ಸಂತ್ರಸ್ತ ಮೀನುಗಾರರಿಗೆ ಸ್ಪಂದನೆ: ಸಚಿವ ಪ್ರಮೋದ್
![ಸಂತ್ರಸ್ತ ಮೀನುಗಾರರಿಗೆ ಸ್ಪಂದನೆ: ಸಚಿವ ಪ್ರಮೋದ್ ಸಂತ್ರಸ್ತ ಮೀನುಗಾರರಿಗೆ ಸ್ಪಂದನೆ: ಸಚಿವ ಪ್ರಮೋದ್](https://www.varthabharati.in/sites/default/files/images/articles/2016/11/5/UD-N5-FISH.jpg)
ಉಡುಪಿ, ನ.5: ನಾಡದೋಣಿಯ ಕಂತಲೆ ಬಲೆ ಸಂತ್ರಸ್ತ ಮೀನುಗಾರರಿಗೆ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕಾ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್ ನೀಡಿದ್ದಾರೆ.
ಶನಿವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೀನುಗಾರಿಕಾ ಇಲಾಖೆಗೆ ಸಂಬಂಧಿಸಿದ ಸಭೆಯಲ್ಲಿ ಉಡುಪಿ ಪವರ್ ಪ್ರಾಜೆಕ್ಟ್ನಿಂದ ನಾಡದೋಣಿ ಕಂತಲೆ ಬಲೆ ಮೀನುಗಾರರಿಗೆ ಆಗುವ ತೊಂದರೆಗಳ ಬಗ್ಗೆ ಆಲಿಸಿದರು.
ಕೈರಂಪಣಿ ಮೀನುಗಾರರಿಗೆ ಈಗಾಗಲೇ ತಲಾ ಒಂದು ಲಕ್ಷ ರೂ. ಪರಿಹಾರಧನ ನೀಡಲಾಗಿದ್ದು, 2010ರಲ್ಲಿ ನಡೆದ ಸಭೆಯ ನಿರ್ಣಯವನ್ನು ಅನುಷ್ಠಾನಕ್ಕೆ ತರಲಾಗುವುದು. ಈ ಸಂಬಂಧ ಈಗಾಗಲೇ ಯುಪಿಸಿಎಲ್ ನೀಡಿದ ಪರಿಹಾರದ ಹಣದಲ್ಲಿ 4 ಕೋಟಿ ರೂ.ಹಣ ಉಳಿಕೆಯಿದ್ದು, ನಿಜವಾದ ಸಂತ್ರಸ್ತರಿಗೆ ಹಂಚಲು ಸಭೆಯಲ್ಲಿ ಸಚಿವರು ಸೂಚಿಸಿದರು.
ತೆಂಕ, ಬಡಾ ಎರ್ಮಾಳ್ ಪ್ರದೇಶದ ಪೈಪ್ ಲೈನ್ ಹಾದುಹೋದ ಪ್ರದೇಶ ವ್ಯಾಪ್ತಿಯಲ್ಲಿರುವ ಮೀನುಗಾರರನ್ನು ಹಾಗೂ ದಿನವಹಿ ಮಹಿಳಾ ಮೀನು ಮಾರಾಟಗಾರರನ್ನು ಈ ಸಂದರ್ಭದಲ್ಲಿ ಪರಿಗಣಿಸಲು ಸಭೆಯಲ್ಲಿ ನಿರ್ಧರಿಸ ಲಾಯಿತು. ಉಳಿಕೆಯ ಮೂರು ಕೋಟಿ ರೂ. ಹಣವನ್ನು ಪಾರದರ್ಶಕವಾಗಿ ಹಂಚಲು ಮಾನದಂಡ ರೂಪಿಸಲಾಗುವುದು ಎಂದ ಸಚಿವರು, ಒಂದು ಕೋಟಿ ರೂ.ವನ್ನು ಮೀನುಗಾರರ ಸುರಕ್ಷತೆಗಾಗಿ ತೆಗೆದಿಡುವಂತೆ ಸೂಚಿಸಿದರು.
ಕಂತುಗಳ ಮೂಲಕ ಪರಿಹಾರ ನೀಡುವ ಮೀನುಗಾರರ ಮುಖಂಡರ ಸಲಹೆಯನ್ನು ಸಚಿವರು ಮನ್ನಿಸಿದರು. ಪರಿಹಾರಕ್ಕೆ ಮಹಿಳೆಯರ ಆಯ್ಕೆ ಕ್ರಮದ ಕುರಿತು ವಿಚಾರಿಸಿದ ಸಚಿವರು, ಮೀನು ಕ್ಷಾಮದಿಂದ ನೊಂದ ಉಚ್ಚಿಲ, ಹೆಜಮಾಡಿ, ಕಾಪುವಿನ ಮಹಿಳೆ ಯರಿಗೆ ನೀಡಿದರೆ ಒಳ್ಳೆಯದು ಎಂದರು. 18 ಫೀಟ್ ನಾಡದೋಣಿಗಳ ಆರ್ಸಿ ಇದ್ದವರು, ಆಧಾರ ಕಾರ್ಡ್ ಹೊಂದಿದವರು, ರೇಷನ್ ಕಾರ್ಡ್ ಇರುವವರನ್ನು ಆಯ್ಕೆ ಮಾಡಲು ಅಧಿಕಾರಿಗಳ ಸಮಿತಿಯನ್ನು ರಚಿಸಿ ನ್ಯಾಯ ನೀಡಲಾಗುವುದು ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ್ ಸಂಘಕ್ಕೂ ಈ ಆಯ್ಕೆಯ ಹೊಣೆ ನೀಡಲಾಯಿತು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಅನುರಾಧ, ತಹಶೀಲ್ದಾರ್ ಮಹೇಶ್ಚಂದ್ರ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್, ಯುಪಿಸಿಎಲ್ನ ಕಿಶೋರ್ ಆಳ್ವ, ಗಿರೀಶ್ ನಾವಡ, ಮೀನುಗಾರ ಮುಖಂಡರಾದ ಗಂಗಾಧರ ಸುವರ್ಣ, ಸತೀಶ್ ಅಮೀನ್ ಪಡುಕೆರೆ, ಕೇಶವ ಕೋಟ್ಯಾನ್, ಭರತ್, ಅಶೋಕ್, ಪರಿಸರ ಇಲಾಖೆ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.