ಬಾಲಕಿ ಅದಿತಿ ಹತ್ಯೆಪ್ರಕರಣ: ತಂದೆಗೆ 3 ವರ್ಷ, ಮಲತಾಯಿಗೆ 2ವರ್ಷ ಕಠಿಣ ಶಿಕ್ಷೆ

ಕೋಝಿಕ್ಕೋಡ್, ನ. 4: ಏಳುವರ್ಷದ ಬಾಲಕಿ ಅದಿತಿಯನ್ನು ಅನ್ನಕೊಡದೆ ಹಸಿದಿರುವಂತೆ ಮಾಡಿ ಹೊಡೆದು ಕೊಂದ ಪ್ರಕರಣದಲ್ಲಿ ಬಾಲಕಿಯ ತಂದೆ ಮತ್ತು ಮಲತಾಯಿಗೆ ಕಠಿಣ ಶಿಕ್ಷೆ ವಿಧಿಸಿ ಕೋರ್ಟು ತೀರ್ಪುನೀಡಿದೆ ಎಂದು ವರದಿಯಾಗಿದೆ. ಬಿಲಾತ್ತಿಕುಳಂ ತಾಮರಕ್ಕುಳಂ ಲಕ್ಷ್ಮಿ ನಿವಾಸ್ನ ಅದಿತಿ ಎಸ್. ನಂಬೂದಿರಿ ಎಂಬ ಬಾಲಕಿಯನ್ನು ಕೊಂದ ಪ್ರಕರಣದ ಪ್ರಥಮ ಆರೋಪಿ ಬಾಲಕಿಯ ತಂದೆ ಬಿಲಾತ್ತಿಕುಳಂನ ತಿರುವಂಬಾಡಿ ತಟ್ಟೇಕ್ಕೋಟ್ ಇಲ್ಲತ್ ಸುಬ್ರಹ್ಮಣ್ಯನ್ ನಂಬೂದಿರಿಗೆ(41) 3ವರ್ಷ ಕಠಿಣಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡವನ್ನು ಕೋಝಿಕ್ಕೋಡ್ ಎರಡನೆ ಅಡಿಷನಲ್ ಸೆಶನ್ಸ್ ಕೋರ್ಟಿನ ನ್ಯಾಯಾಧೀಶರು ವಿಧಿಸಿದ್ದಾರೆ. ಪ್ರಸ್ತುತ ಕೋರ್ಟು, ಮಕ್ಕಳ ವಿರುದ್ಧ ದೌರ್ಜನ್ಯ ತಡೆ ವಿಶೇಷ ಕೋರ್ಟು ಕೂಡಾ ಆಗಿದೆ.
ಸುಬ್ರಹ್ಮಣ್ಯನ್ ಪತ್ನಿ ರಂಲಾಬೇಗಂ ಯಾನೆ ದೇವಿಕಾ ಅಂತರ್ಜನಂ(42)ಗೆ 2ವರ್ಷ ಕಠಿಣಶಿಕ್ಷೆ ನೀಡಲಾಗಿದೆ. ಕೊಲೆಕೃತ್ಯ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾದ್ದರಿಂದ ಭಾರತ ದಂಡ ಸಂಹಿತೆ 223(ಕೈಯಿಂದ ಹೊಡೆಯುವುದು) 224(ಆಯುಧದಿಂದ ಹೊಡೆಯುವುದು) ಬಾಲನ್ಯಾಯ 23(ಮಕ್ಕಳ ಮೇಲೆ ಕ್ರೌರ್ಯವೆಸಗುವುದು) ಪ್ರಕಾರ ಇಬ್ಬರ ವಿರುದ್ಧ ಶಿಕ್ಷೆ ವಿಧಿಸಲಾಗಿದೆ. ಪ್ರಾಸಿಕ್ಯೂಶನ್ ಆರೋಪಿಸಿದ ಕೊಲೆಪಾತಕ ಕೃತ್ಯ ಮತ್ತು ಕೊಲೆಯತ್ನವನ್ನು ಸಾಬೀತುಪಡಿಸಲು ಅದಕ್ಕೆ ಸಾಧ್ಯವಾಗಿಲ್ಲ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ತಿಳಿಸಿದೆ. ನೆರೆಯ ವ್ಯಕ್ತಿಗಳು ಅದಿತಿಯ ಶಾಲೆಯ ಅಧ್ಯಾಪಕರ ಸಹಿತ 29 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆಹಾರ ಕೊಡದೆ ಹಸಿಯುವಂತೆ ಮಾಡಿಕೊಲೆಗೈಯ್ಯಲಾಗಿದೆ ಎಂದು ನಡಕ್ಕಾವ್ ಸಿ.ಐ. ಪಿ.ಕೆ. ಸಂತೋಷ್ ಆರೋಪಪಟ್ಟಿ ಸಲ್ಲಿಸಿದ್ದರು. ಜಾಮೀನುಪಡೆದಿದ್ದ ಆರೋಪಿಗಳುವಿಚಾರಣೆದಿವಸ ತಪ್ಪಿಸಿಕೊಂಡದ್ದು ದೊಡ್ಡ ಸುದ್ದಿಯಾಗಿತ್ತು. ನಂತರ ಇವರನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಕಡಿಮೆ ಶಿಕ್ಷೆಯಾದ್ದರಿಂದ ತೀರ್ಪುನೀಡಿದ ಕೋರ್ಟಿನಿಂದಲೇ ಜಾಮೀನು ಸಿಗಬಹುದಾದರೂ ಇಬ್ಬರೂ ಜಾಮೀನಿಗೆ ಅರ್ಜಿ ಸಲ್ಲಿಸಲಿಲ್ಲ. ಆದ್ದರಿಂದ ಇಬ್ಬರನ್ನು ಕೋಝಿಕ್ಕೋಡ್ ಜಿಲ್ಲಾ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.







