‘ಆಳ್ವಾಸ್ ಕೃಷಿಸಿರಿ’ಯಲ್ಲಿ ಶ್ವಾನ ಮತ್ತು ಫಲಪುಷ್ಪಗಳ ಪ್ರದರ್ಶನ
![‘ಆಳ್ವಾಸ್ ಕೃಷಿಸಿರಿ’ಯಲ್ಲಿ ಶ್ವಾನ ಮತ್ತು ಫಲಪುಷ್ಪಗಳ ಪ್ರದರ್ಶನ ‘ಆಳ್ವಾಸ್ ಕೃಷಿಸಿರಿ’ಯಲ್ಲಿ ಶ್ವಾನ ಮತ್ತು ಫಲಪುಷ್ಪಗಳ ಪ್ರದರ್ಶನ](https://www.varthabharati.in/sites/default/files/images/articles/2016/11/15/Alvas_Nudisiri.jpg)
ಮೂಡುಬಿದಿರೆ, ನ.15: ನ.18ರಿಂದ 20ರವರೆಗೆ ನಡೆಯಲಿರುವ ‘ಆಳ್ವಾಸ್ ನುಡಿಸಿರಿ’ಯ ಅಂಗವಾಗಿ ಆಯೋಜಿಸಿರುವ ‘ಆಳ್ವಾಸ್ ಕೃಷಿಸಿರಿ’ಯಲ್ಲಿ ಶ್ವಾನಗಳ ಮತ್ತು ಫಲಪುಷ್ಪಗಳ ಪ್ರದರ್ಶನ, ಬೃಹತ್ ಮಟ್ಟದ ಮತ್ಸಾಲಯ, ಮತ್ಸ ಕಾರಂಜಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಅವರು ಕೃಷಿ ಸಿರಿಯ ಕುರಿತು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ನ.17ರಂದು ಸಂಜೆ ಕೃಷಿಸಿರಿ ಉದ್ಘಾಟನೆಗೊಳ್ಳಲಿದ್ದು, ನ.19ರಂದು ಕೃಷಿ ಸಂಬಂಧಿ ಪರಿಕರಗಳ ಪ್ರದರ್ಶನ, ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಗಾಗಲೇ 150ಕ್ಕೂ ಅಧಿಕ ರಾಜ್ಯ ಮಟ್ಟದ ಕೃಷಿ ಮಳಿಗೆಗಳು ಹೆಸರು ನೊಂದಾಯಿಸಿವೆ. ತಂತ್ರಜ್ಞಾನಾಧಾರಿತ ಆಧುನಿಕ ಕೃಷಿ ಉಪಕರಣಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು, ಗ್ರಾಮೀಣ ಭಾಗದ ಕೃಷಿಕರಿಗೆ ಆಧುನಿಕ ತಾಂತ್ರಿಕತೆಯ ಪರಿಚಯವಾಗಲಿದೆ. ಮತ್ತು ಕೃಷಿಕರ ಅಗತ್ಯಗಳನ್ನು ಪೂರೈಸುವಲ್ಲಿಯೂ ಪ್ರಯತ್ನಿಸಲಿವೆ. ಕೃಷಿ ಸಂಸ್ಕೃತಿಯಿಂದ ದೂರವಿರುವ ಯುವ ಪೀಳಿಗೆಗೆ ಪಾರಂಪರಿಕ ಆಹಾರ ಸಂಸ್ಕೃತಿಯನ್ನು ಪರಿಚಯಿಸಲಿದೆ.
ಶ್ವಾನಗಳ ಪ್ರದರ್ಶನ, ಮತ್ಸಾಲಯ:
ನ.19ರಂದು ಅಪರಾಹ್ನ 2:30ರಿಂದ 5:30ರವರೆಗೆ 2ರಕ್ಕಿಂತಲೂ ಮಿಕ್ಕಿದ ವಿವಿಧ ತಳಿಗಳ 100ಕ್ಕೂ ಅಧಿಕ ಆಕರ್ಷಕ ಶ್ವಾನಗಳ ಪ್ರದರ್ಶನವಿದೆ. 60ಕ್ಕೂ ಮಿಕ್ಕಿದ ವಿವಿಧ ಗಾತ್ರದ ವಿವಿಧ ಜಾತಿಯ ವಿವಿಧ ಬಣ್ಣಗಳ ಮೀನುಗಳ ಬೃಹತ್ ಮತ್ಸಾಲಯ ನಿರ್ಮಿಸಿದ್ದು, ತುಂಬಿದ ನೀರಿನಲ್ಲಿ ಮೀನುಗಳ ಚೆಲ್ಲಾಟ ಮತ್ತು ವರ್ಣ ರಂಜಿತ ಕಾರಂಜಿಯ ಪ್ರದರ್ಶನವಿದೆ. ವಿವಿಧ ಜಾತಿ, ಗಾತ್ರಗಳ ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. 150ಕ್ಕೂ ಮಿಕ್ಕಿದ ಮಳಿಗೆಗಳಲ್ಲಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. ಕೃಷಿ ಪರಿಕರಣಗಳಾದ ಬುಟ್ಟಿ, ಗೊರಬು, ಮುಟ್ಟಾಳೆಗಳ ತಯಾರಿ ಮತ್ತು ಪ್ರಾತಕ್ಷಿತೆಯಿದೆ. ಜೊತೆಗೆ ತರಕಾರಿ ಬೀಜಗಳು, ಕೃಷಿಗೆ ಸಂಬಂಧಿಸಿದ ರಾಸಾಯನಿಕಗಳ ಮಾರಾಟ ವ್ಯವಸ್ಥೆಯಿದೆ. ದೇಸಿ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಕಿರು ಪ್ರಯತ್ನ ಇದಾಗಿದ್ದು, ಕೃಷಿಕರು ಕೃಷಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಉದ್ಘಾಟನೆ:
ನ.17ರಂದು ಸಂಜೆ 5ಕ್ಕೆ ಹಿರಿಯ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಧರ್ಮಸ್ಥಳ ಎಸ್ಕೆಡಿಆರ್ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ, ಹಿರಿಯ ಕೃಷಿ ವಿಜ್ಞಾನಿ ಡಾ.ಎಲ್.ಸಿ.ಸೋನ್ಸ್, ಪಶು ಸಂಶೋಧನಾ ಇಲಾಖೆಯ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ಕೃಷಿ ಇಲಾಖೆಯ ಸಹ ನಿರ್ದೇಶಕ ಕೆಂಪೇಗೌಡ, ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ಶಿವಪ್ರಸಾದ್ ಎಸ್.ಎಂ., ಕೃಷಿ ಮತ್ತು ವಿಜ್ಞಾನ ಕೇಂದ್ರದ ಸಹಾಯಕ ಸಂಶೋಧನಾ ನಿರ್ದೇಶಕ ಡಾ. ಹನುಮಂತಪ್ಪ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೀಶ್ ಎಚ್.ಆರ್., ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಶಿವಾನಂದ ಮಗದ, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಸುಬ್ರಹ್ಮಣ್ಯ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಪ್ರಗತಿಪರ ಕೃಷಿಕ ಪಿ.ಕೆ.ರಾಜು ಪೂಜಾರಿ, ಅಂಡಾರು ಗುಣಪಾಲ ಹೆಗ್ಡೆ, ಆಲ್ವಿನ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.