ಬ್ಯಾಂಕ್ಗಳಲ್ಲಿ ಸೆಕ್ಯುರಿಟಿ ನಿಯೋಜನೆಗೆ ಸೂಚನೆ

ಮಂಗಳೂರು, ನ. 9: ಕೇಂದ್ರ ಸರಕಾರ ರೂ.500ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರ ಉಪಸ್ಥಿತಿಯಲ್ಲಿ ಇಂದು ವಿವಿಧ ಬ್ಯಾಂಕ್ ಮತ್ತು ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಧಿಕಾರಿಗಳ ಸಭೆ ಆಯುಕ್ತರ ಕಚೇರಿಯಲ್ಲಿ ನಡೆಯಿತು.
ನ.10ರಿಂದ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಗ್ರಾಹಕರು ನೋಟುಗಳನ್ನು ವಿನಿಮಯ ಮಾಡುವ ಸಮಯ ವಿಪರೀತ ಜನದಟ್ಟಣೆಯಿಂದ ಕೆಲವೊಂದು ಗೊಂದಲ ಸಾಧ್ಯತೆ ಇರುವುದರಿಂದ ಈ ಪ್ರಯುಕ್ತ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ದಿನದ 24 ಗಂಟೆಯೂ ಕಟ್ಟುನಿಟ್ಟಿನ ಸೆಕ್ಯುರಿಟಿ ನಿಯೋಜನೆಯೊಂದಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸೂಚಿಸಲಾಯಿತು.
ಬ್ಯಾಂಕ್ ಮತ್ತು ಅಂಚೆ ಕಚೇರಿ ಒಳಗೆ ಹಾಗೂ ಆವರಣದಲ್ಲಿ ಸಾಕಷ್ಟು ಸಂಖ್ಯೆಯ ಸುಸಜ್ಜಿತ ಸಿ.ಸಿ. ಕ್ಯಾಮರಗಳನ್ನು ಅಳವಡಿಸುವಂತೆ ನಿರ್ದೇಶಿಸಲಾಗಿದೆ. ಕರೆನ್ಸಿ ಚೆಸ್ಟ್ನಿಂದ ತರುವ ಸಮಯ ಮತ್ತು ಎಟಿಎಂಗಳಿಗೆ ಹಣ ಭರ್ತಿ ಮಡುವ ಸಮಯ ಹೆಚ್ಚಿನ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕೆಲವೊಂದು ಗ್ರಾಹಕರು ಪ್ರಸ್ತುತ ಆದೇಶದ ಬಗ್ಗೆ ವಿಪರೀತ ಗೊಂದಲಕ್ಕೆ ಒಳಗಾಗಿ ಬ್ಯಾಂಕ್ ಅಧಿಕಾರಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವ ಸಾಧ್ಯತೆಗಳು ಇರುವುದರಿಂದ, ಈ ಸಂದರ್ಭದಲ್ಲಿ ಬ್ಯಾಂಕ್, ಅಂಚೆ ಕಚೇರಿಯ ನೌಕರರು ಆದಷ್ಟು ತಾಳ್ಮೆಯಿಂದ ವ್ಯವಹರಿಸುವಂತೆ ಬ್ಯಾಂಕ್ ಮತ್ತು ಅಂಚೆ ಅಧಿಕಾರಿಗಳಿಗೆ ಸೂಚಿಸಲಾಯಿತು.







