ಮೀನು ಸಂತತಿಯ ಸಂರಕ್ಷಣೆಗೆ ಕ್ರಮ: ಸಚಿವ ಪ್ರಮೋದ್ ಮದ್ವರಾಜ್

ಮಂಗಳೂರು, ನ.16: ವಿವಿಧ ಕಾರಣದಿಂದ ಸ್ಥಗಿತಗೊಂಡಿದ್ದ ಮಂಗಳೂರಿನ ಮೀನುಗಾರಿಕಾ ಬಂದರ್ನ 3ನೆ ಹಂತದ ಕಾಮಗಾರಿ ಶೀಘ್ರ ಪುನರಾರಂಭಗೊಳ್ಳಲಿದೆ ಎಂದು ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರದ 32 ಕೋ.ರೂ. ಬರಲು ಬಾಕಿ ಇದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಸಮಾಲೋಚನೆ ಮಾಡಿದ್ದು, ಶೀಘ್ರ 10 ಕೋ.ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಮಧ್ವರಾಜ್ ಹೇಳಿದರು.
ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮೀನುಗಳ ಉತ್ಪಾದನೆಯಾಗುತ್ತದೆ. ಈ ಪದ್ಧತಿಯು ವಿನಾಶಕಾರಿಯಾಗಿದೆ. ಇದನ್ನು ಅಳವಡಿಸಿಕೊಂಡರೆ 3-4 ವರ್ಷದಲ್ಲಿ ಮೀನುಗಾರಿಕೆಗೆ ಹೊಡೆತ ಬೀಳಲಿದೆ. ಮೀನು ಸಂತತಿಯನ್ನು ಸಂರಕ್ಷಿಸಲು ಹೆಚ್ಚು ಗಮನಹರಿಸುವ ಅಗತ್ಯವಿದೆ. ಪಶ್ಚಿಮ ಮತ್ತು ಪೂರ್ವ ಕರಾವಳಿ ತೀರದ ರಾಜ್ಯಗಳ ಮೀನುಗಾರಿಕಾ ಸಚಿವರ ಸಭೆಯನ್ನು ಕರೆಯಲು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ. ಮೀನುಮರಿಗಳು ಕಂಪೆನಿಗಳಿಗೆ ಸಾಗಾಟ ಮಾಡುವುದನ್ನು ಪತ್ತೆಹಚ್ಚಲು ನಿರೀಕ್ಷಕರನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮಧ್ವರಾಜ್ ತಿಳಿಸಿದರು.
ಮಂಗಳೂರಿನ ಫುಟ್ಬಾಲ್ ಮೈದಾನವನ್ನು 1 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಮ ಜರಗಿಸಲಾಗಿದೆ. ಈಗಾಗಲೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಅವರು, ಎಮ್ಮೆಕೆರೆಯಲ್ಲಿ ಈಜುಕೊಳ ನಿರ್ಮಾಣಕ್ಕೆ 4.99 ಕೋ.ರೂ. ಅಂದಾಜು ವೆಚ್ಚ ತಯಾರಿಸಲಾಗಿತ್ತು. ಈಗ ಅಂದಾಜು ವೆಚ್ಚ 12.50 ಕೋ.ರೂ. ಆಗಿದೆ. ಒಲಿಂಪಿಕ್ ಮಟ್ಟದ ಈಜುಕೊಳ ನಿರ್ಮಾಣಕ್ಕೆ 2.50 ಕೋ.ರೂ. ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಹೀಗಿರುವಾಗ ಎಮ್ಮೆಕೆರೆ ಈಜುಕೊಳ ನಿರ್ಮಾಣಕ್ಕೆ 12.50 ಕೋ.ರೂ. ದುಬಾರಿಯಾಗಲಿದೆ. ದುಂದುವೆಚ್ಚ ತಡೆಯಲು ಮತ್ತು ಗುಣಮಟ್ಟ ಹೆಚ್ಚಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ, ಈ ಅಂದಾಜು ವೆಚ್ಚವನ್ನು ಪುನ: ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ಮಧ್ವರಾಜ್ ತಿಳಿಸಿದರು.
ರಾಜ್ಯದಲ್ಲಿ ಕ್ರೀಡಾನೀತಿ ಜಾರಿಗೊಳಿಸಲು ಈಗಾಗಲೆ ಎಲ್ಲ ಜಿಲ್ಲೆಯ ಕ್ರೀಡಾಳುಗಳ,ಸಂಘಟನೆಗಳ ಸಲಹೆ ಕ್ರೋಢೀಕರಿಸಲಾಗಿದೆ. ನ.24ರ ಬೆಳಗಾವಿಯಲ್ಲಿ ಸಭೆ ನಡೆಸಿದ ಬಳಿಕ ಹೊಸ ಕ್ರೀಡಾನೀತಿ ಘೋಷಿಸಲಾಗುವುದು. ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯ ಸರಕಾರವು 120 ಕೋ.ರೂ. ಪ್ರಸ್ತಾವವನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ. ಕೇಂದ್ರವು ಕ್ರೀಡೆಗೆ ಬಜೆಟ್ನಲ್ಲಿ ಮೀಸಲಿಡುವ ಅನುದಾನ ಏನೇನೂ ಸಾಲದು. ವಾರ್ಷಿಕ 900 ಕೋಟಿಯನ್ನು ದುಪ್ಪಟ್ಟು ಮಾಡಲು ಮನವಿ ಮಾಡಲಾಗಿದೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ದೈಹಿಕ ಶಿಕ್ಷಕರನ್ನು ಕ್ರೀಡಾ ಇಲಾಖೆಯ ಅಧೀನಕ್ಕೊಳಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗೆ ಆದರೆ, ದೈಹಿಕ ಶಿಕ್ಷಕರನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರಯತ್ನ ಮಾಡಬಹುದಾಗಿದೆ ಎಂದ ಪ್ರಮೋದ್, ವಿಶೇಷ ಸಾಮರ್ಥ್ಯದ ಕ್ರೀಡಾಪಟುಗಳಿಗೆ ಕ್ರೀಡಾನೀತಿಯಲ್ಲಿ ಹೆಚ್ಚು ಅವಕಾಶ ಕಲ್ಪಿಸಲಾಗುವುದು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು. ಕೆಎಫ್ಡಿಸಿ ಅಧ್ಯಕ್ಷ ರಾಜೇಶ್ ನಾಯಕ್ ಉಪಸ್ಥಿತರಿದ್ದರು. ಪತ್ರಕರ್ತರಾದ ಪುಷ್ಪರಾಜ್ ಬಿ.ಎನ್. ಸ್ವಾಗತಿಸಿದರು. ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.







