ಮಣ್ಣೇ ಇಲ್ಲದೆ ತರಕಾರಿ ಬೆಳೆದ ಭಾರತೀಯ ಪೋರ ಶಂತನು !
ಜಗತ್ತಿನ ಗಮನ ಸೆಳೆದ ಸಂಶೋಧನೆ

ಹೊಸದಿಲ್ಲಿ, ನ. 12 : ರಾತ್ರಿ ಊಟ ಮಾಡುತ್ತಿರುವಾಗ ಈ ಹುಡುಗ ತಂದೆಯಲ್ಲಿ ಕೇಳಿದ ಸರಳ ಆದರೆ ಕುತೂಹಲಕಾರಿ ಪ್ರಶ್ನೆ ಒಂದು ಹೊಸ ಸಂಶೋಧನೆಗೆ ನಾಂದಿ ಹಾಡಿದೆ. ಆ ಪ್ರಶ್ನೆ - " ನಮಗೆ ಮಣ್ಣು ಏಕೆ ಬೇಕು ?" ಎಂಬುದು. ನಗರ ಪ್ರದೇಶಗಳಲ್ಲಿ ಆಹಾರ ಹಾಗು ಅದನ್ನು ಬೆಳೆಯುವ ಸ್ಥಳದ ಕೊರತೆಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಕೇಳಿದ ಈ ಪ್ರಶ್ನೆ ಆ ಹುಡುಗನ ಮನದಲ್ಲಿ ಮುದ್ರೆಯೊತ್ತಿ ಕುಳಿತಿತ್ತು. ಏಕೆಂದರೆ ಆ ಪ್ರಶ್ನೆ ಅತ್ಯಂತ ಸಕಾಲಿಕವಾಗಿತ್ತು. ಅದೇ ಮುಂದೆ ಆತನನ್ನು ಹೊಸತೊಂದು ತಂತ್ರಜ್ಞಾನಕ್ಕೆ ಹೊರಳುವಂತೆ ಮಾಡಿತು. ಅದರ ಹೆಸರು - ಹೈಡ್ರೋಪೋನಿಕ್ಸ್ - ಅಂದರೆ ಸಸ್ಯಗಳನ್ನು ನೀರು ಬಳಸದೆ ಬೆಳೆಸುವುದು !
ಆದರೆ ಹುಡುಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದಕ್ಕಿಂತಲೂ ಅಗ್ಗದಲ್ಲಿ ಸಿಗುವ ಸಂಯೋಜನೆಯೊಂದನ್ನು ಸೃಷ್ಟಿಸಿದ. ಈಗ ಅದು ಇಡೀ ಜಗತ್ತಿನ ಗಮನ ಸೆಳೆದಿದೆ. ಅಂದ ಹಾಗೆ , ಈ 17 ವರ್ಷದ ಹುಡುಗನ ಹೆಸರು ಶಂತನು ಸಿಂಘಾಲ್ ! ಈತ ದಿಲ್ಲಿ ನಿವಾಸಿ.
ಶಂತನುವಿನ ಸಂಶೋಧನೆಯನ್ನು ತಿಳಿದುಕೊಂಡು ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರತಿಷ್ಠಿತ ಟೆಡ್ ಎಕ್ಸ್ ನಲ್ಲಿ ಮಾತನಾಡಲು ಆತನಿಗೆ ಆಹ್ವಾನ ಬಂತು. . " ಜನರು ತಮ್ಮ ಆಹಾರವನ್ನು ತಾವೇ ಬೆಳೆಸಲು ಸಾಧ್ಯವಾಗುವಂತಹ ತಂತ್ರಜ್ಞಾನ ರೂಪಿಸಲು ನಾನು ಯೋಚಿಸಿದೆ. ಅದಕ್ಕಾಗಿ ನನ್ನ ಹೊಸ ಉದ್ಯಮ ಸಂಸ್ಥೆ ' ಉನ್ನತ್ ' ಹೆಸರಲ್ಲಿ ಪ್ರಾರಂಭಿಸಿದೆ. ಟೆಡ್ ಎಕ್ಸ್ ನಲ್ಲಿ ಮಾತನಾಡಿದಾಗ ಅಲ್ಲಿದ್ದವರು ನಾನು ಸೃಷ್ಟಿಸಿದ ಸಂಯೋಜನೆಯನ್ನು ಎಲ್ಲಿ ಖರೀದಿಸಬಹುದು ಎಂಬ ಆಸಕ್ತಿಯಲ್ಲಿದ್ದರು. ಇದಕ್ಕೆ ಕಾರಣ ಈವರೆಗೆ ಬಂದಿರುವ ತಂತ್ರಜ್ಞಾನಗಳಿಗೆ ಹೋಲಿಸಿದರೆ ನಾನು ರೂಪಿಸಿರುವ ತಂತ್ರಜ್ಞಾನ ಕಡಿಮೆ ಖರ್ಚಿನದ್ದು " ಎಂದು ಶಂತನು ಹೇಳಿದ್ದಾರೆ.
ಈ ಹೊಸ ಸಂಯೋಜನೆ ರೂಪಿಸಲು ಶಂತನು ಸಾಕಷ್ಟು ಸಂಶೋಧನೆ ಮಾಡಿದ್ದಾರೆ. " ನಾನು ಏರೋಪೋನಿಕ್ಸ್ (ಗಾಳಿ ಬಳಸಿ ಸಸ್ಯ ಬೆಳೆಸುವ ತಂತ್ರಜ್ಞಾನ) ಕುರಿತು ಓದಿದ್ದೆ. ಆದರೆ ಅದು ಭಾರೀ ದುಬಾರಿ. ಅದಕ್ಕಾಗಿ ನಾನು ಬೇರೆಯೇ ಸಂಯೋಜನೆ ( ಮೈಕ್ರೋ ನ್ಯೂಟ್ರಿಯೆಂಟ್ ಗಳು , ಬೀಜಗಳು ಹಾಗು ಜೈವಿಕ ಕೀಟನಾಶಕಗಳುಳ್ಳ) ಯೊಂದನ್ನು ಸಂಶೋಧನೆ ಮಾಡಿದೆ. ಇದು ಮಣ್ಣಿನ ಬದಲಿಗೆ ಬಳಕೆಯಾಗುತ್ತದೆ ಮಾತ್ರವಲ್ಲ , ಇದನ್ನು ಕಡಿಮೆ ಬೆಲೆಗೆ ಪಡೆಯಬಹುದು " ಎಂದು ದಿಲ್ಲಿಯ ಸಂಸ್ಕೃತಿ ಶಾಲೆಯಲ್ಲಿ ಹನ್ನೊಂದನೇ ತರಗತಿಯಲ್ಲಿರುವ ಶಂತನು ಹೇಳಿದ್ದಾನೆ.
ವಿಶೇಷವೇನೆಂದರೆ , ಶಂತನು ಶಾಲೆಯಲ್ಲಿ ವಿಜ್ಞಾನದ ವಿದ್ಯಾರ್ಥಿಯಲ್ಲ . ಆತ ಕಲಾ ವಿಭಾಗದಲ್ಲಿ ಕಲಿಯುತ್ತಿದ್ದಾನೆ ! ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಂದೆಯ ನೆರವಿನೊಂದಿಗೆ ತನ್ನ ಸಂಶೋಧನೆ ನಡೆಸುತ್ತಿದ್ದಾನೆ ಶಂತನು. " ಮೊದಲು ನಾನು ಮೆಂತ್ಯೆ , ಪಾಲಕ್ , ಕೊತ್ತಂಬರಿ ಹಾಗು ಟೊಮೇಟೊಗಳನ್ನು ಬೆಳೆದೆ. ಇದರಲ್ಲಿ ನನಗೆ ನನ್ನ ತಂದೆ ಸಹಾಯ ಮಾಡಿದರು. ನಗರ ವಾಸಿಗಳು ತಮ್ಮ ಮನೆಯೊಳಗೇ ತಮಗೆ ಬೇಕಾದ ಆಹಾರ ಬೆಳೆಸಿಕೊಳ್ಳುವಂತೆ ಆಗಬೇಕು ಎಂಬುದು ನನ್ನ ಗುರಿ " ಎಂದಿದ್ದಾನೆ ಈ ಅಸಾಮಾನ್ಯ ಪ್ರತಿಭೆಯ ಬಾಲ ವಿಜ್ಞಾನಿ !







