ಷ ದರ್ಶನ್ ಶೆಟ್ಟಿ ಮತ್ತು ಕಾರ್ಯದರ್ಶಿ ಶೈಲೇಶ್ ಆಚಾರ್ಯ ಉಪಸ್ಥಿತರಿದ್ದರು.
ಸೃಸ್ಟಿಕ ಸಲಹೆಗಾರ ಅಸೋಸಿಯೇಟ್ ಪ್ರೊಫೆಸರ್ ಶ್ರೀನಾಥ್ ರಾವ್ ಕೆ., ಡಾ. ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎರಡನೆಯ, ನಾಲ್ಕನೆಯ ಮತ್ತು ಅಂತಿಮ ವರ್ಷದ ಬಿ.ಇ. ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಸೃಸ್ಟಿಕವು ಆಯೋಜಿಸಿದ ಸಿವಿಲ್ ಇಂಜಿನಿಯರಿಂಗ್ ಮಾದರಿ ತಯಾರಿಕಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಪೆನ್ಸಿಲ್ ಸ್ಕೆಚ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಪ್ರಧಾನ ಮಾಡಲಾುತು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ರಾಮಕೃಷ್ಣ ಹೆಗಡೆ, ಸೃಸ್ಟಿಕದ ಗುರಿ, ಉದ್ದೇಶಗಳು ಮತ್ತು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಯಲ್ಲಿ ಸೃಸ್ಟಿಕದ ಮಹತ್ವವನ್ನು ತಿಳಿಸಿದರು. ಸೃಸ್ಟಿಕವು ಕಳೆದ ಶೈಕ್ಷಣಿಕ ವರ್ಷಗಳಲ್ಲಿ ಆಯೋಜಿಸಿದ ತಾಂತ್ರಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ವಿಚಾರ ಸಂಕಿರಣಗಳನ್ನು, ತಾಂತ್ರಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿ ನಾಸಿರ್ ಮೊಯ್ದೀನ್, ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಿವಿಲ್ ಇಂಜಿನಿಯರಿಂಗ್ ಮಾದರಿಗಳನ್ನು (ಸುರಂಗದಿಂದ ಹೊರಬರುತ್ತಿರುವ ರೈಲು, ಹಳಿಯ ಮೇಲೆ ಓಡುವ ಬುಲೆಟ್ ಟ್ರೈನ್, ಹೆದ್ದಾರಿ, ಬಹುಮಹಡಿ ಕಟ್ಟಡ) ಶ್ಲಾಘಿಸಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಬಿ., ಸೃಸ್ಟಿಕವು ಕಳೆದ ಹಲವು ವರ್ಷಗಳಿಂದ ಅಯೋಜಿಸುತ್ತಿರುವ ವಿವಿಧ ತಾಂತ್ರಿಕ ಚಟುವಟಿಕೆಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸಾಧನೆಯನ್ನು ಮಾಡಿರುವ ನಾಸಿರ್ಮೊಯ್ದಿನ್ರನ್ನು ಸೃಷ್ಟಿಕ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಭವಾನಿ ಶಂಕರ್ ಸ್ವಾಗತಿಸಿದರು. ಪ್ರೊ. ಶ್ರೀನಾಥ್ ರಾವ್ ಅತಿಥಿಗಳನ್ನು ಪರಿಚಯಿಸಿದರು.
ವಿದ್ಯಾರ್ಥಿಗಳಾದ ನಸೀಮ್ ಮತ್ತು ಲ್ಯಾಕ್ಮೆನ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿಯರಾದ ಚಂದ್ರಲೇಖಾ ಮತ್ತು ಪ್ರಜ್ಞಾ ಹೆಗ್ಡೆ ಪ್ರಾರ್ಥಿಸಿದರು. ಪ್ರೊ. ಕೆ. ಶ್ರೀನಾಥ್ ರಾವ್ ವಂದಿಸಿದರು.
ಈ ಸಂದರ್ಭದಲ್ಲಿ ವೆಸ್ಟ್ಲೈನ್ ಬಿಲ್ಡರ್ಸ್ನ ಸರ್ಫರಾಝ್ ಶಾಮ್ನಾದ್, ಕಾಲೇಜಿನ ವಿವಿಧ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







