ಬೆಂಗಳೂರು- ಮಂಗಳೂರಿನಲ್ಲಿ ಐಟಿ ದಾಳಿ
ನೋಟು ರದ್ದು ಹಿನ್ನೆಲೆ

ಬೆಂಗಳೂರು /ಮಂಗಳೂರು, ನ.18: ಕೇಂದ್ರ ಸರಕಾರ ದಿಢೀರ್ 500 ಮತ್ತು 1,000 ರೂ.ಮುಖಬೆಲೆಯ ನೋಟುಗಳನ್ನು ದೇಶಾದ್ಯಂತ ನಿಷೇಧಿಸಿದ್ದ ಬೆನ್ನಲ್ಲೇ ಬೆಂಗಳೂರು, ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಹಣ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಂಗಳೂರಿನ ಯಲಹಂಕ ಉದ್ಯಮಿಯ ಮನೆ, ಪ್ರತಿಷ್ಠಿತ ಕಂಪೆನಿಯ ಚಿನ್ನಾಭರಣ ಮಾಲ್ನ ಮೂರು ಶಾಖೆ, ಕೆಂಪೇಗೌಡ ವಿಮಾನ ನಿಲ್ದಾಣ ಬಳಿಯೂ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿವೆ ಎಂದು ಗೊತ್ತಾಗಿದೆ.
ಯಲಹಂಕದ ಉದ್ಯಮಿ ಮನೆಯಲ್ಲಿ 16 ಕೋಟಿ ರೂ. ವೌಲ್ಯದ ಅಕ್ರಮ ಆಸ್ತಿ ಜಪ್ತಿ ಮಾಡಿದ ಐಟಿ ಅಧಿಕಾರಿಗಳು, ಅತಿ ಹೆಚ್ಚಿನ ಬೆಲೆಗೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದ ಮೂರು ಮಾಲ್ ಮೇಲೆ ದಾಳಿ ನಡೆಸಲಾಗಿದೆ. ಅದೇ ರೀತಿ, ವ್ಯಕ್ತಿಯೊಬ್ಬ ಚಿನ್ನದ ಬಿಸ್ಕತ್ಗಳನ್ನು ತೆಗೆದುಕೊಂಡು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ.
ಮಂಗಳೂರು: ಮಂಗಳೂರು ವ್ಯಾಪ್ತಿಯಲ್ಲಿರುವ ಐದು ಕೋ-ಆಪರೇಟಿವ್ ಬ್ಯಾಂಕ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಬ್ಯಾಂಕ್ಗಳು ಅಕ್ರಮವಾಗಿ ಹಣ ವಿನಿಮಯ ಮಾಡುತ್ತಿದ್ದು, ಸುಮಾರು 8 ಕೋಟಿ ರೂ. ಅಕ್ರಮ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.





