ಇಸ್ಲಾಂನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದದ್ದು ಸಂಘ ಪರಿವಾರವಲ್ಲ: ಅಬ್ದುಲ್ಲಾ ಕೋಯ ತಂಙಳ್
ಜಮಾಅತೆ ಇಸ್ಲಾಮೀ ಹಿಂದ್ನ ದ.ಕ.ಜಿಲ್ಲಾ ಸಮಾವೇಶ

ಪುತ್ತೂರು, ನ.13: ಮುಸ್ಲಿಂ ಸಮುದಾಯ ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಸಮಾನ ನಾಗರಿಕ ಸಂಹಿತೆ, ತಲಾಖ್ ವಿಚಾರದಲ್ಲಿ ಇಸ್ಲಾಂ ಧರ್ಮದ ಮೇಲೆ ಆಕ್ರಮಣ ನಡೆಸುವ ಪ್ರಯತ್ನ ನಡೆಯುತ್ತಿದೆ. ಹಲವಾರು ಸಂಸ್ಕೃತಿಗಳುಳ್ಳ ಭಾರತದಲ್ಲಿ ಒಂದೇ ಸಂಸ್ಕೃತಿಯನ್ನು ಹೇರುವ ಕೆಲಸ ಸಮಂಜಸವಲ್ಲ ಎಂದು ಕೇರಳ ಜಮಾಅತೇ ಇಸ್ಲಾಮೀ ಹಿಂದ್ನ ಉಪಾಧ್ಯಕ್ಷ ವಿ.ಟಿ.ಅಬ್ದುಲ್ಲಾ ಕೋಯ ತಂಙಳ್ ಹೇಳಿದರು.
ಅವರು ‘ನೀವು ವಿಶ್ವಾಸಿಗಳಾಗಿದ್ದರೆ ನೀವೇ ವಿಜಯಿಗಳಾಗುವಿರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಲ್ಲಿನ ಎಚ್. ಎಂ. ಆಡಿಟೋರಿಯಂನಲ್ಲಿ ರವಿವಾರ ನಡೆದ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಾವೇಶದಲ್ಲಿ ‘ಇಸ್ಲಾಂ ಮತ್ತು ಇಸ್ಲಾಮೀ ಆಂದೋಲನ ವರ್ತಮಾನ ಮತ್ತು ಭವಿಷ್ಯ’ ಎಂಬ ವಿಚಾರದಲ್ಲಿ ಮಾತನಾಡಿದರು.
ಇಸ್ಲಾಂ ಶರೀಯತ್ ಪರಿಪೂರ್ಣ ವ್ಯವಸ್ಥೆಯಾಗಿದ್ದು, ಇದರಲ್ಲಿ ಒಂದನ್ನು ಬದಲಾವಣೆ ಮಾಡುವುದೂ ಅಸಾಧ್ಯವಾಗಿದೆ. ಸಮಾನ ನಾಗರಿಕ ಸಂಹಿತೆ, ತಲಾಖ್ ಹೆಸರಿನಲ್ಲಿ ಇಂತಹ ಬದಲಾವಣೆಗೆ ಮುಂದಾದಲ್ಲಿ ಅಪಾಯವಾಗಲಿದೆ. ಶರಿಯತ್ ಎಂಬುದು ಕೇವಲ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ಗೆ ಸೀಮಿತವಲ್ಲ. ಲಾ ಬೋರ್ಡ್ ಅದರ ಒಂದು ಸಣ್ಣ ಭಾಗ ಮಾತ್ರವಾಗಿದೆ. ಇಂತಹ ಪ್ರಯತ್ನ ನಡೆಸುತ್ತಿರುವ ಶಕ್ತಿಗಳ ವಿರುದ್ದ ಎಚ್ಚರ ವಹಿಸಬೇಕಾಗಿದೆ ಎಂದರು. ಇಸ್ಲಾಮಿಕ್ ದೇಶ ಎಂಬ ಸಂಕಲ್ಪವನ್ನೇ ಬುಡಮೇಲು ಮಾಡುವ ಷಡ್ಯಂತ್ರ ನಡೆಯುತ್ತಿದ್ದು, ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಬಳಿ ಪರಮಾಣು ಬಾಂಬು ಇದೆ ಎಂದು ಆರೋಪಿಸಿ ದಾಳಿ ಮಾಡಲಾಯಿತು. ಅದರೆ ಕೊನೆಗೆ ಇದು ಸುಳ್ಳೆಂದು ಸಾಬೀತಾಯಿತು. ಐಎಸ್ಐ ಭಯೋತ್ಪಾಧನೆಗೆ ಇಸ್ಲಾಂ ಭಯೋತ್ಪಾದಕತೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಎನ್ಕೌಂಟರ್ ಬಗ್ಗೆ ಸಾಕಷ್ಟು ಸಂಶಯಗಳಿವೆ ಎಂದ ಅವರು ಈ ಎಲ್ಲಾ ಷಡ್ಯಂತ್ರಗಳ ನಡುವೆ ಮುಸ್ಲಿಂ ಸಮುದಾಯ ಕ್ಷಣ ಕ್ಷಣಕ್ಕೂ ಭಯ ಭೀತಿಯಿಂದ ಬದುಕುವ ಸ್ಥಿತಿ ನಿರ್ಮಿಸಲಾಗುತ್ತಿದೆ. ಸತ್ಯವಿಶ್ವಾಸಿಗಳಿಗೆ ಇದೊಂದು ಪರೀಕ್ಷಾ ಕಾಲಘಟ್ಟವಾಗಿದೆ. ಅಲ್ಲಾಹನ ಮೇಲಿನ ಅಚಲ ನಂಬಿಕೆ ಮತ್ತು ವಿಶ್ವಾಸದಿಂದ ಈ ಪರೀಕ್ಷೆಯನ್ನು ಎದುರಿಸಬೇಕಾಗಿದೆ ಎಂದರು.
ದೇಶದ ಬಹುಸಂಖ್ಯಾತರು ಕೋಮುವಾದಿಗಳಲ್ಲ ಧರ್ಮನಿಷ್ಠರು: ಮುಹಮ್ಮದ್ ಕುಂಞಿ
‘ನಮ್ಮ ಸಮಾಜ ನಮ್ಮ ಹೊಣೆಗಾರಿಕೆ’ ಎಂಬ ವಿಷಯದ ಬಗ್ಗೆ ಮಾತನಾಡಿದ ಕರ್ನಾಟಕ ಜಮಾಅತೆ ಇಸ್ಲಾಂ ಹಿಂದ್ನ ಶೂರಾ ಸದಸ್ಯ ಮುಹಮ್ಮದ್ ಕುಂಞಿ, ಈ ದೇಶದ ಎಲ್ಲಾ ಧರ್ಮಗಳ ಬಹುಸಂಖ್ಯಾತರು ಕೋಮುವಾದಿಗಳಲ್ಲ, ತಮ್ಮ ದೇವರ ಮೇಲೆ ಭಕ್ತಿ ಮತ್ತು ನಂಬಿಕೆಯನ್ನು ಇಟ್ಟುಕೊಂಡು ಬದುಕುತ್ತಾ ಇನ್ನೊಬ್ಬರ ಧರ್ಮಗಳನ್ನು ಗೌರವಿಸುತ್ತಿರುವ ಧರ್ಮನಿಷ್ಠರು. ಒಂದು ಧರ್ಮವನ್ನು ಕೋಮುವಾದಿಗಳೆಂದು ಬಿಂಬಿಸುವುದು ಸಮಾಜಕ್ಕೆ ಅಪಾಯ ಎಂದರು.
ಅಧಿಕಾರ ಪಡೆಯುವ ಉದ್ದೇಶದಿಂದ ಫ್ಯಾಸಿಸ್ಟ್ ಶಕ್ತಿಗಳು ಹಿಂದೂ ಮತ್ತು ಮುಸ್ಲಿಂ ಎಂದು ವ್ಯವಸ್ಥಿತವಾಗಿ ಬೇರ್ಪಡಿಸುತ್ತಾ ಧ್ರುವೀಕರಣ ನಡೆಸುತ್ತಾ ಪರಸ್ಪರ ಕಚ್ಚಾಡಿಸುತ್ತಾ ಈ ನಾಡಿನ ಸೌಹಾರ್ದತೆಯ ಮತ್ತು ಸಹಿಷ್ಣುತೆಯ ಪರಂಪರೆಯನ್ನು ದುರ್ಬಲಗೊಳಿಸುತ್ತಿದೆ. ಇದನ್ನು ಎಲ್ಲರೂ ಸೇರಿಕೊಂಡು ಎದುರಿಸಬೇಕಾಗಿದೆ. ಕೋಮುವಾದಕ್ಕೆ ಕೋಮುವಾದವೇ ಉತ್ತರವಾದಲ್ಲಿ ಸಮಾಜ ನಾಶವಾಗಲಿದೆ. ಜನರನ್ನು ಪರಸ್ಪರ ಒಟ್ಟುಗೂಡಿಸುವ, ಉತ್ತಮ ಸ್ಪಂದನೆಯೊಂದಿಗೆ ಜನರ ನಡುವೆ ಸೇತುವೆ ನಿರ್ಮಿಸುವ ಮೂಲಕ ಒಂದಾಗಿಸಿ ಫ್ಯಾಸಿಸ್ಟರ ಧ್ರುವೀಕರಣ ನೀತಿಯನ್ನು ತಡೆಯಬೇಕು ಎಂದರು.
ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಇಸ್ಹಾಕ್ ಪುತ್ತೂರು, ವಿ.ಟಿ. ಅಬ್ದುಲ್ಲಾ ಕೋಯ ತಂಙಳ್ರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು. ಜಮಾಅತೆ ಇಸ್ಲಾಮೀ ಹಿಂದ್ನ ಮುಖಂಡರಾದ ಇಲ್ಯಾಸ್ ಇಸ್ಮಾಯೀಲ್, ಕೆ.ಎಂ. ಶರೀಫ್, ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಅಬ್ದುಲ್ ಖಾದರ್ ಕುಕ್ಕಿಲ, ಇಲ್ಯಾಸ್ ಯು.ಕೆ., ಅಬ್ದುಸ್ಸಲಾಂ ಉಪ್ಪಿನಂಗಡಿ, ಎಸ್ಐಒ ಜಿಲ್ಲಾಧ್ಯಕ್ಷ ರಫೀಕ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅರಫಾ ಮಂಚಿ ಅವರ ‘ಪ್ರತಿರೋಧ ಇಸ್ಲಾಂನಲ್ಲಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹಜ್ ಕ್ವಿಝ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಅಪರಾಹ್ನ 2:30ರ ಬಳಿಕ ‘ಸಮುದಾಯದ ಸಬಲೀಕರಣ ಹೇಗೆ ಸಾಧ್ಯ’ ಎಂಬ ವಿಚಾರದ ಬಗ್ಗೆ ಕರ್ನಾಟಕ ಜಮಾಅತೆ ಇಸ್ಲಾಂ ಹಿಂದ್ನ ಶೂರಾ ಸದಸ್ಯ ಮಹಮ್ಮದ್ ಕುಂಞಿ ಅಧ್ಯಕ್ಷತೆಯಲ್ಲಿ ಚಾವಡಿ ಚರ್ಚೆ ನಡೆಯಿತು.
ಚರ್ಚೆಯಲ್ಲಿ ದ.ಕ ಮತ್ತು ಉಡುಪಿ ಜಮೀಯತ್ತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ದ.ಕ.ಜಿಲ್ಲಾ ಮುಸ್ಲಿಂ ಐಕ್ಯತಾ ವೇದಿಕೆ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಪ್ಪಿನಂಗಡಿ ದಾರುತೌಹೀದ್ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮಠ, ಅನ್ಸಾರುದ್ದೀನ್ ಎಜ್ಯುಕೇಶನ್ ಟ್ರಸ್ಟ್ನ ಖಜಾಂಜಿ ನ್ಯಾಯವಾದಿ ಫಝುಲ್ ರಹೀಂ, ಮಂಗಳೂರು ಕೌನ್ಸಿಲ್ ಸೆಂಟರ್ನ ನಿರ್ದೇಶಕ ಸಯೀದ್ ಇಸ್ಮಾಯೀಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮಂಗಳೂರು ಟಿಆರ್ಎಫ್ ಗೌರವ ಸಲಹೆಗಾರ ರಫೀಕ್ ಮಾಸ್ಟರ್, ಸುಳ್ಯ ಗ್ರೀನ್ವ್ಯೆ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಕೆ.ಎಂ. ಮುಸ್ತಫಾ ಸುಳ್ಯ, ಎಸ್ಐಒ ಆಫ್ ಇಂಡಿಯಾ ನಿಕಟಪೂರ್ವ ಅಧ್ಯಕ್ಷ ಅಶ್ಫಾಕ್ ಶರೀಫ್ ಪಾಲ್ಗೊಂಡಿದ್ದರು.







