1,066 ನಿವೇಶನ ರಹಿತರಿಗೆ 52 ಎಕರೆ ಸರಕಾರಿ ಭೂಮಿ ಹಂಚಲು ಶೀಘ್ರವೇ ಕ್ರಮ: ಸಚಿವ ಪ್ರಮೋದ್
![1,066 ನಿವೇಶನ ರಹಿತರಿಗೆ 52 ಎಕರೆ ಸರಕಾರಿ ಭೂಮಿ ಹಂಚಲು ಶೀಘ್ರವೇ ಕ್ರಮ: ಸಚಿವ ಪ್ರಮೋದ್ 1,066 ನಿವೇಶನ ರಹಿತರಿಗೆ 52 ಎಕರೆ ಸರಕಾರಿ ಭೂಮಿ ಹಂಚಲು ಶೀಘ್ರವೇ ಕ್ರಮ: ಸಚಿವ ಪ್ರಮೋದ್](https://www.varthabharati.in/sites/default/files/images/articles/2016/11/4/UD-N4-ENGINEER-MEET_0.jpg)
ಉಡುಪಿ, ನ.4: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಲ್ಲಿ ಗುರುತಿಸಿರುವ 52 ಎಕರೆ ಸರಕಾರಿ ಭೂಮಿಯನ್ನು ಈಗಾಗಲೇ ಪಟ್ಟಿ ಮಾಡಿರುವ 1066 ನಿವೇಶನ ರಹಿತರಿಗೆ ನೀಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ತಾಪಂ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿ ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ನಿವೇಶನ ನೀಡಿ ಸ್ಥಳದಲ್ಲೇ ಹಕ್ಕುಪತ್ರವನ್ನು ನೀಡುವ ಕಾರ್ಯ ಮಾಡಲಾಗುವುದು. ವಸತಿ ಯೋಜನೆಯಡಿ ಅರ್ಜಿ ಹಾಕಿದವರಿಗೆ ಸ್ಥಳದಲ್ಲೇ ಮಂಜೂರಾತಿ ಪತ್ರವನ್ನು ಕೂಡ ನೀಡಲಾಗುವುದು ಎಂದರು.
ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ 316 ಮತ್ತು ನಿವೇಶನವಿಲ್ಲದೆ ಒಂದೇ ಕುಟುಂಬದಲ್ಲಿ ವಾಸ ಮಾಡುತ್ತಿರುವ 750 ಮಂದಿಯನ್ನು ಪಟ್ಟಿ ಮಾಡಲಾಗಿದ್ದು, ಇವರಿಗೆ ನಿವೇಶನ ಹಂಚಲು 40 ಎಕರೆ ಭೂಮಿಯ ಅವಶ್ಯಕತೆ ಇದೆ. ಅದೇ ರೀತಿ ನಗರಸಭೆ ವ್ಯಾಪ್ತಿ ಯಲ್ಲಿ 595 ನಿವೇಶನ ರಹಿತ ಪಟ್ಟಿಯನ್ನು ತಯಾರಿಸಲಾಗಿದೆ. ಇವರಿಗೆ ಕನಿಷ್ಠ 10 ಎಕರೆ ಜಾಗ ಬೇಕಾಗಿದೆ ಎಂದರು.
ಉಪ್ಪೂರಿನಲ್ಲಿ 20 ಎಕರೆ ಸೇರಿದಂತೆ ಒಟ್ಟು 52 ಎಕರೆ ಜಾಗವನ್ನು ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ ಎಂದು ಸ್ಥಳೀಯ ಪಿಡಿಓಗಳು ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ 10 ದಿನಗಳಲ್ಲಿ ವರದಿ ನೀಡಬೇಕು. ಡೀಮ್ಡ್ ಫಾರೆಸ್ಟ್ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲದ ಭೂಮಿಯನ್ನು ಗುರುತಿಸಿ ನಿವೇಶನ ರಹಿತರಿಗೆ ಹಂಚುವ ಕಾರ್ಯ ಮಾಡಬೇಕು. ಅರಣ್ಯ ಇಲಾಖೆಗೆ ಪತ್ರ ಬರೆದು ಜಾಗದಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಸೂಚಿಸಿದರು.
ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ತಾಪಂ ಕಾರ್ಯನಿರ್ವ ಹಣಾಧಿಕಾರಿ ಶೇಷಪ್ಪ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.