ಪೆರಿಯ ಕೇಂದ್ರ ವಿಶ್ವವಿದ್ಯಾನಿಲಯ: ಸಂತ್ರಸ್ತರಿಂದ ಉಪವಾಸ ಧರಣಿ
ಉದ್ಯೋಗದ ಭರವಸೆ ಈಡೇರಿಸಲು ಆಗ್ರಹ
ಕಾಸರಗೋಡು, ನ.12: ಪೆರಿಯದಲ್ಲಿರುವ ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಸ್ಥಳ ಬಿಟ್ಟುಕೊಟ್ಟ ಕುಟುಂಬಗಳ ತಲಾ ಓರ್ವ ಸದಸ್ಯನಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಹದಿನಾರು ಕುಟುಂಬಗಳ ಸದಸ್ಯರು ಅನಿರ್ಧಿ ಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಉದ್ಯೋಗ ನೀಡುವುದಾಗಿ ಅಧಿಕಾರಿಗಳು ನೀಡಿರುವ ಭರವಸೆ ಈಡೇರಿಸದಿರುವುದನ್ನು ಪ್ರತಿಭಟಿಸಿ ಈ ಸತ್ಯಾಗ್ರಹ ಆರಂಭಿಸಿದ್ದಾರೆ.
ಇದೇ ವಿಚಾರವಾಗಿ ಶುಕ್ರವಾರ ಸಂಜೆ ನಡೆದ ಮಾತುಕತೆ ವಿಫಲ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬಗಳು ಅನಿರ್ಧಿ ಷ್ಟಾವಧಿ ಮುಷ್ಕರಕ್ಕೆ ಮುಂದಾಗಿವೆ.
ಹೋರಾಟದ ಮುಖಂಡತ್ವವನ್ನು ವಹಿಸಿದ ಹರಿಪ್ರಸಾದ್ ಮತ್ತು ಶೈಜು ಮಾತನಾಡಿ, ಅಧಿಕಾರಿ ಗಳು ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ 16 ಕುಟುಂಬಗಳನ್ನು ತೆರವುಗೊಳಿಸಲಾಗಿತ್ತು. ಈ ವೇಳೆ ಪುನರ್ವಸತಿ ಜೊತೆಗೆ ಕುಟುಂಬದ ಓರ್ವ ಸದಸ್ಯ ನಿಗೆ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕಟ್ಟಡ ಉದ್ಘಾಟನೆಯಾದರೂ ಇನ್ನೂ ಉದ್ಯೋಗ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳು ಇದೀಗ ಹೋರಾಟಕ್ಕೆ ಇಳಿದಿವೆ. ಕೆಲದಿನಗಳ ಹಿಂದೆ ಎರಡು ಬಾರಿ ವಿಶ್ವವಿದ್ಯಾನಿಲಯದ ಕಟ್ಟಡದ ಮೇಲೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು.