ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಸರ್ವ ಸಿದ್ಧತೆ: ಡಾ. ರಾಜೇಂದ್ರ ಕುಮಾರ್
ಮಂಗಳೂರು, ನ.17: ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ನಲ್ಲಿ ನ. 18ರಂದು ನಡೆಯಲಿರುವ 63ನೆ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುಮಾರು 6000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ನಲ್ಲಿ ಕಾರ್ಯಕ್ರಮಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬೆಳಗ್ಗೆ 9.30ಕ್ಕೆ ಸಹಕಾರಿ ಬ್ಯಾಂಕ್ನ ಆವರಣದಿಂದ ಮೆರವಣಿಗೆ ಹೊರಡಲಿದೆ. ಮೆರವಣಿಗೆಯಲ್ಲಿ 7 ಟ್ಯಾಬ್ಲೋಗಳು ಹಾಗೂ ಕಲಾತಂಡಗಳ ಜತೆ 5000 ಮಂದಿ ಮೆರವಣಿಗೆಯಲ್ಲಿ ಸಾಗಿ ನಗರದ ನೆಹರೂ ಮೈದಾನ ತಲುಪಲಿದ್ದಾರೆ. ಅಲ್ಲಿ ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಾರ್ಯಕ್ರಮವನ್ನು ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಉತ್ತಮ ಸಹಕಾರ ಸಂಘಗಳಿಗೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಪ್ರಮೋದ್ ಮದ್ವರಾಜ್ ಪ್ರಶಸ್ತಿ ಪ್ರದಾನ ಹಾಗೂ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಸಚಿವ ಯುಟಿ.ಖಾದರ್ ಬಿಡುಗಡೆಗೊಳಿಸುವರು. ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮೂಡಬಿದ್ರೆ ಎಂಸಿಸಿ ಬ್ಯಾಂಕ್ನ ಅಧ್ಯಕ್ಷ ಅಮರನಾಥ ಶೆಟ್ಟಿ ಹಾಗೂ ಮಾಜಿ ಸಚಿವೆ ಮೋಟಮ್ಮ ಉತ್ತ ಸಹಕಾರ ಸಂಘದ ಪ್ರಶಸ್ತಿಯನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಸ್ವೀಕರಿಸಲಿದ್ದಾರೆ ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಗಮದ ಅಧ್ಯಕ್ಷ ಶೇಖರ ಗೌಡ ವಿ. ಮಾಲಿ ಪಾಟೀಲ ವಹಿಸಲಿದ್ದಾರೆ ಎಂದು ಅವರು ಹೇಳಿದರು. ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸಹಕಾರಿ ಸಂಘಗಳ ಜಿಲ್ಲಾ ಉಪ ನಿಬಂಧಕ ಬಿ.ಕೆ. ಸಲೀಂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ವಿನಯ ಕುಮಾರ್ ಸೂರಿಂಜೆ, ಸುದರ್ಶನ್ ಜೈನ್, ಭಾಸ್ಕರ್ ಎಸ್. ಕೋಟ್ಯಾನ್, ಸದಾಶಿವ ಉಳ್ಳಾಲ್, ವಾದಿರಾಜ ಶೆಟ್ಟಿ, ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು. 500, 1000 ರೂ. ನೋಟು ರದ್ದು
ಸಹಕಾರ ಸಂಘಗಳ ಸಾಲದ ಕಂತು ಅವಧಿ ಮುಂದುವರಿಕೆಗೆ ಒತ್ತಾಯ
500 ಹಾಗೂ 1000 ರೂ.ಗಳ ಹಳೆ ನೋಟು ರದ್ಧತಿಯಿಂದಾಗಿ ಸಹಕಾರಿ ಸಂಘಗಳಲ್ಲಿ ಹಳೆಯ ನೋಟು ಪಡೆಯಲು ಅವಕಾಶವಿಲ್ಲದೆ, ಕಿರು, ಮಧ್ಯಮ ಹಾಗೂ ದೀರ್ಘಾವಧಿ ಸಾಲ ಪಡೆದವರಿಗೆ ಬಡ್ಡಿ ವಿನಾಯಿತಿ, ರಿಯಾಯಿತಿ ಸೂಕ್ತ ಸಮಯದಲ್ಲಿ ಪಾವತಿಸದವರಿಗೆ ಸಿಗದಂತಾಗುತ್ತದೆ. ಇದರಿಂದ ಸಹಕಾರ ಸಂಘಗಳ ಫಲಾನುಭವಿಗಳು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಹಣದ ಚಲಾವಣೆ ಹಿಂದಿನಂತೆ ಸಹಜ ಸ್ಥಿತಿಗೆ ಬರುವವರೆಗೆ ಸಾಲದ ಕಂತು ಕಟ್ಟುವ ವಾಯಿದೆಯನ್ನು ಮುಂದುವರಿಸಲು ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರಿಗೆ ಒತ್ತಾಯಿಸಲಾಗುವುದು ಎಂದು ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.