ಜೋಕಟ್ಟೆ: ನಗದು ನೀಡದ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಗ್ರಾಹಕರ ಆಕ್ರೋಶ
ಕ್ಯೂನಲ್ಲಿ ನಿಂತವರಿಗೆ 12 ಗಂಟೆ ದಾಟಿದರೂ ಹಣ ಇಲ್ಲ
![ಜೋಕಟ್ಟೆ: ನಗದು ನೀಡದ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಗ್ರಾಹಕರ ಆಕ್ರೋಶ ಜೋಕಟ್ಟೆ: ನಗದು ನೀಡದ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಗ್ರಾಹಕರ ಆಕ್ರೋಶ](/images/placeholder.jpg)
ಜನಪ್ರತಿನಿಧಿಗಳ ಮಧ್ಯಪ್ರವೇಶದಿಂದ ಪ್ರತಿ ಗ್ರಾಹಕನಿಗೆ 4,000 ಬಟವಾಡೆ
ಮಂಗಳೂರು, ನ. 18: ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಎದುರು ಇಂದು ಬೆಳಗ್ಗೆನಿಂದ ನಿಂತಿದ್ದ ಗ್ರಾಹಕರಿಗೆ ಬ್ಯಾಂಕ್ ತೆರೆದು 12:20 ಗಂಟೆಯವರೆಗೂ ಹಣ ಬಟವಾಡೆ ಮಾಡದ ಬ್ಯಾಂಕ್ ವಿರುದ್ಧ ಗ್ರಾಹಕರು ಆಕ್ರೋಶಗೊಂಡ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 10 ಗಂಟೆಯಿಂದ ಜೋಕಟ್ಟೆ ಸಿಂಡಿಕೇಟ್ ಬ್ಯಾಂಕ್ನ ಎದುರು ಗ್ರಾಹಕರು ತಮ್ಮ ಹಣವನ್ನು ಡ್ರಾ ಮಾಡಲು ಸರದಿ ಸಾಲಲ್ಲಿ ನಿಂತಿದ್ದರು. ಬ್ಯಾಂಕ್ ಸಾಮಾನ್ಯವಾಗಿ ಎಂದಿನಂತೆ 10 ಗಂಟೆಗೆ ತೆರೆದಿತ್ತಾದರೂ 12:20ರವರೆಗೂ ಸರದಿ ಸಾಲಲ್ಲಿ ನಿಂತಿದ್ದ ಗ್ರಾಹಕರು ಅಲ್ಲೇ ಬಾಕಿಯಾಗಿದ್ದು, ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದರೆ, ಹಣ ಬರಲಿಲ್ಲ. ಮ್ಯಾನೇಜರ್ ಹಣ ತರಲು ಹೋಗಿದ್ದಾರೆ ಎಂದು ಹೇಳಿದರು. ಬ್ಯಾಂಕ್ ಸಿಬ್ಬಂದಿಯ ಹೇಳಿಕೆಯಿಂದ 2 ತಾಸಿಗೂ ಹೆಚ್ಚು ಸಮಯದಿಂದ ಕ್ಯೂನಲ್ಲಿ ನಿಂತಿದ್ದ ಗ್ರಾಹಕರನ್ನು ಕೆರಳಿಸಿತ್ತು. ಇದರಿಂದಾಗಿ ಗ್ರಾಹಕರು ಬ್ಯಾಂಕ್ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಿತ್ಯವೂ ಬ್ಯಾಂಕ್ ಎದುರು ಸರದಿ ಸಾಲಲ್ಲಿ ನಿಲ್ಲುವ ಗ್ರಾಹಕರಿಗೆ ಕೇಳಿದಷ್ಟು ಹಣ ಸಿಗುವುದಿಲ್ಲ. ಗ್ರಾಹಕರು ಪ್ರತಿ ದಿನ ಬ್ಯಾಂಕ್ಗೆ ಬಂದು ವಾಪಾಸು ಹೋಗುತ್ತಿದ್ದಾರೆ. ಮೊದಲು ಬಂದ ಕೆಲವರಿಗೆ ಮಾತ್ರ ಹಣ ಸಿಗುತ್ತದೆ. ಮತ್ತೆ ಬಂದರೆ ಹಣ ಇಲ್ಲ ಎಂದು ಹೇಳುತ್ತಾರೆ. ಕ್ಯೂನಲ್ಲಿ ನಿಂತಿದ್ದ ಗ್ರಾಹಕರನ್ನು ನೋಡಿ ನಾನೇ ಪ್ರತಿನಿಧಿಗಳನ್ನು ಸಂಪರ್ಕಿಸಿ ನಿತ್ಯ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದು, ಬ್ಯಾಂಕ್ಗೆ ಬರುವಂತೆ ಕೇಳಿಕೊಂಡಿದ್ದೇನೆ. ಕೂಡಲೇ ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಶೀರ್ ಅಹ್ಮದ್, ಜೋಕಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಂಶುದ್ದೀನ್ ಮತ್ತು ನಾನು ಈ ಬಗ್ಗೆ ಬ್ಯಾಂಕ್ನ ಮ್ಯಾನೇಜರ್ ಅವರನ್ನು ಬ್ಯಾಂಕ್ನಲ್ಲಿ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದೇವೆ. ಕೂಡಲೇ ಮ್ಯಾನೇಜರ್ ಅವರು ಹಣದ ಏರ್ಪಾಟು ಮಾಡಿದ್ದಾರೆ. ನಮ್ಮ ಮಧ್ಯಸ್ಥಿಕೆಯಲ್ಲಿ ಪ್ರತಿ ಗ್ರಾಹಕನಿಗೆ 4,000 ರೂ.ವನ್ನು ಬ್ಯಾಂಕ್ನವರು ವಿತರಿಸುವಂತೆ ನೋಡಿಕೊಂಡಿದ್ದೇವೆ ಎಂದು ಜೋಕಟ್ಟೆ ಗ್ರಾ.ಪಂ.ಸದಸ್ಯ ಬಿ.ಎಚ್.ಮೊದಿನ್ ಶರೀಫ್ ತಿಳಿಸಿದ್ದಾರೆ.
ಗ್ರಾಹಕರಿಗೆ ವಾರದಲ್ಲಿ 24,000 ರೂ. ಡ್ರಾ ಮಾಡಲು ನಿಯಮ ಇದ್ದರೂ ಚೆಕ್ ತೆಗೆದುಕೊಂಡು ಹೋದಾಗ ಬೇಡಿಕೆಯಷ್ಟು ಹಣ ಕೊಡುವುದಿಲ್ಲ. ಎರಡು ಸಾವಿರ ರೂ. ತೆಗೆದುಕೊಳ್ಳುವಂತೆ ಹೇಳುತ್ತಾರೆ. ಬ್ಯಾಂಕ್ನ ಖಾತೆದಾರರನೇ ಚೆಕ್ನಲ್ಲಿ ನಿರ್ದಿಷ್ಠ ಹಣವನ್ನು ನಮೂದಿಸಿದ್ದರೂ ಅಷ್ಟು ಹಣ ಇಲ್ಲ ಎನ್ನುತ್ತಾರೆ. ಇತರ ಬ್ಯಾಂಕ್ನಲ್ಲಿ ಚೆಕ್ನಲ್ಲಿ ನಮೂದಿಸಿದ ಹಣದ ತಿದ್ದುಪಡಿಗೆ ಖಾತೆದಾರನಿಗೆ ಅವಕಾಶವಿದೆ. ತಿದ್ದುಪಡಿಯ ಮೇಲೆ ಆತ ಸಹಿ ಮಾಡಿದರೆ ಅದು ಸಿಂಧುವಾಗುತ್ತದೆ. ಆದರೆ, ಈ ಬ್ಯಾಂಕ್ನಲ್ಲಿ ಖಾತೆದಾರನ ಚೆಕ್ಗೆ ತಿದ್ದುಪಡಿಗೆ ಅವಕಾಶ ನೀಡದೆ, ಪೇ ಇನ್ ಸ್ಲಿಪ್ನಲ್ಲಿ ಹಣ ಪಡೆದುಕೊಳ್ಳಿ ಎನ್ನುತ್ತಾರೆ ಎಂದು ಬ್ಯಾಂಕ್ನ ಗ್ರಾಹಕ ನಾಸಿರ್ ಜೋಕಟ್ಟೆ ತಿಳಿಸಿದ್ದಾರೆ.
ಇಬ್ಬರೇ ಸಿಬ್ಬಂದಿ
ಸುಮಾರು 200 ಮಂದಿಯಷ್ಟು ಗ್ರಾಹಕರು ಕ್ಯೂನಲ್ಲಿ ನಿಂತಿದ್ದರೂ ಬ್ಯಾಂಕ್ನಲ್ಲಿದ್ದುದು ಇಬ್ಬರೇ ಸಿಬ್ಬಂದಿ. ಗ್ರಾಹಕ ಕೇಳುವ ಮಾಹಿತಿಗೆ ಉತ್ತರಿಸುವವರಿಲ್ಲ. ಹಣ ಬಟವಾಡೆಯಲ್ಲೂ ಇಬ್ಬರು ಸಿಬ್ಬಂದಿಗಳು ಪರದಾಡಬೇಕಾಯಿತು. ಇದು ಕೂಡ ಕ್ಯೂನಲ್ಲಿ ನಿಂತಿದ್ದ ಗ್ರಾಹಕರನ್ನು ಕೆರಳಿಸಿತು.
ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹಣ ಇಲ್ಲ ಎಂಬ ಸಬೂಬು ಹೇಳಿ ಗ್ರಾಹಕರನ್ನು ವಾಪಸು ಕಳುಹಿಸಲಾಗುತ್ತಿದೆ. ಬೆಳಗ್ಗೆ 10ರಿಂದ 11:30ರವರೆಗೆ ಮಾತ್ರ ಇಲ್ಲಿ ಹಣ ವಿತರಿಸಲಾಗುತ್ತದೆ. ಆದರೆ, ಗ್ರಾಹಕರು ಕೇಳಿದಷ್ಟಲ್ಲ. ಬ್ಯಾಂಕ್ನವರು ಹೇಳಿದಷ್ಟು ಮಾತ್ರ. ಕೆಲವು ದಿನಗಳಿಂದ ಬ್ಯಾಂಕ್ನ ಕ್ರಮದಿಂದ ಸುಸ್ತಾದ ಗ್ರಾಹಕರು ಇಂದು ನಮಗೆ ಕರೆದು ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ. ನಾವು ತಕ್ಷಣ ಸ್ಪಂದಿಸಿ ಬ್ಯಾಂಕಿಗೆ ತೆರಳಿದಾಗ ಅಲ್ಲಿ ಹಾಣ ಇಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದರು. ಅನಂತರ ಕೆಲವೇ ಹೊತ್ತಿನಲ್ಲಿ ಅವರು ಹಣದ ಏರ್ಪಾಟು ಮಾಡಿ ಸರದಿ ಸಾಲಲ್ಲಿ ನಿಂತಿದ್ದ ಯಾವ ಗ್ರಾಹಕನೂ ವಾಪಾಸು ಹೋಗದಂತೆ ಪ್ರತಿ ಗ್ರಾಹಕನಿಗೆ 4,000 ರೂ.ನಂತೆ ವಿತರಣೆ ಮಾಡಿಸಿದ್ದೇವೆ ಎಂದು ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಶೀರ್ ಅಹ್ಮದ್ ಪತ್ರಿಕೆಗೆ ತಿಳಿಸಿದ್ದಾರೆ.
ಐಡಿ ತೋರಿಸಿದ್ರೂ ಕರೆನ್ಸಿ ಎಕ್ಸ್ಚೇಂಜ್ ಇಲ್ಲ
ಜನಸಾಮಾನ್ಯರ ಬಳಿ ಇದ್ದ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಐಡಿ ತೋರಿಸಿ ಬದಲಾಯಿಸಿಕೊಳ್ಳುವಂತೆ ಕೇಂದ್ರ ಸರಕಾರದ ಸೂಚನೆ ಇದ್ದರೂ ಬ್ಯಾಂಕ್ನವರು ಮೊದಲ ಎರಡು ದಿನಗಳು ಮಾತ್ರ ನಿಯಮವನ್ನ್ನು ಪಾಲಿಸಿದ್ದಾರೆ. ಆದರೆ, ಅನಂತರ ದಿನಗಳಲ್ಲಿ ಐಡಿ ತೋರಿಸಿ ಹಳೆ ನೋಟು ಕೊಟ್ಟು ಹೊಸ ನೋಟು ಪಡೆಯಲು ಅವಕಾಶ ನೀಡಿಲ್ಲ. ಬಂದವರಿಗೂ ಹಣ ಇಲ್ಲ ಎಂದು ವಾಪಾಸು ಕಳುಹಿಸಿದ್ದಾರೆ ಎಂದು ಬಶೀರ್ ತಿಳಿಸಿದ್ದಾರೆ.