ತಗಡಿನ ಮನೆಯಲ್ಲಿ ವಾಸಿಸುವ ಬಾಂಗ್ಲಾ ಕ್ರಿಕೆಟಿಗ ಮೀರಝ್
ಮನೆ ನಿರ್ಮಿಸಿಕೊಡಲು ಪ್ರಧಾನಿ ಶೇಕ್ ಹಸೀನಾ ಆದೇಶ

ಢಾಕಾ, ನ.3: ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯಲ್ಲಿ 19 ವಿಕೆಟ್ ಉಡಾಯಿಸುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಅಪೂರ್ವ ಯಶಸ್ಸು ತಂದುಕೊಟ್ಟ ಯುವ ಕ್ರಿಕೆಟಿಗ ಮೆಹಾದಿ ಹಸನ್ ಮೀರಝ್ಗೆ ಹೊಸ ಮನೆ ನಿರ್ಮಿಸಿಕೊಡುವಂತೆ ಪ್ರಧಾನಿ ಶೇಕ್ ಹಸೀನಾ ಅವರು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಆದೇಶಿದ್ದಾರೆ.
19ರ ಹರೆಯದ ಯುವ ಕ್ರಿಕೆಟಿಗ ಮೀರಝ್ ಅವರದ್ದು ಕಡುಬಡ ಕುಟುಂಬ. ಖುಲ್ನಾ ನಗರದ ಖಾಲೀಶ್ಪುರ ಎಂಬಲ್ಲಿ ಬಿದಿರಿನ ತಟ್ಟಿಯಿಂದ ನಿರ್ಮಾಣಗೊಂಡ ಎರಡು ರೂಮ್ನ ತಗಡಿನ ಸಣ್ಣ ಮನೆಯೊಂದರಲ್ಲಿ ನಾಲ್ವರು ಸದಸ್ಯರ ಅವರ ಕುಟುಂಬ ವಾಸವಾಗಿದೆೆ. ಎರಡು ರೂಮ್ಗಳ ಪೈಕಿ ಒಂದು ರೂಮ್ನಲ್ಲಿ ಮೀರಝ್ಗೆ ದೊರೆತ ಪ್ರಶಸ್ತಿ ಮತ್ತು ಕ್ರೀಡಾ ಪರಿಕರಗಳ ರಾಶಿ ಇದೆ. ಇನ್ನೊಂದು ಕೋಣೆ ಅವರ ಕುಟುಂಬದ ಸದಸ್ಯರ ಬಳಕೆಗೆ ಮೀಸಲು.
ಅಂಡರ್-15, 17 ಮತ್ತು ಅಂಡರ್ 19 ತಂಡದ ನಾಯಕರಾಗಿ ಗಮನ ಸೆಳೆದಿದ್ದ ಮೀರಝ್ ಅವರ ಮನೆಯ ಆರ್ಥಿಕ ಸ್ಥಿತಿ ಬದಲಾಗಿಲ್ಲ. ಅವರ ತಂದೆ ಜಲಾಲ್ ಹುಸೈನ್ ಬಾಡಿಗೆ ಕಾರ್ನಲ್ಲಿ ಚಾಲಕನಾಗಿ ದುಡಿಯುತ್ತಿದ್ದಾರೆ.
ಕಡುಬಡತನದಲ್ಲಿ ಬೆಳೆದ ಮೀರಝ್ಗೆ ಕಠಿಣ ಪ್ರಯತ್ನದ ಮೂಲಕ ಉತ್ತಮ ಸ್ಪಿನ್ನರ್ ಆಗಿ ರೂಪುಗೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ರಂಗ ಪ್ರವೇಶಿಸಿದ ಮೀರಝ್ ಒಟ್ಟು 7 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ನ ಬೆವರಿಳಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನಲ್ಲಿ 22ರನ್ಗಳ ಸೋಲು ಅನುಭವಿಸಿತು. ಬಾಂಗ್ಲಾದ ದಾಂಡಿಗರು ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.
ಎರಡನೆ ಟೆಸ್ಟ್ನಲ್ಲಿ ಬಾಂಗ್ಲಾ 108 ರನ್ಗಳ ರೋಚಕ ಜಯ ದಾಖಲಿಸಿತು. ಇಂಗ್ಲೆಂಡ್ಗೆ ಸರಣಿ ಗೆಲುವಿನ ಅವಕಾಶ ನಿರಾಕರಿಸಿತು. ಈ ಗೆಲುವಿನಲ್ಲಿ ಮೀರಝ್ ಕೊಡುಗೆ ದೊಡ್ಡದು. ಅವರು 12 ವಿಕೆಟ್ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ನ್ನು 244 ರನ್ ಮತ್ತು ಎರಡನೆ ಇನಿಂಗ್ಸ್ನಲ್ಲಿ 164 ರನ್ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ ಎರಡು ಟೆಸ್ಟ್ಗಳ ಸರಣಿಯನ್ನು 1-1 ಅಂತರದಲ್ಲಿ ಡ್ರಾ ಸಾಧಿಸಿತು.
ಮೀರಝ್ ಎರಡೂ ಇನಿಂಗ್ಸ್ಗಳಲ್ಲೂ ತಲಾ 6 ವಿಕೆಟ್ ಉಡಾಯಿಸಿದ್ದರು. ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳು ಅವರಿಗೆ ಒಲಿದು ಬಂದಿತ್ತು.ಐದು ದಿನಗಳ ಟೆಸ್ಟ್ ಮೂರು ದಿನಗಳಲ್ಲಿ ಮುಗಿಯಿತು.
ಮೀರಝ್ ಅವರ ಅಪೂರ್ವ ಸಾಧನೆ ಜಾಗತಿಕವಾಗಿ ಗಮನ ಸೆಳೆಯಿತು. ಇದರ ಜೊತೆಗೆ ಅವರ ಕುಟುಂಬದ ದಯನೀಯ ಸ್ಥಿತಿ ಬಾಂಗ್ಲಾ ಸರಕಾರದ ಗಮನ ಸೆಳೆಯಿತು. ನೂರಾರು ಮಂದಿ ಗಣ್ಯರು ಅವರ ಮನೆಗೆ ಭೇಟಿ ನೀಡಿದ್ದರು.
ಪ್ರಧಾನ ಮಂತ್ರಿ ಶೇಕ್ ಹಸೀನಾ ಸರಕಾರದ ಮುಖ್ಯ ಕಾರ್ಯದರ್ಶಿ ಅಬ್ದುಲ್ ಕಲಾಮ್ ಅಝಾದ್ಗೆ ಅವರಿಗೆ ಮೀರಝ್ ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡಲು ಆದೇಶಿಸಿದರು. ಅಝಾದ್ ಅವರು ಖುಲ್ನಾ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ
ಸರಕಾರ ಮೀರಝ್ಗೆ ಮನೆ ಕಟ್ಟಲು ಯೋಗ್ಯ ಸ್ಥಳವನ್ನು ಆಯ್ಕೆ ಮಾಡಿದೆ ಎಂದು ಪಿಎಂ ಹಸೀನಾ ಅವರ ಉಪ ಪತ್ರಿಕಾ ಕಾರ್ಯದರ್ಶಿ ಅಶ್ರಫುಲ್ ಆಲಮ್ ತಿಳಿಸಿದ್ದಾರೆ.





