ಪಟಾಕಿ ಬೆಂಕಿ: ಗಾಯಾಳು ಮೃತ್ಯು
ಕೋಟ, ನ.5: ಬೆಂಕಿ ಆಕಸ್ಮಿಕದಿಂದ ಗಾಯಗೊಂಡ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಾಲಿಗ್ರಾಮ ಪಡುಕೆರೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಾರಂಪಳ್ಳಿ ಗ್ರಾಮದ ಪಡುಕೆರೆ ನಿವಾಸಿ ನರಸಿಂಹ ಪೂಜಾರಿ (68) ಎಂದು ಗುರುತಿಸಲಾಗಿದೆ. ಇವರು ನ.1ರಂದು ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸಿ, ನಂತರ ಅಲ್ಲಿನ ಕಸವನ್ನು ಗುಡಿಸಿ ಹಾಕಿ ಬೆಂಕಿ ಹಚ್ಚಿದರು. ಆಗ ರಾಶಿಯಲ್ಲಿದ್ದ ಪಟಾಕಿ ಒಂದು ಸಿಡಿದು ನರಸಿಂಹ ಪೂಜಾರಿ ಧರಿಸಿದ ಬಟ್ಟೆಗೆ ಬೆಂಕಿ ತಗುಲಿತು. ಇದರಿಂದ ಗಂಭೀರವಾಗಿ ಸುಟ್ಟಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನ.5ರಂದು ಬೆಳಗಿನ ಜಾವ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





