ಕಣ್ಣೂರು ಮಸೀದಿ ರಸ್ತೆ ಅಭಿವೃದ್ಧಿಗೆ 3 ಕೋ.ರೂ. ಮಂಜೂರು: ಶಾಸಕ ಲೋಬೊ
![ಕಣ್ಣೂರು ಮಸೀದಿ ರಸ್ತೆ ಅಭಿವೃದ್ಧಿಗೆ 3 ಕೋ.ರೂ. ಮಂಜೂರು: ಶಾಸಕ ಲೋಬೊ ಕಣ್ಣೂರು ಮಸೀದಿ ರಸ್ತೆ ಅಭಿವೃದ್ಧಿಗೆ 3 ಕೋ.ರೂ. ಮಂಜೂರು: ಶಾಸಕ ಲೋಬೊ](https://www.varthabharati.in/sites/default/files/images/articles/2016/11/14/M.CAMPA 1.jpg)
ಮಂಗಳೂರು, ನ.13: ಕುಲಶೇಖರದಿಂದ ಸರಿಪಳ್ಳ, ಕೋಡಕಲ್ ಮುಖಾಂತರ ಕನ್ನಗುಡ್ಡವರೆಗೆ ಹೋಗುವ ರಸ್ತೆಯ ಅಭಿವೃದ್ಧಿಗೆ 5 ಕೋ.ರೂ. ಹಾಗೂ ಉಳ್ಳಾಲ ಸೇತುವೆ ಬದಿಯಿಂದ ಕಣ್ಣೂರು ಮಸೀದಿಯವರೆಗೆ ನೂತನ ರಸ್ತೆ ಅಭಿವೃದ್ಧಿಗೆ 3 ಕೋ.ರೂ. ಮಂಜೂರಾಗಿದ್ದು, ಈ ರಸ್ತೆ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿ ವಾಹನಗಳ ದಟ್ಟಣೆ ಸ್ವಲ್ಪ ಕಡಿಮೆಯಾಗಬಹುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ 51ನೆ ಅಳಪೆ ಉತ್ತರ ವಾರ್ಡ್ ಕಾಂಗ್ರೆಸ್ ವತಿಯಿಂದ ಹಾಗೂ ಜೀವನ್ ಧಾರಾ ಸಮಾಜ ಸೇವಾ ಪ್ರತಿಷ್ಠಾನ ಕುಲಶೇಖರ, ಕೆಎಂಸಿ, ಎ.ಜೆ. ಆಸ್ಪತ್ರೆ, ಮಂಗಳೂರು ಮನಪಾ, ಜಿಲ್ಲಾ ಆರೋಗ್ಯ ಕೇಂದ್ರ ಇವುಗಳ ಆಶ್ರಯದಲ್ಲಿ ರವಿವಾರ ಕುಲಶೇಖರದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಶಾಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಚಿಕಿತ್ಸಾ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಪೊರೇಟರ್ ಪ್ರಕಾಶ್ ಬಿ., ಸಂತಕ್ರೂಸ್ನ ಸುಪೀರಿಯರ್ ಸಿಸ್ಟರ್ ಅಣ್ಣಾ ಮಲೈ, ಸೇಕ್ರೆಡ್ ಹಾರ್ಟ್ಸ್ ಶಾಲೆಯ ಸಿಸ್ಟರ್ ಜೆಸಿಲಿನಾ, ಎ.ಜೆ. ಆಸ್ಪತ್ರೆಯ ಡಾ.ಅಂಜನಾ, ಜಿಲ್ಲಾ ಆರೋಗ್ಯ ಕೇಂದ್ರದ ಡಾ.ಪ್ರವೀಣ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಕಾಂಗ್ರೆಸ್ ಆರೋಗ್ಯ ಸಮಿತಿಯ ಮುಖ್ಯಸ್ಥ ಪ್ರಭಾಕರ ಶ್ರೀಯಾನ್, ಅಳಪೆ ವಾರ್ಡ್ನ ಅಧ್ಯಕ್ಷ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿಸಿಲ್ವ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಮುಡಾ ಸದಸ್ಯೆ ಶೋಭಾ ಕೇಶವ, ಇಲ್ಯಾಸ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.