ಆಳ್ವಾಸ್ನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ ಮತ್ತು ಸಾಂಸ್ಕೃತಿಕ ಸಂಗಮ

ಮೂಡುಬಿದಿರೆ, ನ.4: ಹಬ್ಬಗಳು ನಮ್ಮ ಸಂಬಂಧ, ಪ್ರೀತಿ, ಸಾಮರಸ್ಯವನ್ನು ಬೆಸೆಯುವಂತಹ ಕೆಲಸವನ್ನು ಮಾಡುತ್ತವೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರು ನಮಗಾಗಿ ಹಬ್ಬಗಳನ್ನು ಬೇರೆ ಬೇರೆ ಜಾತಿ ಧರ್ಮ ಹಾಗೂ ಊರುಗಳಿಗೆ ಅನುಗುಣವಾಗಿ ಕೊಟ್ಟಿದ್ದಾರೆ. ಆದರೆ ಇಂದು ಹಬ್ಬಗಳು ವ್ಯಾಪಾರ ದೃಷ್ಟಿಯಿಂದ ಆಚರಿಸಲ್ಪಡುತ್ತಿರುವುದು ದುರದೃಷ್ಟಕರ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಪುತ್ತಿಗೆಪದವಿನ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ.ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಆಳ್ವಾಸ್ ದೀಪಾವಳಿ ಉತ್ಸವದಲ್ಲಿ ತಮ್ಮ ಗುರಿಕಾರನ ಸ್ಥಾನದಿಂದ ತುಳಸಿ ಪೂಜೆ, ಗೊ ಪೂಜೆ, ಬಲೀಂದ್ರ ಪೂಜೆ, ಲಕ್ಷ್ಮೀ ಪೂಜೆ ಆಯುಧ ಪೂಜೆಗಳನ್ನು, ರೈತರ ಸಲಕರಣೆಗಳಿಗೆ ಪೂಜೆ, ಸರಸ್ವತಿ ಪೂಜೆ ನೆರವೇರಿಸಿ ಮಾತನಾಡಿದರು.
ಹಬ್ಬಗಳ ಬಗ್ಗೆ ಹಿರಿಯರಿದ್ದ ಆಶಯಗಳನ್ನು ಮುಂದುವರೆಸಿಕೊಂಡು ಪ್ರೀತಿ, ಸಾಮರಸ್ಯದಿಂದ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಂಡು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ನವನೀತ್ ಶೆಟ್ಟಿ ಕದ್ರಿ ಬಲೀಂದ್ರ ಪೂಜೆ ವೈಶಿಷ್ಟತೆಯ ಕುರಿತು ವಿವರಿಸಿದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ವಿವೇಕ್ ಆಳ್ವ, ವಿನಯ್ ಆಳ್ವ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಕಲೆ, ಸಂಸ್ಕೃತಿಯನ್ನು ತನ್ನದೇ ರೀತಿಯಲ್ಲಿ ವಿಶಿಷ್ಟವಾಗಿ ಕಟ್ಟಿಕೊಡುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 600ಕ್ಕೂ ಅಧಿಕ ವಿದ್ಯಾರ್ಥಿಗಳು ಸುಮಾರು ಮೂರುವರೆ ಗಂಟೆಗಳ ಕಾಲ ದೇಶ-ವಿದೇಶಗಳ 18 ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.
ಕೇರಳದ ಸಿಂಗಾರಿ ಮೇಳ, ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿಯಟ್ಟಂ-ಕೇರಳ ನಟನಂ, ಮಧುಮಾಸದ ರೂಪಕ-ಬಡಗುತಿಟ್ಟು ಯಕ್ಷ ಪ್ರಯೋಗ, ಗೋಟಿಪುವ ಒರಿಸ್ಸಾದ ನೃತ್ಯ, ಆಂಧ್ರ್ರದ ಬೆಡಗಿನ ಬಂಜಾರ, ಶ್ರೀಲಂಕಾದ ಕ್ಯಾಂಡಿಯನ್ ಸಮೂಹ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ಮತ್ತು ದೋಲ್ ಚಲೋಂ, ಭರತನಾಟ್ಯ ರೂಪಕ ಆನಂದ ತಾಂಡವ, ಸಾಹಸವಯ ಮಲ್ಲಕಂಬ, ಗುಜರಾತಿನ ರಂಗಿನ ದಾಂಡಿಯಾ ನೃತ್ಯ, ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, 40 ಸಿಂಹ ಮುಖವಾಡಗಳ ಸಿಂಹ ಬೇಟೆಯ ಪುರುಲಿಯೋ ನೃತ್ಯ, ಕಥಕ್-ಆನಂದ ಮಂಗಳಂ ದೇರ್, ಮಹಾರಾಷ್ಟ್ರದ ಲಾವಣಿ ನೃತ್ಯ, ತೆಂಕುತಿಟ್ಟು ಯಕ್ಷಗಾನ ವೇದೋದ್ಧರಣಂ, ರೋಮಾಂಚನಕಾರಿ ಸಮಕಾಲೀನ ನೃತ್ಯ, ಶ್ರೀಲಂಕಾದ ಜನಪದ ನೃತ್ಯ, ವಂದೇ ಮಾತರಂ ನೃತ್ಯಗಳು ಪ್ರದರ್ಶನಗೊಂಡಿತು.
ಮೊದಲಿಗೆ ಸಾಂಸ್ಕೃತಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ 100 ವಿದ್ಯಾರ್ಥಿಗಳಿಂದ ಕೇರಳ ಚೆಂಡೆ ವಾದನ, ಶ್ರೀಲಂಕಾದ ವಾದ್ಯ ಸಂಗೀತ, ಕೊಂಬು, ಕಹಳೆ, ಚೆಂಡೆ ವಾದನಗಳು ಗಮನ ಸೆಳೆಯಿತು.
35 ಸಾವಿರ ಪ್ರೇಕ್ಷಕರು
150 ಅಡಿ ಉದ್ದದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಹಬ್ಬವದಲ್ಲಿ ಸುಮಾರು 40 ಸಾವಿರ ಆಸನದ ವ್ಯವಸ್ಥೆ ಹಾಕಲಾಗಿದ್ದು, ಸುಮಾರು 35 ಸಾವಿರ ಮಂದಿ ವೀಕ್ಷಿಸಿದರು. 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಅವರ ಪೋಷಕರು, ಆಳ್ವಾಸ್ನ ಸಿಬ್ಬಂದಿ ವರ್ಗ, ಮೂಡುಬಿದಿರೆ ಜನರು ಸಂ್ರಮದಲ್ಲಿ ಪಾಲ್ಗೊಂಡರು.
ಚಿತ್ರಗಳು : ರವಿ ಎಸ್.ಕೋಟ್ಯಾನ್ ಮಾನಸ ಡಿಜಿಟಲ್







