ಈಗ ಎಲ್ಲೆಲ್ಲೂ ‘ಚಿಲ್ಲರೆ’ಯದ್ದೇ ‘ಸಮಸ್ಯೆ’!
.gif)
* ಮೌಲ್ಯ ಕಳಕೊಂಡ 500-1,000 ರೂ. ನೋಟು
* ಜನಸಾಮಾನ್ಯರಿಗೆ ‘ಬಿಸಿ ತುಪ್ಪ’ವಾದ ಸರಕಾರದ ನಿರ್ಧಾರ
ಮಂಗಳೂರು, ನ.9: ಪ್ರಧಾನಿ ನರೇಂದ್ರ ಮೋದಿ ಅನಿರೀಕ್ಷಿತವಾಗಿ ಮಂಗಳವಾರ ತಡರಾತ್ರಿಯಿಂದ ಅನ್ವಯವಾಗುವಂತೆ 500 ರೂ. ಮತ್ತು 1,000 ರೂ. ನೋಟನ್ನು ಅಮಾನ್ಯಗೊಳಿಸಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಬೆಳ್ಳಂಬೆಳಗ್ಗೆ ‘ಚಿಲ್ಲರೆ’ ಸಮಸ್ಯೆಯನ್ನು ಎದುರಿಸುವಂತಾಗಿದೆ. ಹಲವರು ರಾತ್ರಿಯೇ ಈ ವಿಚಾರದಿಂದ ಗೊಂದಲಕ್ಕೆ ಸಿಲುಕಿ ‘ಮುಂದೇನು?’ ಎಂದು ಚಡಪಡಿಸತೊಡಗಿದ್ದರೆ, ಇನ್ನು ಕೆಲವರಿಗೆ ಬೆಳಗ್ಗೆ ಎದ್ದ ಬಳಿಕವಷ್ಟೇ ಈ ವಿಷಯ ಗಮನಕ್ಕೆ ಬಂದಿದೆ. ಹಾಗಾಗಿ ಈಗ ಎಲ್ಲೆಲ್ಲೂ ‘ಚಿಲ್ಲರೆ’ಯದ್ದೇ ಚರ್ಚೆ, ‘ಚಿಲ್ಲರೆ’ಯದ್ದೇ ಸಮಸ್ಯೆ.
ನಗರದ ಕೆಲವು ಅಂಗಡಿಮುಂಗಟ್ಟುಗಳ ಬಾಗಿಲುಗಳಲ್ಲಿ 500 ಮತ್ತು 1,000 ರೂ. ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ಬೋರ್ಡ್ಗಳನ್ನು ತಗಲಿಸಿರುವುದು ಕಂಡಬರುತ್ತಿದೆ. ಹೆಚ್ಚಿನ ಎಟಿಎಂಗಳು ಬಾಗಿಲು ಹಾಕಲ್ಪಟ್ಟಿದ್ದರೆ, ಬ್ಯಾಂಕ್ಗಳು ತೆರೆದಿದ್ದರು, ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ರಜೆ ಎಂಬ ಬೋರ್ಡ್ಗಳನ್ನು ಹಾಕಲಾಗಿದೆ. ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿವೆ.
ಹಲವರು ಬಚ್ಚಿಟ್ಟಿದ್ದ 500, 1,000 ರೂ. ನೋಟನ್ನ ಹೊರಗೆ ಹಾಕಿ ಎಂದು ಛೇಡಿಸತೊಡಗಿದರೆ, ಇನ್ನು ಕೆಲವರು ಬಚ್ಚಿಟ್ಟ ಹಣದ ಗಂಟನ್ನು ಬಿಚ್ಚಿಡುವುದು ಹೇಗೆ ಎಂದು ತೊಳಲಾಡುವಂತಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ದಿನಬಳಕೆ ವಸ್ತುಗಳನ್ನು ಖರೀದಿಸಲಾಗದೆ ಪೇಚಾಡುವಂತಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ 500, 1,000 ರೂಪಾಯಿಯ ನೋಟುಗಳನ್ನು ಕೇಳುವವರಿಲ್ಲ. ಇದರಿಂದ ಹಾಲು, ತರಕಾರಿ, ಮೀನು, ಮಾಂಸ, ಜಿನಸು ಸಾಮಗ್ರಿಗಳನ್ನು ಖರೀದಿಸಲಾಗದೆ ಪರಿತಪಿಸುತ್ತಿದ್ದಾರೆ.
ಇನ್ನು ಹಲವರು ತಮ್ಮಲ್ಲಿರುವ 10, 20, 50, 100 ರೂ. ನೋಟುಗಳನ್ನು ಕೈ ಬಿಡಲೂ ಆತಂಕಪಡುತ್ತಿದ್ದಾರೆ. ಅವು ಖಾಲಿಯಾದರೆ ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ. ಜಿನಸು ಅಂಗಡಿಗೆ, ಮಾಂಸದ ಅಂಗಡಿಗೆ, ತರಕಾರಿ ಅಂಗಡಿಗೆ ತೆರಳಿ ಯಾವ ಸಾಮಗ್ರಿಗಳನ್ನು ಕೇಳಿದರೂ 500, 1,000ರ ರೂ. ನೋಟನ್ನು ಹೊರತುಪಡಿಸಿ ‘ಚಿಲ್ಲರೆ’ ಕೊಡಿ ಎಂದು ವ್ಯಾಪಾರಿಗಳು ಕೇಳುವುದು ಸಾಮಾನ್ಯವಾಗಿದೆ. ಬೆಲೆ ಏರಿಕೆಯಿಂದಾಗಿ ಯಾವ ವಸ್ತುಗಳನ್ನು ಖರೀದಿಸಿದರೂ ಕನಿಷ್ಠ 500 ರೂ. ಖಾಲಿಯಾಗುವುದು ಸಹಜ. ಹಾಗಾಗಿ ಜನಸಾಮಾನ್ಯ ಅಂಗಡಿಗೆ ತೆರಳಿ 500 ರೂ. ನೋಟು ತೋರಿಸುವುದು ಸಾಮಾನ್ಯವಾಗಿತ್ತು. ಎಂದಿನಂತೆ ಇಂದು ಕೂಡ 500 ರೂ. ತೋರಿಸಿದರೆ ‘ಚಿಲ್ಲರೆ’ ಕೊಡಿ ಎನ್ನುತ್ತಿದ್ದಾರೆ. ಪರಿಚಯಸ್ಥರು ‘ಸಾಲ’ ಕೊಟ್ಟರೂ ಅಪರಿಚಿತ ವ್ಯಾಪಾರಿಗಳು ಗ್ರಾಹಕರನ್ನು ಬರಿಗೈಯಲ್ಲಿ ಕಳುಹಿಸಿಕೊಡುವುದು ಅನಿವಾರ್ಯವಾಗಿದೆ.
ಈ ‘ಚಿಲ್ಲರೆ’ ಸಮಸ್ಯೆಯಿಂದ ಅದೆಷ್ಟೋ ಮಂದಿ ಹಾಲು, ತರಕಾರಿ, ಮೀನು, ಮಾಂಸ ಮತ್ತಿತರ ದಿನಬಳಕೆಯ ವಸ್ತುಗಳನ್ನು ಖರೀದಿಸಲಾಗದೆ ಪೇಚಾಡುವಂತಾಗಿದೆ. ಬಸ್, ರಿಕ್ಷಾ ಮತ್ತಿತರ ಟ್ಯಾಕ್ಸಿ ವಾಹನದಲ್ಲಿ ಕೂಡ ಇದೇ ಸಮಸ್ಯೆಯಾಗಿದೆ. ಅನೇಕ ಬಸ್ಸುಗಳಲ್ಲಿ ಪ್ರಯಾಣಿಕರು ‘ಚಿಲ್ಲರೆ’ಯಿಲ್ಲದ ಕಾರಣ ‘ನಾಳೆ ಕೊಡುವೆ’ ಎಂದು ಹೇಳಿ ಪ್ರಯಾಣಿಸುತ್ತಿವುದು ಇಂದು ಸಾಮಾನ್ಯವಾಗಿ ಕಂಡು ಬಂದ ದೃಶ್ಯ. ರಿಕ್ಷಾಗಳಲ್ಲೂ ಕೂಡ ಅದೇ ಕಥೆಯಾಗಿದೆ. ರಿಕ್ಷಾ ಹತ್ತುವ ಮುನ್ನವೇ ಚಾಲಕರು ‘ಚಿಲ್ಲರೆ ಇದೆಯಾ?’ ಎಂದು ಕೇಳುವುದು, ಇದೆಯೆಂದಾದರೆ ಹತ್ತಿ ಎನ್ನುವುದು, ಇಲ್ಲ ಎಂದರೆ ‘ಕ್ಷಮಿಸಿ’ ಎನ್ನುವುದು ಕೂಡ ಇಂದು ಸಾಮಾನ್ಯವಾಗಿತ್ತು.
ಆಸ್ಪತ್ರೆ, ಮೆಡಿಕಲ್ಗಳಲ್ಲಿ ಕೂಡ ಇದೇ ಸಮಸ್ಯೆಯಾಗಿದೆ. ಆಸ್ಪತ್ರೆಯ ಡಿಸ್ಚಾರ್ಜ್ನ ಹತ್ತಾರು ಸಾವಿರ ರೂಪಾಯಿಗೆ ಚಿಲ್ಲರೆ ಹೊಂದಿಸುವುದು, ಮೆಡಿಕಲ್ಗಳಲ್ಲೂ ‘ಚಿಲ್ಲರೆ’ ನೀಡುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ 500, 1,000ರ ನೋಟು ಹಿಡಿದುಕೊಂಡು ‘ಚಿಲ್ಲರೆ’ ಕೊಡಿ ಎಂದು ಕೇಳಿಕೊಂಡು ಅಲೆದಾಡುವ ದೃಶ್ಯವೂ ಕಂಡು ಬಂದಿದೆ.
ಈಗ 500, 1,000ರ ನೋಟು ಯಾರಿಗೂ ಬೇಡ ಎಂಬಂತಾಗಿದೆ. ದೇಣಿಗೆ ರೂಪದಲ್ಲಿ ಕೊಟ್ಟರೂ ‘ಚಿಲ್ಲರೆ’ ಕೇಳುವಂತಾಗಿದೆ. ಹಣವಿದ್ದವರಿಗೆ ಈ ‘ಸಮಸ್ಯೆ’ ಕಾಡಿದರೆ ‘ಹಣ’ವಿಲ್ಲದವರು ನಮಗೂ, ಚಿಲ್ಲರೆಗೂ ಯಾವುದೇ ಸಮಸ್ಯೆ ಇಲ್ಲ ಎಂಬಂತೆ ಹಾಯಾಗಿರುವುದು ಸುಳ್ಳಲ್ಲ.
ಕೆಲವು ಕಡೆ 500, 1,000 ನೋಟು ಚಲಾವಣೆ
ಬಹುತೇಕ ಕಡೆ ಇಂದು 500, 1,000 ನೋಟುಗಳು ಚಲಾವಣೆಯಲ್ಲಿಲ್ಲ. ಆ ನೋಟುಗಳನ್ನು ಕಂಡೊಡನೆ ‘ಬೆಚ್ಚಿ’ ಬೀಳುವವರೇ ಅಧಿಕ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಅಂಗಡಿಮುಂಗಟ್ಟುಗಳಲ್ಲಿ ಈ ನೋಟುಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಆದಾಗ್ಯೂ ಕೆಲವು ಅಂಗಡಿ ಮಾಲಕರು ತಮ್ಮ ಬಳಿ ಬರುವ ಗ್ರಾಹಕರನ್ನು ನಿರಾಸೆಪಡಿಸದೆ 500, 1,000ರ ನೋಟನ್ನು ಪಡೆದು ‘ಚಿಲ್ಲರೆ’ ಸಮಸ್ಯೆ ಅಲ್ಲ ಎಂಬಂತೆ ವ್ಯವಹರಿಸಿದ್ದಾರೆ. ಈ ವ್ಯವಹಾರದ ಗುಟ್ಟೇನು ಎಂದು ಕೇಳಿದರೆ, ಮೋದಿ ಸರಕಾರದ ಈ ನಡೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು. ನಾವು ಹಾಲೋ, ತರಕಾರಿಯೋ, ಜಿನಸು ಸಾಮಾಗ್ರಿಯನ್ನೋ ನೀಡದಿದ್ದರೆ ಒಂದೆರಡು ದಿನ ಅವರೇನು ಮಾಡಲಿ? ಅವರು ಎಲ್ಲಿಗೆ ಹೋಗಲಿ? ಅವರು ಹಸಿವಿನಿಂದ ಇರುವುದನ್ನು ನಾವು ನೋಡಬೇಕೇ? ಹಾಗಾಗಿ ನಮಗೆ ಸ್ವಲ್ಪ ಕಷ್ಟವಾದರೂ ಚಿಂತೆ ಇಲ್ಲ. ಗ್ರಾಹಕರಿಗೆ ಕಷ್ಟವಾಗಬಾರದು ಎಂಬ ನೆಲೆಯಲ್ಲಿ 500, 1,000ರ ನೋಟನ್ನು ಪಡೆದುಕೊಂಡೇ ಅವರ ಅಗತ್ಯದ ಸಾಮಗ್ರಿಗಳನ್ನು ನೀಡುತ್ತಿದ್ದೇವೆ ಎಂದು ಸಂತೃಪ್ತಿಯಿಂದಲೇ ಹೇಳುತ್ತಿದ್ದಾರೆ.
*ವ್ಯವಹಾರಕ್ಕೂ ಭಾರೀ ಹೊಡೆತ
ಈ ‘ಚಿಲ್ಲರೆ’ ಇದೀಗ ವ್ಯವಹಾರಕ್ಕೂ ಭಾರೀ ಹೊಡೆತ ಬಿದ್ದಿವೆ. ಮಂಗಳೂರು ನಗರದಲ್ಲೇ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮಂಗಳೂರುನ ಬಂದರು, ಸೆಂಟ್ರಲ್ ಮಾರುಕಟ್ಟೆ ಮತ್ತಿತರ ವ್ಯವಹಾರ ಕೇಂದ್ರಗಳಲ್ಲಿ ‘ಚಿಲ್ಲರೆ’ ಭಾರೀ ಸಮಸ್ಯೆಯಾಗಿ ಕಾಡಿದೆ.
ನೋಟುಗಳ ‘ಅಮಾನ್ಯ’ದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕೇಳಿ ಬಂದ ಮಾತುಗಳು
*ಸರಕಾರ ಅನಿರೀಕ್ಷಿತವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು. 500, 1,000ರ ನೋಟಿನ ಬಗ್ಗೆ ಕನಿಷ್ಠ 1 ತಿಂಗಳ ಹಿಂದೆ ಸೂಚನೆ ಕೊಟ್ಟ ಬಳಿಕ ಈ ನಿರ್ಧಾರ ಮಾಡಬೇಕಿತ್ತು. ಸರಕಾರದ ಈ ನಿರ್ಧಾರದಿಂದ ಬಡವರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ.
*ಇದು ಕೇಂದ್ರ ಸರಕಾರದ ದುಡುಕಿನ ನಿರ್ಧಾರ. ಕಪ್ಪು ಹಣ ಹೊರತರುವ ಭರಾಟೆಯಲ್ಲಿ ಬಡವರಿಗೆ ಅನ್ಯಾಯ ಎಸಗಲಾಗಿದೆ.







