ಟಿಪ್ಪುಸುಲ್ತಾನ್ ಒಬ್ಬ ಪೇಪರ್ ಟೈಗರ್: ಪ್ರತಾಪ್ ಸಿಂಹ
.jpg)
ಹಾಸನ, ನ.8: ಟಿಪ್ಪು ಸುಲ್ತಾನ್ ಒಬ್ಬ ಪೇಪರ್ ಟೈಗರ್, ನಿಜವಾದ ಸುಲ್ತಾನನಲ್ಲ ಎಂದು ತಿಳಿದಿದ್ದರೂ ಕಾಂಗ್ರೆಸ್ ಟಿಪ್ಪುವನ್ನು ಹೀರೋ ಆಗಿ ಬಿಂಬಿಸುವ ಮೂಲಕ ತನ್ನ ದಡ್ಡತನವನ್ನು ಪ್ರದರ್ಶಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಚಾರ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓಟ್ಬ್ಯಾಂಕ್ ರಾಜಕಾರಣಕ್ಕಾಗಿ ಕಳೆದ ವರ್ಷದಿಂದ ಟಿಪ್ಪುಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಟಿಪ್ಪು ಮತ್ತು ಹೈದರಾಲಿ ಇಬ್ಬರೂ ಹೇಡಿಗಳು. ಒನಕೆ ಓಬವ್ವಳನ್ನು ಬೆನ್ನ ಹಿಂದಿನಿಂದ ಬಂದು ಚೂರಿ ಹಾಕಿ ಸಾಯಿಸಿದರು. ಪಿತೂರಿಯಿಂದ ಹೋರಾಟ ಮಾಡಿದ ಟಿಪ್ಪುಹೇಗೆ ಸುಲ್ತಾನ್ ಆಗುತ್ತಾನೆ. ಯಾವ ಒಂದು ಹುಲಿಯನ್ನೂ ಸಾಯಿಸದೆ, ಸತ್ತ ಚರ್ಮವನ್ನು ಇಟ್ಟುಕೊಂಡಿರುವ ಟಿಪ್ಪು ಒಬ್ಬ ಪೇಪರ್ ಟೈಗರ್ ಎಂದರು.
ಮಂಗಳೂರಿನಲ್ಲಿ 27 ಚರ್ಚ್ಗಳಿದ್ದು, ಅದರಲ್ಲಿ 25 ಚರ್ಚ್ಗಳನ್ನ್ನು ಟಿಪ್ಪು ನಾಶ ಮಾಡಿದ. ಅದರ ಕಲ್ಲನ್ನು ತಂದು ಮಸೀದಿ ಕಟ್ಟಿಸಿದ. ಟಿಪ್ಪು ಜಯಂತಿ ವಿಚಾರದಲ್ಲಿ ಕ್ರೈಸ್ತರಿಗೆ ನೋವಾಗುತ್ತದೆ. ಇದುವರೆಗೂ ಟಿಪ್ಪುಹೋರಾಟದಲ್ಲಿ ಒಂದನ್ನೂ ಗೆದ್ದ ಉದಾಹರಣೆಗಳಿಲ್ಲ. 3ನೇ ಆಂಗ್ಲೋ ಮೈಸೂರು ಯುದ್ಧಕ್ಕೂ ಮೊದಲು ಒಂದು ಸಂಧಾನ ನಡೆಯಿತು. ಯುದ್ಧ ಮಾಡಲಾರದೆ ಟಿಪ್ಪುಸಂಧಾನಕ್ಕೆ ಬರುತ್ತಾನೆ. ಮುತ್ತಿಗೆ ಹಾಕಿದ ಸೈನಿಕರ ಖರ್ಚು ವೆಚ್ಚ ಕೊಡಬೇಕೆಂದು ಬೇಡಿಕೆ ಇಟ್ಟಾಗ ತನ್ನ ಮಕ್ಕಳನ್ನು ಕಳುಹಿಸಲಾಯಿತು. ಇನ್ನೆಲ್ಲಿ 3ನೇ ಆಂಗ್ಲೋ ಮೈಸೂರು ಯುದ್ದ ನಡೆದಿದೆ ಎಂದು ಹೇಳಿದರು.
ಏನೂ ಸಾಧನೆ ಮಾಡದ ಟಿಪ್ಪುವಂತೆ ಸಿಎಂ ಸಿದ್ದರಾಮಯ್ಯ ಕೂಡ ಜೀವನದಲ್ಲಿ ಒಂದೂ ಹೋರಾಟ ಮಾಡಿದವರಲ್ಲ ಎಂದು ವ್ಯಂಗ್ಯವಾಡಿದರು. ಕನ್ನಡವನ್ನು ಬಲವಂತವಾಗಿ ಪರ್ಶಿಯನ್ ಭಾಷೆಗೆ ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮಾಡಲು ಸರಕಾರ ಹೊರಟಿದೆ ಎಂದು ದೂರಿದರು.
ಟಿಪ್ಪುವಿನ ಖಡ್ಗದ ಬಗ್ಗೆ ವರ್ಣಿಸಲು ಹೋಗಿ ಸಂಜಯ್ ದತ್ ತನ್ನ ದೇಹವನ್ನೆ ಸುಟ್ಟುಕೊಂಡ. ಟಿಪ್ಪುಖಡ್ಗ ಖರೀದಿ ಮಾಡಲು ಹೋಗಿ ವಿಜಯ ಮಲ್ಯ ಪಾಪರ್ ಆಗಿರುವುದು ತಿಳಿದಿದೆ. ಈಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರು ಎಲ್ಲಿ ಸುಟ್ಟುಕೊಳ್ಳುತ್ತಾರೆ ಕಾದು ನೋಡಬೇಕಾಗಿದೆ ಎಂದು ಟಾಂಗ್ ನೀಡಿದರು. ಹಿಂದೂಗಳು ತಾಳ್ಮೆಯಿಂದ ಇದ್ದಾರೆ. ಸಲ್ಪ ತಾಳ್ಮೆ ಕಳೆದುಕೊಂಡರೂ ಕಾಂಗ್ರೆಸ್ ಆಡಳಿತ ಧೂಳೀಪಟ ಆಗುವುದರಲ್ಲಿ ಸಂಶಯವಿಲ್ಲ ಎಂದರು. ಶಾಲೆಯ ಪಠ್ಯದಲ್ಲಿ ಟಿಪ್ಪುಬಗ್ಗೆ ಬಿಂಬಿಸಿರುವುದು ತಪ್ಪುಕಲ್ಪನೆ. ಇದನ್ನು ಜನರಿಗೆ ಮನವರಿಕೆ ಮಾಡಬೇಕಾಗಿದೆ. ನಾನು ಟಿಪ್ಪುವನ್ನು ಮುಸ್ಲಿಂ ಎಂಬ ಕಾರಣಕ್ಕೆ ವಿರೋಧಿಸುತ್ತಿಲ್ಲ. ಆದರೆ ಇತಿಹಾಸದ ಸತ್ಯಾಂಶವನ್ನು ಹೊರ ಹಾಕುತ್ತಿರುವುದಾಗಿ ಹೇಳಿದರು.
ಗಡಿಯಾರದ ಒಂದು ಮುಳ್ಳು ಅತಿ ವೇಗವಾಗಿ ತಿರುಗುತ್ತಿರುತ್ತದೆ. ಈಗ ಮುಗಿಯುವ ಕಾಲ ಬಂದಿದೆ. ಟಿಪ್ಪು ಜಯಂತಿ ವಿರೋಧಿಸಲು ಪ್ರತಿ ಜನರಿಗೂ ಮನವರಿಕೆ ಮಾಡಬೇಕಾಗಿದೆ ಎಂದರು.
ಎಂ.ಎಸ್. ಸತ್ಯು ಹೇಳಿಕೆಯಿಂದ ನಿಜಕ್ಕೂ ದಿಗ್ಭ್ರಮೆಯಾಗಿದೆ. ಮಹಾರಾಜರು ಆಳಿದ ಮೈಸೂರಿನಲ್ಲಿ ಹುಟ್ಟಿ ಬೆಳೆದ ಇವರಿಂದ ಇಂತಹ ಮಾತು ಬರಬಾರದಿತ್ತು. 87 ವರ್ಷ ವಯಸ್ಸಾಗಿರುವುದರಿಂದ ಇವರ ತಲೆ ಸಂಪೂರ್ಣ ಹಾಳಾಗಿದೆ ಎಂದರು. ನಮಗೆ ಕೊಡಗಿನಲ್ಲಿ ಮತ ಪಡೆಯುವ ಬಗ್ಗೆ ಯಾವ ಭಯವಿಲ್ಲ ಎಂದು ಸತ್ಯು ಹೇಳಿಕೆಗೆ ವ್ಯಂಗ್ಯವಾಡಿದರು.
ಕೊಡಗು ಕಸಾಪ ಸಮಿತಿ ಮಾಜಿ ಅಧ್ಯಕ್ಷ ಕಾರ್ಯಪ್ಪ ಮಾತನಾಡಿ, ಕೊಡಗಿನ ಮೇಲೆ ಹೈದರ್ ಮತ್ತು ಟಿಪ್ಪು ಇಬ್ಬರೂ 32 ಬಾರಿ ದಾಳಿ ನಡೆಸಿದರೂ ಒಂದು ಬಾರಿಯೂ ಇವರು ಗೆಲುವು ಗಳಿಸದೆ ಸೋಲು ಅನುಭವಿಸಿದರು. ಚಿಕ್ಕಮಗಳೂರು, ಉಡುಪಿ ಹಾಗೂ ಇತರೆ ಭಾಗದಲ್ಲಿ ನಕ್ಸಲರು ಬರುತ್ತಾರೆ. ಆದರೇ ಕೊಡಗಿಗೆ ಬರಲು ಹೆದರುತ್ತಾರೆ. ಇಲ್ಲಿ ಮಹಿಳೆಯರು ಕೂಡ ಗನ್ ಹಿಡಿದು ಹಾರಿಸುತ್ತಾರೆ ಎಂಬ ಭಯವಿದೆ ಎಂದರು.
ಕೊಡಗಿನಲ್ಲಿ ಗೋ ಹತ್ಯೆ ನಿಷೇಧವಿದ್ದರೂ ಅಂದು ಟಿಪ್ಪುಬಲವಂತವಾಗಿ ಗೋಮಾಂಸ ತಿನ್ನಿಸಿದನು. ಮತಾಂತರ ಮಾಡಿದವನು. ಜೊತೆಗೆ ಅಲ್ಲಿನ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಕಾರಣಕರ್ತನು ಎಂದು ಹೇಳಿದರು.
ಅಮಾಯಕ ಹಿಂದೂಗಳ ಮೇಲೆ ಸಿಎಂ ಕೇಸು ಹಾಕಿಸುತ್ತಿದ್ದಾರೆ. ಆಡಳಿತದಿಂದ ಕೆಳಗೆ ಇಳಿದ ಮೇಲೆ ಕೊಡಗಿನಲ್ಲಿ ಭರ್ಜರಿ ಮಳೆ ಬರುತ್ತದೆ ಎಂದು ಕಿಡಿಕಾರಿದರು. ಮತ್ತೆ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಬಂದರೆ ಕನ್ನಡ ನಾಡು ಮತ್ತೆ ಪಾಕಿಸ್ತಾನ ಆಗುವುದು ಎಂದು ಆತಂಕ ವ್ಯಕ್ತಪಡಿಸಿದರು.







