ಕಿನ್ಯಾ: ಶಾಲಾ ಬಾಲಕನ ಅಪಹರಣಕ್ಕೆ ಯತ್ನ
ವಿದ್ಯಾರ್ಥಿ ಕೈಗೆ ಬ್ಲೇಡ್ನಿಂದ ಇರಿದು ಪರಾರಿ
ಉಳ್ಳಾಲ, ನ.18: ಕಿನ್ಯಾ ಗ್ರಾಮದ ನಾಟೆಕಲ್ ಬಳಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನನ್ನು ಕಪ್ಪುಓಮ್ನಿ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿದ್ಯಾರ್ಥಿಯ ಮುಖಕ್ಕೆ ಬಟ್ಟೆ ಸುತ್ತಿ ಅಪಹರಿಸಲು ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಆದರೆ ಹಿಂದಿನಿಂದ ಬಂದ ವಾಹನವನ್ನು ಕಂಡು ದುಷ್ಕರ್ಮಿಗಳು ಬಾಲಕನ ಬಲ ಕೈಗೆ ಬ್ಲೇಡಿನಿಂದ ಇರಿದು ಪರಾರಿಯಾಗಿದ್ದಾರೆ. ಕಿನ್ಯಾ ಗ್ರಾಮದ ದಿ.ಮುಹಮ್ಮದ್ ಬಾಷಾ ಅವರ ಪುತ್ರ ಹಾಗೂ ದೇರಳಕಟ್ಟೆ ನೇತಾಜಿ ಸುಭಾಶ್ಚಂದ್ರ ಬೋಸ್ ಶಾಲೆಯ ಏಳನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಸಅದ್(12)ಅಪಹರಣ ಯತ್ನಕ್ಕೊಳಗಾದ ಬಾಲಕ. ಮುಹಮ್ಮದ್ ಸಅದ್ ಎಂದಿನಂತೆ ಶುಕ್ರವಾರ ಸಂಜೆ ಶಾಲೆ ಮುಗಿಸಿ ನಾಟೆಕಲ್ಲಿನವರೆಗೆ ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಓಮ್ನಿ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಅದ್ನ ಮುಖಕ್ಕೆ ಬಟ್ಟೆ ಕಟ್ಟಿ ಕಾರಿನೊಳಗೆ ಎಳೆಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ಆಗ ಸಅದ್ ಬೊಬ್ಬಿಟ್ಟಿದ್ದು, ಹಿಂದಿನಿಂದ ಬಂದ ಬೈಕ್ ಸವಾರ ಗಮನಿಸಿದ್ದಾರೆನ್ನಲಾಗಿದೆ. ಪರಿಣಾಮ ದುಷ್ಕರ್ಮಿಗಳು ತಬ್ಬಿಬ್ಬಾಗಿ ಬಾಲಕನ ಬಲಗೈಗೆ ಬ್ಲೇಡಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಸಅದ್ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇರಳ ರಾಜ್ಯ ನೋಂದಣಿ ಸಂಖ್ಯೆಯ ಕಪ್ಪುಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮುಖಕ್ಕೆ ಕರವಸ್ತ್ರ ಸುತ್ತಿದ್ದು ಓರ್ವ ದಪ್ಪವಾಗಿದ್ದು ಗಡ್ಡಧಾರಿಯಾಗಿದ್ದರೆ, ಇನ್ನೋರ್ವ ತೆಳ್ಳಗಾಗಿದ್ದು ಕುರುಚಲು ಗಡ್ಡಧಾರಿಯಾಗಿದ್ದ. ಇಬ್ಬರೂ 30-32 ಪ್ರಾಯದವರಾಗಿರಬಹುದೆಂದು ಬಾಲಕ ಸಅದ್ ಎಸಿಪಿ ಶೃತಿ ಮತ್ತು ಇನ್ಸ್ಪೆಕ್ಟರ್ ಗೋಪಿಕೃಷ್ಣರಿಗೆ ಮಾಹಿತಿ ನೀಡಿದ್ದಾನೆ. ಮಂಜೇಶ್ವರದಲ್ಲೂ ನಡೆದಿತ್ತು: ಎರಡು ದಿನಗಳ ಹಿಂದಷ್ಟೆ ಮಂಜೇಶ್ವರದಲ್ಲೂ ಕಪ್ಪುಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾಲಕನೋರ್ವನನ್ನು ಅಪಹರಿಸಲು ಯತ್ನ ನಡೆಸಿದ್ದು, ಇದೇ ತಂಡ ಅಪಹರಣಕ್ಕೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಕೈರಂಗಳದ ವಿದ್ಯಾನಗರದ ಜಲ್ಲಿಕ್ರಾಸಿನಲ್ಲಿ ಇದೇ ರೀತಿ ಮದ್ರಸ ವಿದ್ಯಾರ್ಥಿಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕೈಗೆ ಇರಿದು ಪರಾರಿಯಾಗಿದ್ದರು. ಇಂತಹ ಘಟನೆಗಳಿಂದ ವಿದ್ಯಾರ್ಥಿ ಪೋಷಕರು ಆತಂಕ್ಕೀಡಾಗಿದ್ದಾರೆ.