ಬ್ರಿಟನ್ ಕೊಡುಗೆ : ಭಾರತೀಯ ಉದ್ಯಮಿಗಳಿಗೆ ಮುಕ್ತ ವೀಸಾ ಯೋಜನೆ

ಹೊಸದಿಲ್ಲಿ, ನ.7: ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದ ಬಳಿಕ ಭಾರತ ವನ್ನು ಪ್ರಮುಖ ವ್ಯಾಪಾರ ಪಾಲುದಾರ ಎಂದು ಪರಿಗಣಿಸುವ ಕ್ರಮವಾಗಿ, ಯುನೈಟೆಡ್ ಕಿಂಗ್ಡಮ್ (ಬ್ರಿಟನ್) ಭಾರತೀಯ ಉದ್ಯಮಿಗಳಿಗೆ ಮುಕ್ತ ವೀಸಾ ಯೋಜನೆ ಘೋಷಿಸಿದೆ.
ಭಾರತದ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳಿಗೆ ಸುಲಭ ಸಂಚಾರ ಅವಕಾಶ ಕಲ್ಪಿಸುವಂತೆ ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಬ್ರಿಟ್ ಪ್ರಧಾನಿ ಈ ಕೊಡುಗೆ ಘೋಷಿಸಿದ್ದಾರೆ.
ಭಾರತ- ಯುಕೆ ತಂತ್ರಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ತೆರೆಸಾ ಮೇ , ಬ್ರಿಟನ್ ಪ್ರವೇಶಕ್ಕೆ ಮುಕ್ತ ವೀಸಾ ಅವಕಾಶವನ್ನು ಇದೇ ಪ್ರಪ್ರಥಮ ಬಾರಿಗೆ ನಾವು ನೀಡುತ್ತಿದ್ದು, ನೋಂದಾಯಿತ ಪ್ರವಾಸಿಗರ ಯೋಜನೆ ಎಂದು ಕರೆಯಲಾಗುವ ಈ ಯೋಜನೆಯ ಪ್ರಪ್ರಥಮ ಫಲಾನುಭವಿ ರಾಷ್ಟ್ರ ಭಾರತವಾಗಿದೆ ಎಂದರು.
ಬ್ರಿಟನ್ಗೆ ನಿಯಮಿತವಾಗಿ ಭೇಟಿ ನೀಡಿ ಉಭಯ ರಾಷ್ಟ್ರಗಳ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸುವ ಭಾರತೀಯ ನಾಗರಿಕರಿಗೆ ಬ್ರಿಟನ್ ಪ್ರವೇಶಾವಕಾಶ ಈಗ ಸುಲಭವಾಗಿ ಲಭಿಸಲಿದೆ. ವ್ಯಾಪಾರಿಗಳು ಕೆಲವೇ ಅರ್ಜಿಗಳನ್ನು ಭರ್ತಿ ಮಾಡಿದರೆ ಸಾಕು, ಅವರಿಗೆ ಬ್ರಿಟಿಷ್ ವಿಮಾನನಿಲ್ದಾಣದ ಮೂಲಕ ಯುರೋಪಿಯನ್ ಆರ್ಥಿಕ ವಲಯಕ್ಕೆ ಪ್ರವೇಶಾವಕಾಶ ದೊರಕುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಇದು ಬ್ರಿಟನ್ ಮತ್ತು ಭಾರತಕ್ಕೆ ಹೆಚ್ಚಿನ ಅವಕಾಶವಾಗಿದೆ ಮತ್ತು ವ್ಯಾಪಾರ ಸಂಬಂಧಗಳಿಗೆ ಬ್ರಿಟನ್ ತೆರೆದುಕೊಂಡಿದೆ ಎಂಬ ಸ್ಪಷ್ಟ ಸಂದೇಶ ಇದಾಗಿದೆ ಎಂದು ತೆರೆಸಾ ಮೇ ಹೇಳಿದರು.
ಸಫಲ ವ್ಯಾಪಾರ ಮತ್ತು ಹೂಡಿಕೆಗೆ ಕಾನೂನಿನ ಚೌಕಟ್ಟು ಮಾತ್ರ ಸಾಕಾಗದು, ಜನರ ಮನೋಭಾವ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಬ್ರಿಟನ್ನ ಗೃಹ ಸಚಿವೆಯಾಗಿದ್ದಾಗ ಭಾರತೀಯರಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೆ . ಈಗ ಭಾರತವು ವಿಶ್ವದ ಅತ್ಯಂತ ಶ್ರೇಷ್ಟ ವೀಸಾ ಸೇವೆಯನ್ನು ಬ್ರಿಟನ್ನಲ್ಲಿ ಪಡೆಯುತ್ತಿದ್ದು ಅರ್ಜಿ ಹಾಕಿದ ದಿನದಂದೇ ವೀಸಾ ಪಡೆಯುವ ಸೌಲಭ್ಯ ಇದೀಗ ಸಾಧ್ಯವಾಗಿದೆ ಎಂದು ತೆರೆಸಾ ಮೇ ಹೇಳಿದರು.
ಇನ್ನೊಬ್ಬರ ಅಭಿಪ್ರಾಯ ಕೇಳಿ ಅದಕ್ಕೆ ಮನ್ನಣೆ ನೀಡಿದಾಗ ಇದೆಲ್ಲಾ ಸಾಧ್ಯವಾಗುತ್ತದೆ. ಭಾರತದಿಂದ ಬರುವ ವ್ಯಾಪಾರಿಗಳು ಅವರ ಕೌಶಲ್ಯ, ಚಿಂತನೆ, ವ್ಯಾಪಾರ ವಹಿವಾಟನ್ನು ಇಲ್ಲಿಗೆ ತರುತ್ತಾರೆ ಮತ್ತು ಆ ಮೂಲಕ ಉಭಯ ರಾಷ್ಟ್ರಗಳ ಅಭಿವೃದ್ಧಿಗೆ ನೆರವಾಗುತ್ತಾರೆ ಎಂಬ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಕಾರಣ ಇದೆಲ್ಲಾ ಸಾಧ್ಯವಾಗಿದೆ ಎಂದ ಅವರು, ವ್ಯಾಪಾರ ಮತ್ತು ಹೂಡಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ನಾವು ಈ ಅಡೆತಡೆಗಳನ್ನು ನಿವಾರಿಸಬಹುದಾಗಿದೆ ಮತ್ತು ಈ ನಿಟ್ಟಿನಲ್ಲಿ ನಾವು ಗಮನ ಹರಿಸಿದ್ದೇವೆ. ಭಾರತದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿಸುವ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸಿದ್ದೇವೆ. ವಿಶ್ವದ ಪ್ರಮುಖ ಸೇವಾ ವಲಯಕ್ಕೆ ಭಾರತದಲ್ಲಿ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುವ ಕಾರ್ಯ ನಡೆಯಬೇಕಿದೆ ಮತ್ತು ಈ ನಿಟ್ಟಿನಲ್ಲಿ ನಾವು ಮುಂದಡಿ ಇಡುವ ಬಗ್ಗೆ ದೃಢ ಸಂಕಲ್ಪ ಮಾಡಿದ್ದೇವೆ ಎಂದರು.
ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗಳ ಬಗ್ಗೆ ಆಳವಾಗಿ ಮತ್ತು ಸಮಗ್ರವಾಗಿ ಚರ್ಚೆ ನಡೆಸಲಿದ್ದೇವೆ. ಉಭಯ ರಾಷ್ಟ್ರಗಳ ಉದ್ಯಮಿಗಳು, ರಫ್ತುದಾರರು , ವ್ಯಾಪಾರಿಗಳು ಮತ್ತು ಹೂಡಿಕೆದಾರರನ್ನು ಈ ನಿಟ್ಟಿನಲ್ಲಿ ಸಕ್ರಿಯಗೊಳಿಸಲು ಏನು ಮಾಡಬೇಕಾಗಿದೆ ಎಂಬ ಬಗ್ಗೆ ಪ್ರಧಾನಿ ಮೋದಿಯವರ ಜೊತೆ ಚರ್ಚಿಸಲಾಗುವುದು ಎಂದಿರುವ ತೆರೆಸಾ ಮೇ, ಈ ಪ್ರಕ್ರಿಯೆಗಳಿಗೆ ನಾವು ಯುರೋಪಿಯನ್ ಒಕ್ಕೂಟ ತೊರೆಯುವವೆಗೆ ಕಾಯುವ ಅಗತ್ಯವಿಲ್ಲ ಎಂದರು.





