ಹಕ್ಕಿ ಜ್ವರ: ಮುಂಜಾಗರೂಕತೆ ವಹಿಸಲು ಡಿಸಿ ಸೂಚನೆ

ಮಂಗಳೂರು, ನ.15: ಬಳ್ಳಾರಿ ಜಿಲ್ಲೆ ಮತ್ತು ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಮಟ್ಟದ ಪ್ರಾಣಿಜನ್ಯ ರೋಗಗಳ ತಡೆಗಟ್ಟುವ ಸಮಿತಿ ಸಭೆ ನಡೆಯಿತು.
ದ.ಕ.ಜಿಲ್ಲೆಯಲ್ಲಿ ಹಕ್ಕಿ ಜ್ವರ ಹರಡದಂತೆ ಸಾರ್ವಜನಿಕರು, ಕೋಳಿ ಮಾಂಸ ಮಾರಾಟ ಕೇಂದ್ರ ಮತ್ತು ಕೋಳಿ ಫಾರಂಗಳು ಮುಂಜಾಗರೂಕತಾ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ದ.ಕ.ಜಿಲ್ಲೆಯಲ್ಲಿ ಇಲ್ಲಿಯವರೆಗೂ ಈ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಆತಂಕಗೊಳಪಡುವ ಅಗತ್ಯವಿಲ್ಲ. ಅದಾಗ್ಯೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ರೋಗ ಹರಡುವ ಸಾಧ್ಯತೆ ಇರುವುದಿಲ್ಲ. ಕೋಳಿಗಳಲ್ಲಿ ಯಾವುದೇ ರೀತಿಯ ಅಸಹಜ ಸಾವು ಮತ್ತು ಹಕ್ಕಿ ಜ್ವರದ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಪಶುವೈದ್ಯ ಸಂಸ್ಥೆಗಳಿಗೆ ಕೂಡಲೇ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಟಿ. ತಿಪ್ಪೇಸ್ವಾಮಿ ಮಾತನಾಡಿ, ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಶುಚಿತ್ವ ಕಾಪಾಡಬೇಕು, ಅನಗತ್ಯ ಜನರ ಓಡಾಟ ನಿಬಂಧಗೊಳಿಸಬೇಕು. ಕೋಳಿ ಫಾರಂಗಳಿಗೆ ಭೇಟಿ ನೀಡುವ ಕೋಳಿ ಆಹಾರ ಸಾಗಾಟ ವಾಹನಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನಂಜುನಾಶಕ ಸಿಂಪಡಿಸಬೇಕು ಎಂದರು.
ಕೇರಳ ರಾಜ್ಯಕ್ಕೆ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳನ್ನು ರವಾನಿಸಿ ರಾಜ್ಯಕ್ಕೆ ಹಿಂದಿರುಗಿ ಬರುವ ವಾಹನಗಳಿಗೆ ಮತ್ತು ಕೇರಳದಿಂದ ಕೋಳಿ ಖರೀದಿಸಲು ಬರುವ ವಾಹನಗಳಿಗೆ, ಕಟ್ಟುನಿಟ್ಟಾಗಿ ರಾಜ್ಯದ ಗಡಿಭಾಗದಲ್ಲಿಯೇ ನಂಜುನಾಶಕ ಔಷಧ ಸಿಂಪಡಿಸಿ ಬರುವಂತೆ ಸೂಚಿಸಿದೆ. ಆಯಾ ಕೋಳಿ ಸಾಕಾಣಿಕ ಉದ್ಯಮ ಸಂಸ್ಥೆಯವರಿಗೆ ಶುಚಿತ್ವ ಕಾಪಾಡದ ಕೋಳಿ ಸಾಗಾಟ ವಾಹನಗಳನ್ನು ಗಡಿಯಲ್ಲಿಯೇ ತಡೆದು ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುವುದು. ಪಶುಪಾಲನಾ ಇಲಾಖೆಯವರು ರೋಗ ಪರಿಶೀಲನೆ ಮತ್ತು ರೋಗ ಕಣ್ಗಾವಲು ನಿಗಾವಹಿಸಲು ಕೋಳಿ ಫಾರಂ ಹಾಗೂ ಕೋಳಿ ಮಾಂಸ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದಾಗ ಸಹಕರಿಸಿ ಪರಿಶೀಲನೆ ನೆರವೇರಿಸಲು ಅನುವು ಮಾಡಿಕೊಡುವುದು. ಕೋಳಿ ಮಾಂಸ ಮಾರಾಟ ಕೇಂದ್ರಗಳು ಶುಚಿತ್ವ ಕಾಪಾಡುವಂತೆ ಮತ್ತು ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಂಡು ರೋಗ ಹರಡದಂತೆ ಸಹಕರಿಸಬೇಕು ಎಂದರು.







