ಕುರಿಗಾಹಿ ಹುಡುಗಿಯಿಂದ ಫ್ರಾನ್ಸಿನ ಶಿಕ್ಷಣ ವ್ಯವಸ್ಥೆ ಯ ಬದಲಾವಣೆ!!!
![ಕುರಿಗಾಹಿ ಹುಡುಗಿಯಿಂದ ಫ್ರಾನ್ಸಿನ ಶಿಕ್ಷಣ ವ್ಯವಸ್ಥೆ ಯ ಬದಲಾವಣೆ!!! ಕುರಿಗಾಹಿ ಹುಡುಗಿಯಿಂದ ಫ್ರಾನ್ಸಿನ ಶಿಕ್ಷಣ ವ್ಯವಸ್ಥೆ ಯ ಬದಲಾವಣೆ!!!](https://www.varthabharati.in/sites/default/files/images/articles/2016/11/8/Shepherd.png)
ಬದುಕಿನ ಬವಣೆಯಿಂದ ಹೊರಬಂದು ಬೆರಗಾಗುವ ಸಾಧನೆ ಮಾಡಿರುವ, ಕಷ್ಟಗಳ ಮೇಲೇರಿ ನಿಂತು ಸ್ಪಷ್ಟ ಗುರಿಯೆಡೆಗೆ ಸಾಗಿರುವ, ಸೋಲುಗಳ ಸೋಪಾನದಲ್ಲಿ ಗೆಲುವುಗಳ ಶಿಖರ ಕಟ್ಟಿಕೊಂಡಿರುವ, ನರಕ ಯಾತನೆ ಅನುಭವಿಸಿಯೂ ನಕ್ಷತ್ರಗಳಾಗಿ ಮಿನುಗಿರುವ ಅನೇಕ ಧೃವ ತಾರೆಗಳನ್ನು ನಾವು-ನೀವೆಲ್ಲರೂ ಕಂಡು-ಕೇಳಿ ಬೆಳೆದವರೇ ಆಗಿದ್ದೀವಿ.
ಜೀವನದ ಬಗ್ಗೆ ಧನಾತ್ಮಕ ಭಾವನೆಯಿದ್ದು ಪರಿಶ್ರಮ ಪಟ್ಟಾಗ ಅತ್ಯುನ್ನತ ಸಾಧನೆಯು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಗೆಲ್ಲಲೇಬೇಕೆಂಬ ಛಲಕ್ಕೆ ಗೊಂದಲವನ್ನು ನಿವಾರಿಸಿಕೊಂಡು ಗೆಲುವನ್ನಾಗಿ ಪರಿವರ್ತಿಸುವ, ಕಹಿಯನ್ನು ಸಿಹಿಯಾಗಿಸುವ, ಹತಾಶೆಯನ್ನು ಹಠವಾಗಿಸುವ ಮಾಂತ್ರಿಕ ಶಕ್ತಿಯಿರುತ್ತದೆ.
ಯಶಸ್ಸಿನ ಹಾದಿಯಲ್ಲಿ ವ್ಯಕ್ತಿಯು ಸಾಗುತ್ತಿರುವ ದಿಕ್ಕು ಮುಖ್ಯವಾಗುತ್ತದೆಯೇ ವಿನಃ ಆತನ ಮೂಲವಲ್ಲ. ಸಂಕಲ್ಪ ಉನ್ನತವಾಗಿದ್ದಾಗ, ಮನದಲ್ಲಿ ಗೆಲುವಿನೆಡೆಗೆ ಸಾಗುವ ದೃಢ ಮನಸ್ಸಿದ್ದಾಗ ಆತನ ಹಿನ್ನೆಲೆಯು ಗೌಣವಾಗಿ ಅತ್ಯುನ್ನತ ಸಾಧನೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾನೆ. ಇಂತಹ ಅನೇಕ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಸತ್ವಶೀಲ, ಮೋಹಕ ಮಹಿಳೆಯಾದ ನಜತ್ ಬೆಲ್ಕಾಸೆಮ್ ಇದೀಗ ಸುದ್ದಿ ಮಾಡಿದ್ದಾರೆ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಛಲವೊಂದಿದ್ದಲ್ಲಿ ಕನಸನ್ನು ನನಸಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಕ್ಕಳಿಗೆ ವೌಲ್ಯಾಧಾರಿತ ಹಾಗೂ ಸಮಾಜದ ಮುಖ್ಯವಾಹಿನಿಗೆ ತರಲು ಯಶಸ್ವಿಯಾಗುವಂತಹ ಶಿಕ್ಷಣವನ್ನು ನೀಡಿದಲ್ಲಿ ಅದರ ಪ್ರತಿಫಲವಾಗಿ ಸುಶಿಕ್ಷಿತ, ಸಮೃದ್ಧ ಹಾಗೂ ಶಾಂತಿಯುತ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಲು ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಮೊರಾಕ್ಕೊ ದೇಶದ ಗುಡ್ಡಗಾಡು ಪ್ರದೇಶವಾದ ಬೇನಿ ಶಿಕರ್ ಎಂಬ ಕುಗ್ರಾಮದಲ್ಲಿ 1977ನೆ ಇಸವಿಯಲ್ಲಿ ಬಡ ಮುಸ್ಲಿಂ ದಂಪತಿಗಳಿಗೆ ಎರಡನೆಯವಳಾಗಿ ಜನಿಸಿದ ನಜತ್ಳ ಬಾಲ್ಯ ಸುಖಕರವಾಗೇನು ಇರಲಿಲ್ಲ. ಹಿರಿಯ ಸಹೋದರಿ ಪಾತಿಹಾ ಜೊತೆಗೂಡಿ ಹತ್ತಿರದ ಬಾವಿಯಿಂದ ನೀರು ಸೇದಿ ತರುವ ಹಾಗೂ ಕುರಿಗಳಿಗೆ ಗುಡ್ಡಗಳಲ್ಲಿ ಮೇವು ಮೇಯಿಸುವ ಕೆಲಸವನ್ನು ಮಾಡಿ ತಾಯಿಗೆ ಕುಟುಂಬ ನಿರ್ವಹಣೆಯಲ್ಲಿ ಸಹಾಯಕಳಾಗಿರುತ್ತಾಳೆ.
ಫ್ರಾನ್ಸಿನಲ್ಲಿ ಕಟ್ಟಡ ಕೆಲಸಗಾರನಾಗಿದ್ದ ನಜತ್ಳ ತಂದೆಯು ಆಕೆಗೆ ನಾಲ್ಕು ವರ್ಷ ತುಂಬುವುದೊರಳಗಾಗಿಯೇ ಸಂಸಾರವನ್ನು ಪ್ಯಾರೀಸ್ ನಗರಕ್ಕೆ ಸುಮಾರು 80 ಮೈಲು ದೂರದಲ್ಲಿರುವ ಅಮೀನ್ ಎಂಬ ನಗರದ ಹೊರವಲಯ ಪ್ರದೇಶಕ್ಕೆ ಸ್ಥಳಾಂತರಗೊಳಿಸುತ್ತಾನೆ.
ನಾಗರಿಕತೆಯು ಸೋಂಕು ತಟ್ಟದ ಅಪ್ಪಟ ಗ್ರಾಮೀಣ ಸೊಗಡಿನ ಶಾಂತ ಪ್ರದೇಶವನ್ನು, ಶಿಥಿಲಗೊಂಡಿದ್ದ ಮಣ್ಣಿನ ಗೋಡೆಗಳ ಹುಲ್ಲಿನ ಛಾವಣಿಯ ಮನೆಗಳನ್ನು ಮಾತ್ರ ಕಂಡಿದ್ದ ನಜತ್ ಬೊಬ್ಬಿರಿಯುವ ನಗರ ಪ್ರದೇಶವನ್ನು, ಮುಗಿಲೆತ್ತರದ ಕಾಂಕ್ರಿಟ್ ಕಟ್ಟಡಗಳನ್ನು ಕಂಡು ಅಕ್ಷರಶಃ ಸಾಂಸ್ಕೃತಿಕ ಆಘಾತಕ್ಕೆ ಒಳಗಾಗುತ್ತಾಳೆ.
ಧಾರ್ಮಿಕ ಮನೋಭಾವದ ತಂದೆಯು ಮಕ್ಕಳಿಗೆ ನೈಟ್ ಕ್ಲಬ್ಗಳ ಹಾಗೂ ಹುಡುಗರ ಸಹವಾಸದಿಂದ ದೂರವಿರುವಂತೆ ಮಾಡಿದ ಕಟ್ಟಪ್ಪಣೆಯಿಂದ ಭಾಷೆಯರಿಯದ ನಾಡಿನಲ್ಲಿ ತನ್ನೆಲ್ಲಾ ಶಕ್ತಿಯನ್ನು ಓದಿಗಾಗೇ ವ್ಯಯ ಮಾಡಿದ ನಜತ್ ಉತ್ತಮ ವಿದ್ಯಾಭ್ಯಾಸವನ್ನು ಪಡೆಯಲು ಸಫಲಳಾಗುತ್ತಾಳೆ.
ಶಿಕ್ಷಕಿಯೊಬ್ಬರ ತಿರಸ್ಕಾರದ ನುಡಿಯನ್ನು ಕೇಳಿಯೂ ನಜತ್ ಪ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸ್ಟಡೀಸ್ನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿ ಸೇರಿ 2002 ನೆ ಇಸವಿಯಲ್ಲಿ ಪದವಿಯನ್ನು ಪಡೆಯುತ್ತಾಳೆ. ನಂತರ, ಪೋಷಕರಿಗೆ ಹೊರೆಯಾಗದಂತೆ ಎರಡು ಅರೆಕಾಲಿಕ ಕೆಲಸಗಳನ್ನು ನಿರ್ವಹಿಸಿಕೊಂಡು ಸಾರ್ವಜನಿಕ ಆಡಳಿತದಲ್ಲಿ ಸ್ನಾತ್ತಕೋತ್ತರ ಪದವಿ ಪಡೆಯುತ್ತಾಳೆ. ಇದೇ ಸಂದರ್ಭದಲ್ಲಿ ತನ್ನ ಸಹಪಾಠಿ ಬೋರಿಸ್ ವಲ್ಲೌದ್ನನ್ನು ವರಿಸುತ್ತಾಳೆ.
ನಾಚಿಕೆ ಹಾಗೂ ಹಿಂಜರಿಕೆ ಸ್ವಭಾವದ, ರಾಜಕೀಯ ಹಿನ್ನೆಲೆಯಿರದ ನಜತ್ ವಲ್ಲೌದ್ ಬೆಲ್ಕಾಸೆಮ್ ಫ್ರಾನ್ಸಿನ ಬಲಪಂಥೀಯರ ಆಡಳಿತದ ಲೋಪದೋಷಗಳನ್ನು ಮಾತ್ರ ಖಂಡಿಸುತ್ತಿದ್ದರು. ಅಲ್ಲದೆ, ಅವರ ಪೋಷಕರು ಸಹಾ ಫ್ರಾನ್ಸಿನ ಬಲಪಂಥೀಯರಾದ ಜೀನ್-ಮೇರಿ ಲೆ ಪೆನ್ನನ್ನು ಬಲವಾಗಿ ಖಂಡಿಸುತ್ತಿದ್ದರು. ಆದರೆ, ರಾಷ್ಟ್ರೀಯ ರಂಗದ ವತಿಯಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಜೀನ್-ಮೇರಿ ಲೆ ಪೆನ್ ಆಯ್ಕೆಯಾಗುತ್ತಿದ್ದಂತೆ ಉಗ್ರ ಬಲಪಂಥೀಯರು ವಲಸಿಗರ ಹಾಗೂ ಅನ್ಯ ಜನಾಂಗೀಯರ ಬಗ್ಗೆ ಅಸಹನೆಯನ್ನು ಹೊಂದಿರುವ ಬಗ್ಗೆ ಅರಿವಿದ್ದ ನಜತ್ ವಲ್ಲೌದ್ ಬೆಲ್ಕಾಸೆಮ್ ಅದರಿಂದ ಜಾಗೃತಳಾಗುತ್ತಾರೆ.
ನಜತ್ ವಲ್ಲೌದ್ ಬೆಲ್ಕಾಸೆಮ್ ರಾಜಕೀಯವೆಂಬ ಕೆಸರೆರಚಾಟದಲ್ಲಿ ತೊಡಗಲು ನಿರ್ಧರಿಸಿ ಸಮಾಜವಾದಿ ಪಕ್ಷವನ್ನು 2002ನೆ ಇಸವಿಯಲ್ಲಿ ಸೇರುತ್ತಾಳೆ. ಸಮಾಜವಾದಿ ಪಕ್ಷವನ್ನು ಸೇರಿದ ಕೂಡಲೇ ನಾಗರಿಕ ಹಕ್ಕುಗಳಿಗಾಗಿ, ಸರ್ವರಿಗೂ ಸೂರಿಗಾಗಿ ಮತ್ತು ಉದ್ಯೋಗಕ್ಕಾಗಿ ಹೋರಾಡಿದ ನಜತ್ ವಲ್ಲೌದ್ ಬೆಲ್ಕಾಸೆಮ್ ಜನಾಂಗೀಯ ತಾರತಮ್ಯದ ವಿರುದ್ಧ ದನಿಯೆತ್ತುತ್ತಾರೆ. ನಂತರ, 2003ನೆ ಇಸವಿಯಲ್ಲಿ ಫ್ರಾನ್ಸಿನ ಎರಡನೆ ಅತಿ ದೊಡ್ಡ ನಗರವಾದ ಲಿಯೋನ್ನ ಮೇಯರ್ ಗೆರಾರ್ಡ್ ಕೊಲ್ಲೋಂಬ್ರವರ ಸಲಹೆಗಾರಳಾಗಿ ಕೆಲಸ ಮಾಡುತ್ತಾಳೆ. ನಂತರ ಈ ಭಾಗದ ಸದಸ್ಯೆಯ ಚುನಾವಣೆಯಲ್ಲಿ ನಿಂತು ಗೆಲ್ಲುತ್ತಾಳೆ.
ಫ್ರಾನ್ಸಿನಲ್ಲಿ ಕೆಳ ಅಥವಾ ಮಧ್ಯಮ ವರ್ಗದ ಜನ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯವಾದ ಪರಿಸ್ಥಿತಿಯಿದ್ದು ರಾಜಕೀಯವು ಪ್ರತಿಷ್ಠ್ಠಿತರ, ಹಣವುಳ್ಳವರ ಹಾಗೂ ಬಿಳಿಯರ ಸ್ವತ್ತಾಗಿದ್ದು ಅಪಾರ ವಿರೋಧದ ನಡುವೆಯೂ ನಜತ್ ವಲ್ಲೌದ್ ಬೆಲ್ಕಾಸೆಮ್ ಜಯದ ನಗೆ ಬೀರುತ್ತಾಳೆ.
ರೋಣೆ-ಆಲ್ಪ್ಸ್ನ ಕೌನ್ಸಿಲ್ ಮಹಿಳೆಯಾಗಿ 2004ನೆ ಇಸವಿಯಲ್ಲಿ ಆಯ್ಕೆಯಾದ ನಜತ್ ವಲ್ಲೌದ್ ಬೆಲ್ಕಾಸೆಮ್ 2008 ನೆ ಇಸವಿಯವರೆಗೂ ಅಧಿಕಾರದಲ್ಲಿದ್ದು ನಂತರ ರೋಣೆಯ ಕೌನ್ಸಿಲ್ ಜನರಲ್ ಆಗಿ ನಾಮಾಂಕಿತಗೊಂಡು ಫ್ರಾನ್ಸ್ನ ರಾಜಕೀಯದಲ್ಲಿ ಭದ್ರವಾಗಿ ಬೇರೂರುತ್ತಾರೆ.
ಆದರೆ, ರಾಜಕೀಯದ ಹಾದಿಯು ಸುಗಮವಾಗಿರಲಿಲ್ಲ. ಹೆಜ್ಜೆಹೆಜ್ಜೆಗೂ ಅಡೆತಡೆಗಳಿದ್ದು ಕಲ್ಲು ಮುಳ್ಳಿನ ದಾರಿಯಲ್ಲಿ ದೃಢಚಿತ್ತದಿಂದ ಸಾಗಿ ಗುರಿ ಮುಟ್ಟಲು ಯಶಸ್ವಿಯಾಗುತ್ತಾರೆ. ಕುರಿಗಾಹಿಯಾಗಿದ್ದ ನಜತ್ಳ ಬಾಲ್ಯ, ಬಡತನ, ಮುಸ್ಲಿಂ ಧರ್ಮ ಮತ್ತು ವಲಸಿಗರು ಎಂಬ ವಿಷಯಗಳು ಸಂಪ್ರದಾಯ ನಿಷ್ಠೆ ರಾಜಕಾರಣಗಳಿಗೆ ಆಕೆಯನ್ನು ಹಳಿಯಲು ಅಸ್ತ್ರವಾಗುತ್ತವೆ. ಆದರೆ, ಇಂತಹ ಟೀಕೆಗಳಿಂದ ಎದೆಗುಂದದ ನಜತ್ ವಲ್ಲೌದ್ ಬೆಲ್ಕಾಸೆಮ್ ಮನ್ನುಗ್ಗುತ್ತಾ ನಡೆಯುತ್ತಾಳೆ. ಎಳೆ ವಯಸ್ಸಿನಲ್ಲೇ ಉನ್ನತ ಸ್ಥಾನ ಅಲಂಕರಿಸಿದ್ದನ್ನು ಕಂಡು ಮತ್ತಷ್ಟು ವಿಚಲಿತರಾದ ಬಲಪಂಥೀಯರು ಆಕೆಯ ವಸ್ತ್ರ ವಿನ್ಯಾಸದ ಬಗ್ಗೆ ಕುಹುಕ ನುಡಿಗಳನ್ನಾಡಿ ಚಾರಿತ್ರ್ಯ ವಧೆಗೂ ಕೈ ಹಾಕುತ್ತಾರೆ.
ನಂತರ 2012ನೆ ಇಸವಿಯಲ್ಲಿ ಫ್ರಾಂಕೋಯಿಸ್ ಹೊಲ್ಲಂಡೆಯ ಮಂತ್ರಿಮಂಡಲದಲ್ಲಿ ಮಹಿಳಾ ವ್ಯವಹಾರದ ಸಚಿವೆಯಾಗುತ್ತಾಳೆ. ಕೂಡಲೇ ಬಲಪಂಥೀಯರು ದ್ವಿ-ಪೌರತ್ವ ಹೊಂದಿರುವ ಆಕೆಯ ನೇಮಕವನ್ನು ಜರಿಯುತ್ತಾರೆ. ಆದರೆ, ಸರಕಾರದಲ್ಲಿನ ಸ್ನೇಹಿತರು ಮತ್ತು ಉದ್ಯಮಿಗಳು ಆಕೆಯ ಬಗಲಿಗೆ ನಿಲ್ಲುತ್ತಾರೆ. ಮಹಿಳಾ ವ್ಯವಹಾರದ ಸಚಿವೆಯಾಗಿ ಮಹಿಳೆಯರ ಲೈಂಗಿಕ ಶೋಷಣೆಯನ್ನು ಕಡಿಮೆಗೊಳಿಸಲು ಹಾಗೂ ಲಿಂಗ ತಾರತಮ್ಯವನ್ನು ಕೊನೆಗಾಣಿಸಲು ಶ್ರಮಿಸುತ್ತಾರೆ.
ಅತೀ ಪ್ರಾಮುಖ್ಯತೆಯ ಶಿಕ್ಷಣ ಮಂತ್ರಿಯಾಗಿ 2014ನೆ ಇಸವಿಯಲ್ಲಿ ಅಧಿಕಾರ ವಹಿಸಿಕೊಂಡ ನಜತ್ ವಲ್ಲೌದ್ ಬೆಲ್ಕಾಸೆಮ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವತ್ತಾ ತನ್ನ ಚಿತ್ತ ಹರಿಸುತ್ತಾರೆ. ಫ್ರಾನ್ಸ್ನ ಇತಿಹಾಸದಲ್ಲಿ ಮಹಿಳೆಯೊಬ್ಬರು ಹಾಗೂ ಮುಸ್ಲಿಂ ಧರ್ಮೀಯರೊಬ್ಬರು ಶಿಕ್ಷಣ ಸಚಿವರಾಗಿದ್ದು ಇದೇ ಪ್ರಥಮವಾಗಿರುತ್ತದೆ. ನಜತ್ ವಲ್ಲೌದ್ ಬೆಲ್ಕಾಸೆಮ್ ಶಿಕ್ಷಣ ಸಚಿವೆಯಾದ ಸಂದರ್ಭದಲ್ಲಿ ಉಗ್ರ ಬಲಪಂಥೀಯ ನಿಯತಕಾಲಿಕವೊಂದು ಪ್ರಚೋದನೆಯೆಂದು ಬಣ್ಣಿಸಿದರೆ ಮತ್ತೆ ಕೆಲವು ಸಾಧಾರಣ ಬಲಪಂಥೀಯ ನಿಯತಕಾಲಿಕಗಳು ಆಕೆಯನ್ನು ಇರಾನಿನ ಧಾರ್ಮಿಕ ಮುಖಂಡನಾದ ಆಯತುಲ್ಲಾ ಖೊಮೇನಿಗೆ ಹೋಲಿಸುತ್ತವೆ.
ಪ್ರಾಥಮಿಕ ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಅರೆಬಿಕ್ ಭಾಷೆಯಲ್ಲಿ ಪಾಠ-ಪ್ರವಚನ ನೀಡಬೇಕೆಂಬ ಆದೇಶವನ್ನು ಆಕೆಯ ಸಹಿಯನ್ನು ನಕಲಿ ಮಾಡಿ ಸುಳ್ಳು ಸುದ್ದಿಯನ್ನು ಹರಡಿಸಿ ಆಕೆಯ ಆಡಳಿತ ಶೈಲಿಯನ್ನು ಖಂಡಿಸಿದುದಲ್ಲದೇ ಫ್ರಾನ್ಸ್ನ ಶಾಲೆಗಳನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆಂದು ಆರೋಪಿಸಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತದೆ. ನಜತ್ ವಲ್ಲೌದ್ ಬೆಲ್ಕಾಸೆಮ್ ತಮ್ಮ ರಾಜಕೀಯ ಮೇಲ್ಗೈಗಾಗಿ ತಮ್ಮ ಅರಬ್ ಮೂಲವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸುವ ಬಲಪಂಥೀಯರ ವಾದವನ್ನು ನಿಜವೆಂದು ನಂಬಿದ ಸಾಧಾರಣ ಬಲಪಂಥೀಯರು ಹಾಗೂ ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಸಿ ಸುಳ್ಳುಗಳನ್ನು ಹರಿಯಬಿಟ್ಟು ಅವರ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಾರೆ. ಆದರೆ, ನಜತ್ ವಲ್ಲೌದ್ ಬೆಲ್ಕಾಸೆಮ್ ಶಿಕ್ಷಣದಲ್ಲಿ ಧರ್ಮವನ್ನು ತೂರಿಸಿದರೆ ಮುಂದೊಮ್ಮೆ ವಿದ್ಯಾರ್ಥಿಗಳು ಅವರುಗಳು ಪಡೆದ ಶಿಕ್ಷಣ ವೈಖರಿಯನ್ನೇ ಪ್ರಶ್ನಿಸುವುದರಲ್ಲಿ ಸಂಶಯವಿಲ್ಲ ಎಂದು ನಂಬಿದ್ದರು.
ಇನ್ನೊಮ್ಮೆ, ಜಿನೀವಾ ಮೂಲದ ನ್ಯಾಯಾಂಗ ಸಚಿವೆ ಕ್ರಿಸ್ತೈನ್ ತೌಬೀರರವರು ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸುವ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗ ಮಹಿಳೆಯರ ವ್ಯವಹಾರದ ಕಿರಿಯ ಸಚಿವೆಯಾದ ನಜತ್ ವಲ್ಲೌದ್ ಬೆಲ್ಕಾಸೆಮ್ ಈ ಸಂಬಂಧ ಒಂದು ಪ್ರಯೋಗಾತ್ಮಕವಾದ ಯೋಜನೆಯನ್ನು ಶಿಕ್ಷಣದಲ್ಲಿ ಅಳವಡಿಸಲು ಯೋಜಿಸಿದಾಗ ಉಗ್ರ ಬಲಪಂಥೀಯ ರಾಜಕೀಯ ನಾಯಕರುಗಳು ಹಾಗೂ ಸಂಪ್ರದಾಯವಾದಿ ಕೆಥೊಲಿಕನ್ನರು ಈ ಇಬ್ಬರು ಸಚಿವರ ಲಿಂಗ ಭೇದವನ್ನು ನಾಶಮಾಡಲು ಹೊರಟಿರುವವರು ಎಂದು ದೋಷಾರೋಪಣೆ ಮಾಡುತ್ತಾರೆ.
2015 ಜನವರಿ 7 ರಂದು ‘ಚಾರ್ಲಿ ಹೆಬ್ಡೊ’ ನಿಯತಕಾಲಿಕದ ಮೇಲೆ ಉಗ್ರರ ದಾಳಿ ನಡೆದಾಗ ನಜತ್ ವಲ್ಲೌದ್ ಬೆಲ್ಕಾಸೆಮ್ ಶಾಲಾ ವಾರ್ಷಿಕೋತ್ಸವದ ಆಚರಣೆಗಾಗಿ ರೂಪು-ರೇಷೆಗಳನ್ನು ಅಂತಿಮಗೊಳಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆೆ ನಡೆಸುತ್ತಿರುತ್ತಾರೆ. ದಾಳಿಯ ವಿಷಯ ತಿಳಿದ ಕೂಡಲೇ ಸಮಚಿತ್ತದಿಂದ ವರ್ತಿಸಿದ ನಜತ್ ವಲ್ಲೌದ್ ಬೆಲ್ಕಾಸೆಮ್ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಮಕ್ಕಳ ಸುರಕ್ಷತೆಯ ಕಡೆಗೆ ಗಮನ ಹರಿಸುತ್ತಾರೆ.
‘ಚಾರ್ಲಿ ಹೆಬ್ಡೊ’ ನಿಯತಕಾಲಿಕದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹತರಾದವರಿಗೆ ಸಂತಾಪ ಸೂಚಿಸಲು ಶಾಲೆಗಳಲ್ಲಿ ವೌನ ಆಚರಿಸಲು ಸುತ್ತೋಲೆ ಹೊರಡಿಸಲಾಗುತ್ತದೆ. ಆದರೆ, ಅನೇಕ ಶಾಲೆಗಳಲ್ಲಿ ಮುಸ್ಲಿಂ ಧರ್ಮದ ಯುವಕರು ಸಂತಾಪ ಸೂಚಿಸಲು ನಿರಾಕರಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ದೇಶದ ಗಮನವನ್ನು ಸೆಳೆದು ಶಿಕ್ಷಣ ಇಲಾಖೆಗೆ ಭಾರೀ ತಲೆನೋವಾಗಿ ಪರಿಣಮಿಸಿತು. ಮುಸ್ಲಿಂ ವಿದ್ಯಾರ್ಥಿಗಳು ಉಗ್ರರ ಬಗ್ಗೆ ಮೃದು ಧೋರಣೆ ತಳೆದಿದ್ದು ದಾಳಿಯ ಹಿಂದೆ ಇಸ್ರೇಲ್ ಅಥವಾ ಅಮೆರಿಕ ಕೈವಾಡದ ಬಗ್ಗೆ ಶಂಕಿಸುತ್ತಿದ್ದರು.
ಈ ಘಟನೆಯಿಂದ ಫ್ರಾನ್ಸಿನ ಮುಸ್ಲಿಮರು ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಫ್ರಾನ್ಸಿನ ಸಾಮಾಜಿಕ ವ್ಯವಸ್ಥೆಯಿಂದ ಭ್ರಮನಿರಸನಗೊಂಡ ಅನ್ಯ ಧರ್ಮೀಯ ಯುವಕರು ತಮ್ಮ ಅಸ್ತಿತ್ವಕ್ಕಾಗಿನ ಉತ್ತರವನ್ನು ತಮ್ಮ ಧರ್ಮದ ಶ್ರೇಷ್ಠತೆಯನ್ನು ಸಾರುವುದರಲ್ಲಿ ಕಂಡುಕೊಂಡಿರುತ್ತಾರೆ. ಆದ್ದರಿಂದಲೇ ಫ್ರಾನ್ಸಿನ ಗಣತಂತ್ರದ ವೌಲ್ಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಭಾವಿಸಲಾಗಿರುತ್ತದೆ. ಫ್ರಾನ್ಸಿನ ಆಡಳಿತಗಾರರು ಧಾರ್ಮಿಕ ಹಾಗೂ ಜನಾಂಗೀಯ ದ್ವೇಷವನ್ನು ನಿವಾರಿಸುವತ್ತ್ತ ಶಾಲಾ ಶಿಕ್ಷಣದ ಕಡೆ ಮುಖ ಮಾಡುತ್ತಾರೆ. ವಿಮುಖಗೊಂಡ ಮುಸ್ಲಿಂ ಯುವಕರನ್ನು ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಜತ್ ವಲ್ಲೌದ್ ಬೆಲ್ಕಾಸೆಮ್ ಹೆಗಲಿಗೆ ಬೀಳುತ್ತದೆ.ಮುಸ್ಲಿಂ ಯುವಕರು ಫ್ರಾನ್ಸಿನ ಗಣತಂತ್ರದ ವೌಲ್ಯಗಳನ್ನು ಧಿಕ್ಕರಿಸುವತ್ತ ಪ್ರಥಮ ಆದ್ಯತೆಯನ್ನು ನೀಡುತ್ತಾರೆ ಎಂಬುದನ್ನು ಹಿಂದಿನ ಅನುಭವಗಳಿಂದ ತಿಳಿದಿದ್ದ ನಜತ್ ವಲ್ಲೌದ್ ಬೆಲ್ಕಾಸೆಮ್ ದಾರಿ ತಪ್ಪಿದ ಮುಸ್ಲಿಂ ಯುವಕರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಿ ಜನಾಂಗೀಯ ವಿಭಿನ್ನತೆಯನ್ನು ಗುರುತಿಸುವ ಕೆಲಸ ಮಾಡುತ್ತಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅನ್ಯ ಧರ್ಮೀಯರ ಅಸಹಕಾರ ಮತ್ತು ಅಸಹನೆ ಬಗ್ಗೆ ಕೊನೆಯಿಲ್ಲದ ಚರ್ಚೆಗಳಿಂದಾಗಿ ಬೇಸತ್ತು ಹೋಗಿದ್ದ ಮುಸ್ಲಿಂ ಧರ್ಮೀಯರಿಗೆ ವಿಶ್ವಾಸ ಮೂಡುವಂತೆ ಶಾಲೆಗಳಲ್ಲೇ ಎಲ್ಲರೂ ಒಂದೇ ಕುಟುಂಬವಿದ್ದಂತೆ ಎಂಬುದನ್ನು, ಎಲ್ಲರೂ ಸಮಾನರು ಹಾಗೂ ಸ್ವತಂತ್ರರು ಎಂಬ ಭಾವನೆ ಬರುವಂತೆ ಪಠ್ಯಕ್ರಮಗಳನ್ನು ಸೇರಿಸಬೇಕೆಂದು ಅಲೋಚಿಸುತ್ತಾರೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯು 2012ನೆ ಇಸವಿಯಲ್ಲಿ ನಡೆಸಿದ ಅಧ್ಯಯನದಲ್ಲಿ ವಲಸಿಗರು ಹಾಗೂ ಅನ್ಯ ಜನಾಂಗೀಯದವರಿಗೂ ಮತ್ತು ಮೂಲ ವಾಸಿಗಳಿಗೂ ಯೂರೋಪಿಗಿಂತ ಫ್ರಾನ್ಸ್ನಲ್ಲಿ ಶೈಕ್ಷಣಿಕ ತಾರತಮ್ಯವು ಅಪಾರವಾಗಿರುವುದು ತಿಳಿದುಬಂದಿರುತ್ತದೆ. ಅರ್ಧದಲ್ಲೇ ಶಾಲೆಯಿಂದ ಹೊರಗುಳಿಯುವವರ ಸಂಖ್ಯೆಯು ವಲಸಿಗರು ಹಾಗೂ ಅನ್ಯ ಜನಾಂಗೀಯದವರಲ್ಲಿ ಜಾಸ್ತಿ ಪ್ರಮಾಣದಲ್ಲಿರುವುದು ಸಹಾ ಕಂಡುಬಂದಿರುತ್ತದೆ.
ಇತಿಹಾಸ ಪ್ರಸಿದ್ಧ ಫ್ರಾನ್ಸಿನ ಶಿಕ್ಷಣ ತಜ್ಞ ಜೂಲ್ಸ್ ಪೆರ್ರಿ ರವರು ರೋಮನ್ ಕೆಥೊಲಿಕ್ ಚರ್ಚ್ನ ಕಪಿಮುಷ್ಟಿಯಿಂದ ಶಿಕ್ಷಣ ವ್ಯವಸ್ಥೆಯನ್ನು 1880ನೆ ಇಸವಿಯಲ್ಲಿ ಬಿಡಿಸಿ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆ ತಂದಂತೆ ಪ್ರಸ್ತುತ ಸಾಮಾಜಿಕ-ಧಾರ್ಮಿಕ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡಿ ಸರ್ವರನ್ನೂ ಒಳಗೊಂಡು ಸುಸ್ಥಿರ ಸಮಾಜ ಕಟ್ಟುವಂತಹ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲು ಫ್ರಾನ್ಸಿನ ಶಿಕ್ಷಣ ಪದ್ಧತಿಗೆ ಆಮೂಲಾಗ್ರ ಬದಲಾವಣೆಯನ್ನು ನಜತ್ ವಲ್ಲೌದ್ ಬೆಲ್ಕಾಸೆಮ್ರವರು ತಂದಿದ್ದಾರೆ. ವಲಸಿಗಳಾಗಿ, ಅನ್ಯ ಧರ್ಮೀಯಳಾಗಿ ವಲಸಿಗರ ಹಾಗೂ ಅನ್ಯ ಧರ್ಮೀಯರ ಹಕ್ಕುಗಳ ಬಗ್ಗೆ ಜೋರು ಧ್ವನಿ ಎತ್ತಿ ಅವರುಗಳ ಮುಖವಾಣಿಯಾಗುವಂತೆ ವಲಸಿಗರು ಹಾಗೂ ಅನ್ಯ ಧರ್ಮೀಯರು ಬಯಸಿದ್ದಾಗ್ಯೂ ಸಹ ತಾನು ಇಡೀ ಫ್ರಾನ್ಸಿಗೇ ಶಿಕ್ಷಣ ಮಂತ್ರಿಯೆಂಬುದನ್ನು ಮರೆಯದ ನಜತ್ ವಲ್ಲೌದ್ ಬೆಲ್ಕಾಸೆಮ್ ಜನಾಂಗೀಯ ವಿಭಿನ್ನತೆಯನ್ನು ಪ್ರತಿಪಾದಿಸುವ ಮುಖವಾಣಿಯಾಗಲು ಇಚ್ಛಿಸುವುದಿಲ್ಲ. ಆದರೆ, ಜನಾಂಗೀಯ ಅಲ್ಪ ಸಂಖ್ಯಾತರಿಗೆ ಸರಕಾರದಲ್ಲಿನ ಆಯಕಟ್ಟಿನ ಹುದ್ದೆಗಳನ್ನು ನೀಡಬೇಕು ಎಂಬುದು ಅವರ ಅಚಲ ನಿಲುವಾಗಿದ್ದು ಆಡಳಿತದಲ್ಲಿ ಎಲ್ಲರನ್ನೂ ಒಳಗೊಂಡಾಗ ಸುಭದ್ರ ರಾಷ್ಟ್ರ ಕಟ್ಟಲು ಸಾಧ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ವಲಸಿಗಳಾಗಿ, ಅನ್ಯ ಧರ್ಮೀಯಳಾಗಿ, ಮೂಲ ನಿವಾಸಿಗಳಿಗಿರುವಂತಹ ಸವಲತ್ತುಗಳಿಂದ ವಂಚಿತಳಾಗಿ, ಸುಖಕರ ಬಾಲ್ಯವಿಲ್ಲದೇ ತಾನೂ ಸಹ ಅಡ್ಡ ದಾರಿ ಹಿಡಿಯಬಹುದಾಗಿತ್ತು. ಆದರೆ, ಅವುಗಳೆಲ್ಲವನ್ನು ಮೀರಿ ವಿದ್ಯೆ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದಂತೆ ಎಲ್ಲಾ ವಲಸಿಗರು ಹಾಗೂ ಅನ್ಯ ಧರ್ಮೀಯರು ತನ್ನನ್ನು ಅನುಕರಿಸಲು ಕೋರಿದ್ದಾರೆ.
ನಜತ್ ವಲ್ಲೌದ್ ಬೆಲ್ಕಾಸೆಮ್ ಎಲ್ಲಾ ನಿರ್ಧಾರಗಳನ್ನು ಬೆಂಬಲಿಸುವ ಅಧ್ಯಕ್ಷರಾದ ಫ್ರಾಂಕೋಯಿಸ್ ಹೊಲ್ಲಾಂಡೆ ರವರು ಅವರ ಬೆನ್ನಿಗೆ ನಿಲ್ಲುತ್ತಾರೆ.
ಗುರಿ ಮುಟ್ಟಲು ವಿಭಿನ್ನ ದಾರಿ ತಿಳಿದ ನಜತ್ ವಲ್ಲೌದ್ ಬೆಲ್ಕಾಸೆಮ್ ವಲಸಿಗರಿಗೆ ಹಾಗೂ ಅನ್ಯ ಧರ್ಮಿಯರಿಗೆ ಕಷ್ಟ ಸಾಧ್ಯವಾದ ಸಾಧನೆ ಮಾಡಿ ಎಲ್ಲಾ ವಲಸಿಗರಲ್ಲಿ ಹಾಗೂ ಅನ್ಯ ಧರ್ಮೀಯರಲ್ಲಿ ಕನಸಿನ ಬೀಜ ಬಿತ್ತಲು ಸ್ಫೂರ್ತಿಯಾಗಿದ್ದಾರೆ.
‘‘ನೀವು ಪ್ರಯತ್ನಿಸುತ್ತಿರುವಷ್ಟು ದಿನವೂ ಸೋಲುವುದು ತಪ್ಪಾಗುವುದಿಲ್ಲ’’ ಎನ್ನುವ ನಜತ್ ವಲ್ಲೌದ್ ಬೆಲ್ಕಾಸೆಮ್ ‘‘ಚಿಂತಿಸದಿರಿ, ನೀವು ಅಂದುಕೊಂಡಿರುವುದಕ್ಕಿಂತಲೂ ಬದುಕು ಸುಂದರವಾಗಿರುತ್ತದೆ’’ ಎನ್ನುತ್ತಾ ಆಶಾಭಾವನೆ ಕಳೆದುಕೊಂಡಿರುವವರಲ್ಲಿ ಚೈತನ್ಯ ಮೂಡಿಸಲು ಪ್ರಯತ್ನಿಸಿದ್ದಾರೆ