‘ಜನಧನ್’ ಖಾತೆಗೆ ಹಣ ಹಾಕುವವರೇ ಎಚ್ಚರ !: ಆಹಾರ ಸಚಿವರ ಎಚ್ಚರಿಕೆ

ಬೆಂಗಳೂರು, ನ. 15: ಐದು ನೂರು ರೂ.ಮತ್ತು ಸಾವಿರ ರೂ.ನೋಟು ಚಲಾವಣೆ ರದ್ದು ಮಾಡಿದ್ದು, ‘ಜನಧನ್’ ಖಾತೆಗೆ ಲಕ್ಷಾಂತರ ರೂ.ಜಮಾ ಮಾಡುವವರು ಮುಂಬರುವ ದಿನಗಳಲ್ಲಿ ಸರಕಾರದ ಸಬ್ಸಿಡಿ ಯೋಜನೆಗಳನ್ನು ಪಡೆಯಲು ಸಮಸ್ಯೆ ಆಗುವ ಸಾಧ್ಯತೆಗಳಿವೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನಧನ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದು, ಹೆಚ್ಚಿನ ಮೊತ್ತದ ಹಣ ಖಾತೆಗೆ ಜಮಾ ಮಾಡುವವರ ಮೇಲೆ ಕೇಂದ್ರ ಸರಕಾರ ನಿಗಾ ವಹಿಸುವ ಸಾಧ್ಯತೆಗಳಿವೆ. ಆದುದರಿಂದ ಬಡವರು ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ಬಡ ಜನರು ತಮ್ಮ ಖಾತೆಯಲ್ಲಿ ಹೆಚ್ಚಿನ ಮೊತ್ತವಿದ್ದರೆ ಪಡಿತರ ಚೀಟಿ ರದ್ದಾಗದು. ಆದರೆ, ಸರಕಾರಗಳ ಸಬ್ಸಿಡಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕಷ್ಟ ಆಗಬಹುದು ಎಂದ ಅವರು, ಒಂದೇ ಬಾರಿಗೆ ಖಾತೆಗೆ ಹೆಚ್ಚಿನ ಮೊತ್ತದ ಹಣ ಪಾವತಿಸುವುದರಿಂದ ಅದು ದಾಖಲೆಯಾಗುತ್ತದೆ. ಬಡ ಜನರು ಈ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂದು ತಿಳಿಸಿದರು.
ಉಪ್ಪಿನ ಕೊರತೆ ಇಲ್ಲ: ರಾಜ್ಯದಲ್ಲಿ ಉಪ್ಪಿನ ಕೊರತೆಯಿಲ್ಲ. ಹೆಚ್ಚಿನ ಪ್ರಮಾಣದ ಉಪ್ಪು ದಾಸ್ತಾನಿದ್ದು, ಜನ ಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ ಅವರು, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಉಪ್ಪು ಮಾರಾಟ ಮಾಡಿದರೆ ಕೂಡಲೇ ಆಹಾರ ಇಲಾಖೆಗೆ ದೂರು ನೀಡಿ ಎಂದು ಸೂಚಿಸಿದರು.
ಕಲಬುರಗಿಯ ಕಿರಣ್ ಬಝಾರ್ ದರ್ಗಾ ಮೈದಾನ ಪ್ರದೇಶದಲ್ಲಿ ಉಪ್ಪು ಕಳವು ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗಿದೆ. ಈ ಸಂಬಂಧ 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ರಾಜ್ಯದಲ್ಲಿ 126 ಕಡೆಗಳಲ್ಲಿ ದುಬಾರಿ ಮೊತ್ತಕ್ಕೆ ಉಪ್ಪು ಮಾರಾಟದ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು.
ತೂಕ ಪರೀಕ್ಷೆ: ಅಳತೆ ಮತ್ತು ತೂಕದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ವಂಚನೆ ತಪ್ಪಿಸುವ ದೃಷ್ಟಿಯಿಂದ ಬೆಂಗಳೂರಿನ 638 ಸೂಪರ್ ಮಾರ್ಕೆಟ್, ಮಾಲ್ಗಳು ಸೇರಿದಂತೆ ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಪ್ರದೇಶಗಳಲ್ಲಿ ತೂಕದ ಯಂತ್ರವನ್ನು ಆಹಾರ ಇಲಾಖೆಯಿಂದ ಅಳವಡಿಸಲಾಗುವುದು ಎಂದರು.
ದೊಡ್ಡ-ದೊಡ್ಡ ಮಾಲ್ಗಳು, ಸೂಪರ್ ಮಾರ್ಕೆಟ್ಗಳ ಮಾಲಕರು ತಮ್ಮ ವೆಚ್ಚದಲ್ಲಿ ಯಂತ್ರ ಅಳವಡಿಸಲಿದ್ದು, ಅದನ್ನು ಆಹಾರ ಇಲಾಖೆಯ ಆಳತೆ ಮತ್ತು ತೂಕ ನಿಯಂತ್ರಣ ಇಲಾಖೆ ಪರಿಶೀಲನೆ ಮತ್ತು ನಿರ್ವಹಣೆ ಮಾಡಲಿದೆ ಎಂದು ಸ್ಪಷ್ಟಣೆ ನೀಡಿದರು.
ದಾಸ್ತಾನು ಮಿತಿ: ಕಾಳಸಂತೆಕೋರರ ನಿಯಂತ್ರಣಕ್ಕಾಗಿ ಆಹಾರ ಧಾನ್ಯಗಳ ಅಕ್ರಮ ದಾಸ್ತಾನಿಗೆ ಮಿತಿ ಹೇರಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಅದರನ್ವಯ ಬೆಂಗಳೂರು ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ಕಿ, ಅಡುಗೆ ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಸಗಟು 1ಸಾವಿರ ಕ್ವಿಂಟಾಲ್, ಚಿಲ್ಲರೆ-2 ಕ್ವಿಂಟಾಲ್ ದಾಸ್ತಾನು ಮಿತಿ ಹೇರಲಾಗಿದೆ.
ಈ ಮಿತಿಗಿಂತ ಹೆಚ್ಚಿನ ಪ್ರಮಾಣದ ದಾಸ್ತಾನು ಮಾಡಿದರೆ ಅಂತಹ ಗೋದಾಮುಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಪಡೆ ದಿಢೀರ್ ದಾಳಿ ನಡೆಸಲಿದೆ. ಅಲ್ಲದೆ, ಹೆಚ್ಚುವರಿ ದಾಸ್ತಾನು ವಶಪಡಿಸಿಕೊಳ್ಳುವುದಲ್ಲದೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಖಾದರ್ ಎಚ್ಚರಿಸಿದರು.
ಪರ್ಯಾಯ ಕ್ರಮ: ಅನ್ನಭಾಗ್ಯ ಯೋಜನೆ ಆಹಾರ ಧಾನ್ಯ ಸಾಗಾಣಿಕೆ ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಮುಷ್ಕರನಿರತರ ಜೊತೆ ಚರ್ಚಿಸಲಾಗಿದೆ. ಅವರು ಸರಕಾರದ ಕ್ರಮಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ನಕಲಿ ಪಡಿತರ ಚೀಟಿ ಪತ್ತೆಯಲ್ಲಿ ದೇಶದಲ್ಲೆ ಕರ್ನಾಟಕ ಮುಂಚೂಣಿಯಲ್ಲಿದೆ. ಆ ಮೂಲಕ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಆದರೆ, ಇತರೆ ರಾಜ್ಯದಲ್ಲಿ ಈ ಬಗ್ಗೆ ಪರಿಶೀಲನೆಯೇ ನಡೆಯುತ್ತಿಲ್ಲ. ಒಂದು ವೇಳೆ ಪರಿಶೀಲನೆ ನಡೆದರೆ ಗೊತ್ತಾಗಲಿದೆ’
-ಯು.ಟಿ.ಖಾದರ್ ಆಹಾರ ಸಚಿವ





