ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಸಜ್ಜಿತ ಕಚೇರಿ
ಹೊಸ ಕಟ್ಟಡದಲ್ಲಿ ಏನೇನಿದೆ ?
![ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಸಜ್ಜಿತ ಕಚೇರಿ ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಸಜ್ಜಿತ ಕಚೇರಿ](https://www.varthabharati.in/sites/default/files/images/articles/2016/11/19/gautham.jpg)
ಮಂಗಳೂರು, ನ.19: ಕಳೆದ 40 ವರ್ಷದಿಂದ ನಗರದ ಹಂಪನಕಟ್ಟೆಯ ಬಾಡಿಗೆ ಕಟ್ಟಡವೊಂದರಲ್ಲಿ ಕಚೇರಿಯನ್ನು ಹೊಂದಿದ್ದ ದ.ಕ.ಜಿಲ್ಲಾ ಕಾಂಗ್ರೆಸ್ಗೆ ಇದೀಗ ಕದ್ರಿ ಮಲ್ಲಿಕಟ್ಟೆಯಲ್ಲಿ ಸುಸಜ್ಜಿತ ಕಚೇರಿ ತಲೆಎತ್ತಿವೆ. ಈ ಕಚೇರಿಗೆ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಜನ್ಮಶತಾಬ್ಧಿ ಭವನ ಎಂದೂ ಹೆಸರಿಸಲಾಗಿದೆ. 19 ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಶಂಕುಸ್ಥಾಪನೆಗೈಯಲ್ಪಟ್ಟು ಇದೀಗ ಅವರಿಂದಲೇ ಉದ್ಘಾಟನೆಗೊಂಡಿದೆ.
ಮಲ್ಲಿಕಟ್ಟೆಯಲ್ಲಿ 9 ಸೆಂಟ್ಸ್ ಜಾಗವನ್ನು ಸರಕಾರದಿಂದ ಲೀಸ್ಗೆ ಪಡೆದು ಸುಮಾರು 2 ಕೋ.ರೂ. ವೆಚ್ಚದಲ್ಲಿ ಈ ಭವನ ನಿರ್ಮಿಸಲಾಗಿದೆ. ಇದಕ್ಕಾಗಿ ಪ್ರಿಯದರ್ಶಿನಿ ಟ್ರಸ್ಟ್ ಸ್ಥಾಪಿಸಲಾಗಿದೆ.
ಈ ಸುಸಜ್ಜಿತ ಕಟ್ಟಡವು 9 ಸಾವಿರ ಚ.ಅ. ಹೊಂದಿದೆ. ತಳಭಾಗದಲ್ಲಿ 8 ಕಾರು ಮತ್ತು 20 ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ, ನೆಲ ಅಂತಸ್ತಿನಲ್ಲಿ ವ್ಯಾಪಾರ ಮಳಿಗೆಯಿದೆ. ಪ್ರಥಮ ಮಹಡಿಯಲ್ಲಿ ಪಕ್ಷದ ಕಚೇರಿ, ಸುಮಾರು 50 ಮಂದಿಯ ಆಸನದ ಸಭಾಂಗಣ, ಅಧ್ಯಕ್ಷರ, ಪ್ರಧಾನ ಕಾರ್ಯದರ್ಶಿಯ ಕೊಠಡಿ, ದ್ವಿತೀಯ ಮಹಡಿಯಲ್ಲಿ ಜಿಲ್ಲಾ ಕಾಂಗ್ರೆಸ್ನ ವಿವಿಧ ಘಟಕಗಳ ಅಧ್ಯಕ್ಷರ ಕೊಠಡಿ, ಸುದ್ದಿಗೋಷ್ಠಿ ಹಾಲ್, 3ನೆ ಅಂತಸ್ತಿನಲ್ಲಿ 250 ಮಂದಿಯ ಆಸನದ ಸಭಾಂಗಣ ನಿರ್ಮಿಸಲಾಗಿದ್ದು, ಲಿಫ್ಟ್ ವ್ಯವಸ್ಥೆಯೂ ಇದೆ.
ಕಚೇರಿ ಒಳಪ್ರವೇಶಿಸಿ ಸಾಗುವಾಗ ಎಡಬದಿಯ ಗೋಡೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆರಂಭದಿಂದ ಈವರೆಗಿನ 60 ಅಧ್ಯಕ್ಷರ ಭಾವಚಿತ್ರ, ಭಾರತದ 15 ರಾಷ್ಟ್ರಪತಿಗಳ ಭಾವಚಿತ್ರ, ಕಾಂಗ್ರೆಸ್ ಪಕ್ಷದ 7 ಮಂದಿ ಪ್ರಧಾನಿಗಳ ಭಾವಚಿತ್ರ, ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ 14 ಮುಖ್ಯಮಂತ್ರಿಗಳ ಭಾವಚಿತ್ರವನ್ನು ಅಳವಡಿಸಿಕೊಳ್ಳಲಾಗಿದ್ದು, ಗಮನ ಸೆಳೆಯುತ್ತಿದೆ.