ಕೆಎಸ್ಸಾರ್ಟಿಸಿ ಸಾರ್ವಜನಿಕ ಕುಂದುಕೊರತೆಗಳ ಸಭೆ

ಪುತ್ತೂರು,ನ.17: ಪುತ್ತೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಹಳೆಯ ಬಸ್ಗಳನ್ನು ಓಡಿಸುತ್ತಿರುವ ಕುರಿತು ಈಗಾಗಲೇ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ಪುತ್ತೂರು ಘಟಕದ 100 ಕ್ಕೂ ಹೆಚ್ಚು ಹಳೆಯ ಬಸ್ಸುಗಳನ್ನು ಬದಲಾವಣೆ ಮಾಡುವ ಕುರಿತು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ತಿಳಿಸಿದರು.
ಪುತ್ತೂರು ಕೆಎಸ್ಸಾರ್ಟಿಸಿ ಡಿಪೋದಲ್ಲಿ ಬುಧವಾರ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ವತಿಯಿಂದ ನಡೆದ ವಿಭಾಗ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತೀ ತಿಂಗಳಲ್ಲಿ ಸುಮಾರು 40 ರಿಂದ 50 ಬಸ್ಗಳನ್ನು ಫಿಟ್ನೆಸ್ಗೆ ಒಳಪಡಿಸಲಾಗುತ್ತಿದೆ. ನ್ಯೂನತೆ ಕಂಡು ಬಂದ ಕಾರಣ ಶೀಘ್ರ ಪರಿಹಾರ ಸಾಧ್ಯವಾಗುತ್ತಿಲ್ಲ. ಈಗಾಗಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹೊಸ ಬಸ್ಗಳು ಬಂದ ಬಳಿಕ ಸಮಸ್ಯೆ ಪರಿಹಾರವಾಗಲಿದೆ ಎಂದು ಅವರು ತಿಳಿಸಿದರು.
ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ಬಿಎಸ್ ಮಾದರಿಯ ಡಲ್ಟ್ ಬಸ್ಗಳು ಸದ್ಯದಲ್ಲೇ ಬರಲಿದ್ದು, ಪುತ್ತೂರು ವಿಭಾಗದಲ್ಲಿ 28 ಹಾಗೂ ಮೆಡಿಕೇರಿ ವಿಭಾಗದಲ್ಲಿ 18 ಬಸ್ಗಳ ಓಡಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸಿಬ್ಬಂದಿ ಕೊರತೆಯಿಂದಾಗಿ ಬಸ್ಗಳ ಓಡಾಟದಲ್ಲಿ ಸಮಸ್ಯೆಗಳುಂಟಾಗಿದ್ದು, ಕರಾವಳಿ ಭಾಗದಿಂದ ರಿಕ್ರುಟ್ಮೆಂಟ್ಗೆ ಯಾರೂ ಬರುತ್ತಿಲ್ಲ. ಚಿಕ್ಕಮಗಳೂರು ಮುಂತಾದ ಕಡೆಗಳಿಂದ ನಿಯೋಜನೆಗೊಂಡವರು ಹವಾಮಾನ ಏರುಪೇರಿನಿಂದ ರಜೆಯಲ್ಲಿ ತೆರಳಿದವರು 10-15 ದಿನಗಳಾದರೂ ಕೆಲಸಕ್ಕೆ ಮರಳುವುದಿಲ್ಲ. ಇದರಿಂದಾಗಿ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಜನರಿಗೆ ಹೆಚ್ಚಿನ ಒತ್ತು ನೀಡಿ ರಿಕ್ರೂಟ್ಮೆಂಟ್ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಗ್ರಾಮೀಣ ಪ್ರದೇಶದ ಕೆಲವೊಂದು ಕಡೆಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಓಡಾಟವಿಲ್ಲದೆ ಶಾಲಾ ಹೆಣ್ಣುಮಕ್ಕಳು ಮನೆ ಸೇರಲು ರಾತ್ರಿಯಾಗುತ್ತಿದೆ, ಕೆಲವೊಂದು ಬಸ್ಗಳಿಗೆ ಬಾಗಿಲುಗಳಿಲ್ಲ .ಕೆಲವೊಂದು ಬಸ್ಗಳಿಗೆ ಬೋರ್ಡುಗಳೇ ಇರುವುದಿಲ್ಲ, ಕೆಲವೊಂದು ಬಸ್ಗಳಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುತ್ತಿದ್ದಾರೆ.. ಕೆಲವೊಂದು ಕಡೆಗಳಲ್ಲಿ ಐದಾರು ಬಸ್ಗಳು ಏಕಕಾಲದಲ್ಲಿ ಓಡಾಟ ನಡೆಸುತ್ತಿದ್ದು, ಇದರಿಂದಾಗಿ ಪ್ರಯಾಣಿಕೆಗೆ ಪ್ರಯೋಜನವಾಗುತ್ತಿಲ್ಲ ಎಂಬ ಆರೋಪಗಳು ಸಭೆಯಲ್ಲಿ ವ್ಯಕ್ತವಾಯಿತು.
ಮುಂಡೂರು-ತಿಂಗಳಾಡಿ-ಕಣಿಯಾರು ಮಾರ್ಗದ ಬಸ್ಗಳಿಂದ ಸಮಸ್ಯೆ ಉಂಟಾಗಿದೆ. ಅದರಲ್ಲೂ ಶಾಲೆಗೆ ತೆರಳು ವಿದ್ಯಾರ್ಥಿಗಳಿಗೆ. ಹೆಣ್ಣು ಮಕ್ಕಳಂತೂ ಮನೆ ತಲುಪುವಾಗ ರಾತ್ರಿಯಾಗುತ್ತದೆ. ತಕ್ಷಣ ಮುಂಡೂರು-ತಿಂಗಳಾಡಿ ಹಾಗೂ ಕಣಿಯಾರುಗೆ ಪ್ರತ್ಯೇಕ ಬಸ್ಗಳನ್ನು ನಿಯೋಜಿಸಬೇಕು. ಈ ಕುರಿತು ಸಾಕಷ್ಟು ಬಾರಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ತಹಶೀಲ್ದಾರ್ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರೂ ಘಟಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಆಲಿಸಲು ನಿಯಂತ್ರಣಾಧಿಕಾರಿಗಳು ಅಥವಾ ಘಟಕದವರು ಗ್ರಾಮ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಗ್ರಾಮಸಭೆಗಳಲ್ಲಿ ಘಟಕದ ವತಿಯಿಂದ ಯಾರಾದರೊಬ್ಬರು ಪಾಲ್ಗೊಳ್ಳುವುದಾಗಿ ನಿಂುಂತ್ರಣಾಧಿಕಾರಿ ಭರವಸೆ ನೀಡಿದರು. ಪುತ್ತೂರು ವಿಭಾಗದ ವೆಂಕಟೇಶ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಭಾಗದ ತಾಂತ್ರಿಕ ಅಧಿಕಾರಿ ವೇಣುಗೋಪಾಲ್, ವ್ಯವಸ್ಥಾಪಕ ಚನ್ನಬಸವೇ ಗೌಡ ಉಪಸ್ಥಿತರಿದ್ದರು. ಘಟಕದ ರಮೇಶ್ ನಿರೂಪಿಸಿದರು.







