ಮೃತ ನಟರ ಕುಟುಂಬಗಳಿಗೆ ಪರಿಹಾರ ಸರಕಾರದ ಜೊತೆ ಚರ್ಚೆ: ಮಾಜಿ ಸಚಿವ ಅಂಬರೀಶ್

ಬೆಂಗಳೂರು, ನ.8: ನಟ ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನೆಮಾ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ದುರಂತದಲ್ಲಿ ಸಾವನ್ನಪಿದ್ದ ನಟರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು ಸರಕಾರದ ಜೊತೆ ಚರ್ಚಿಸುತ್ತೇನೆ ಎಂದು ಹಿರಿಯ ನಟ ಅಂಬರೀಶ್ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವ ನಟರು ಯಾವುದೋ ಒಂದು ಆಸೆ ಇಟ್ಟಕೊಂಡು ಚಿತ್ರರಂಗಕ್ಕೆ ಬಂದಿರುತ್ತಾರೆ. ಅಂಥ ಅಪಘಾತ ಅನಿರೀಕ್ಷಿತ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರಕಿಸಲು ಸರಕಾರದ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಹೋದ ಪ್ರಾಣ ಮರಳಿ ಬರೋದಿಲ್ಲ. ಆದರೆ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಮೊದಲು ಮುನ್ನೆಚ್ಚರಿಕೆ ಅಗತ್ಯ. ಇವತ್ತಿನ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಅದನ್ನು ಬಳಸಿಕೊಳ್ಳಬೇಕಿತ್ತು. ಸಾಹಸ ದೃಶ್ಯ ಮಾಡುವ ಮೊದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು ಎಂದು ಚಿತ್ರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಜು ಬರುವುದಿಲ್ಲ ಮತ್ತು ಆರೋಗ್ಯ ಸರಿಯಿಲ್ಲ ಅಂಥ ಗೊತ್ತಿದ್ದರು ಇಂತಹ ಸಾಹಸಕ್ಕೆ ಇಳಿಯಬಾರದಿತ್ತು. ದುರಂತದ ಸುದ್ದಿ ಗೊತ್ತಾದ ತಕ್ಷಣ ಹೊಗನೇಕಲ್ ನಿಂದ ಮುಳುಗು ತಜ್ಞರನ್ನು ಕರೆಸಲು ನಾನೇ ವ್ಯವಸ್ಥೆ ಮಾಡಿದೆ. ನನಗೂ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಹೋಗಬೇಕು ಅನ್ನುವ ಆಸೆ ಇದೆ, ಆದರೆ ಇಂತಹ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋದರೆ ಕಾರ್ಯಾಚರಣೆಗೆ ಅಡ್ಡಿ ಆಗಲಿದೆ ಎಂದು ಹೇಳಿದರು.
ಈ ದುರಂತ ಸುದ್ದಿ ಇಡೀ ಚಿತ್ರರಂಗ ಮತ್ತು ಇಡೀ ರಾಜ್ಯದ ಜನತೆಗೆ ಆಘಾತ ತಂದಿದೆ. ಆತುರ ಪಟ್ಟು ನಿರ್ಧಾರ ತೆಗೆದುಕೊಂಡರೆ ಈ ರೀತಿಯಾದ ಅನಾಹುತಗಳು ಸಂಭವಿಸುತ್ತವೆ. ಒಂದೇ ಜಾಗದಲ್ಲಿ ಶವ ಇದೆ. ಇನ್ನು ಯಾಕೆ ಮೃತ ದೇಹಗಳು ಸಿಕ್ಕಿಲ್ಲ ಅನ್ನೋದೆ ಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಾಹಸ ನಿರ್ದೇಶಕರ ನಿರ್ಲಕ್ಷ ದ ಪರಮಾವಧಿಗೆ ಇಬ್ಬರು ಉದಯೋನ್ಮುಖ ಕಲಾವಿದರು ಬಲಿಯಾಗಿದ್ದಾರೆ. ಆಕಸ್ಮಿಕವಾಗಿ ಈ ಘಟನೆ ನಡೆದಿಲ್ಲ. ಸಂಪೂರ್ಣ ಚಿತ್ರತಂಡ ನಿರ್ಲಕ್ಷದಿಂದ ನಡೆದಿದೆ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹಸ ನಿರ್ದೇಶಕ ರವಿವರ್ಮಗೆ ಹಾಲಿವುಡ್ ಮಟ್ಟದಲ್ಲಿ ಆಫರ್ಗಳಿವೆ. ಆದರೆ ಅಂತ ನಿರ್ದೇಶಕ ಕನಿಷ್ಠ ಮುಜಾಗ್ರತೆಯನ್ನೂ ಇಟ್ಟುಕೊಳ್ಳದೆ ಸಾಹಸಕ್ಕೆ ಇಳಿದದ್ದು ತಪ್ಪು. ನಟ ಅನಿಲ್ಗೆ ಇಬ್ಬರು ಎಳೆಯ ಮಕ್ಕಳಿದ್ದಾರೆ. ಅವರನ್ನ ನೋಡಿದರೆ ಮನ ಕಲುಕುತ್ತದೆ, ನಾಳೆ ಸಂಜೆ ವಾಣಿಜ್ಯ ಮಂಡಳಿಯಲ್ಲಿ ಹಮ್ಮಿಕೊಂಡಿರುವ ಸಭೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಾಸ್ತಿಗುಡಿ ದುರಂತ ಹಿನ್ನೆಲೆ ನಟರಾದ ಮೃತಪಟ್ಟ ಉದಯ್ ಹಾಗೂ ಅನಿಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.







