ತುಳುನಾಡಿಗರ ಭಾವನೆಗಳ ಸಂಗಮ ವಿಶ್ವ ತುಳುವೆರೆ ಆಯನೊ: ಕ್ಯಾ.ಗಣೇಶ್ ಕಾರ್ಣಿಕ್

ಬದಿಯಡ್ಕ, ನ.7: ಕಾಸರಗೋಡು ಕರ್ನಾಟಕದಿಂದ ವಿಭಜಿಸಿ ಹೋಗಿದ್ದರೂ ತುಳುನಾಡಿನ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಸಂಬಂದವನ್ನು ಬೆಸೆಯುವಲ್ಲಿ ವಿಶ್ವ ತುಳುವೆರೆ ಆಯನೊ ಯಶಸ್ವಿಯಾಗಿದೆ. ಬಾರ್ಕೂರಿನಿಂದ ಹೊರಟ ತುಳುನಾಡು ತಿರ್ಗಾಟ ಯಾತ್ರೆ ವಿವಿಧ ಮತೀಯ ಧಾರ್ಮಿಕ ಕ್ಷೇತ್ರಗಳನ್ನು ಭೇಟಿನೀಡಿ ಸೌಹಾರ್ದತೆಯನ್ನು ಉಂಟುಮಾಡುತ್ತಿರುವುದು ಕಾರ್ಯಕ್ರಮಕ್ಕೆ ಕನ್ನಡಿಹಿಡಿದಂತಾಗಿದೆ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಅವರು ಡಿಸೆಂಬರ್ 9ರಿಂದ 13ರ ತನಕ ನಡೆಯುವ ವಿಶ್ವ ತುಳುವೆರೆ ಆಯನೊದ ಕಚೇರಿಯಲ್ಲಿ ಪ್ರಾಥಮಿಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸುಬ್ಬಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವ ತುಳುವೆರೆ ಆಯನೊ ಸಂಘಟಕರಾದ ನರೇಂದ್ರ ಬಿ.ಎನ್. ಬದಿಯಡ್ಕ, ಮುಹಮ್ಮದಲಿ ಪೆರ್ಲ, ಮಾಹಿನ್ ಕೇಳೋಟ್, ಕುಮಾರ್ ಪೈಸಾರಿ, ಪ್ರೊ. ಶ್ರೀನಾಥ್ ಕಾಸರಗೋಡು, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಶಿವದಾಸ್ ಸಿ.ಎಚ್., ಭಾಸ್ಕರ ಪಿಲಾಂಕಟ್ಟೆ, ರಾಮಚಂದ್ರ ಭಟ್ ದರ್ಮತಡ್ಕ, ಶಂಕರ ಸ್ವಾಮಿಕೃಪಾ, ರಾಮಚಂದ್ರ ಬದಿಯಡ್ಕ, ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.
ಡಾ. ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾಸ್ಕರ ಕುಂಬಳೆ ವಂದಿಸಿದರು







