ಭರವಸೆ ಈಡೇರಿಸದ ಬಿಲ್ಡರ್: ತು.ರ.ವೇ.ಯಿಂದ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು, ನ.20: ಶಕ್ತಿನಗರದ ಆ್ಯಪಲ್ ಹೋಮ್ಸ್ ಅಪಾರ್ಟ್ಮೆಂಟ್ನ ನಿವಾಸಿಗಳಿಗೆ ಬಿಲ್ಡರ್ ನೀಡಿದ ಭರವಸೆಗಳನ್ನು ವಾರದೊಳಗಾಗಿ ಈಡೇರಿಸದಿದ್ದರೆ ಪಾಲಿಕೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಿರುವುದಾಗಿ ತುಳುನಾಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ತು.ರ.ವೇ. ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಆ್ಯಪಲ್ ಹೋಮ್ಸ್ ಅಪಾರ್ಟ್ಮೆಂಟ್ನ ಬಿಲ್ಡರ್ ನೀರು, ವಿದ್ಯುತ್, ಪ್ಲೇ ಗ್ರೌಂಡ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಈಗ ಇಲ್ಲಿಗೆ ಸಮರ್ಪಕವಾದ ಮಾರ್ಗವೂ ಇಲ್ಲವಾಗಿದೆ. ನ್ಯಾಯ ಕೇಳಿದರೆ ಸ್ಪಂದನೆ ನೀಡುತ್ತಿಲ್ಲ. ನಿವಾಸಿಗಳ ಸಮಸ್ಯೆಗೆ ವಾರದೊಳಗಾಗಿ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಕಟ್ಟಡ ಪರವಾನಿಗೆ ನೀಡಿರುವ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಗನ್ನಾಥ ಶೆಟ್ಟಿ ಪಿ., ಮಾತನಾಡಿ, ಬಿಲ್ಡರ್ಗಳು ಕಡಿಮೆ ವೆಚ್ಚದಲ್ಲಿ ಮನೆ ಮಾಡಿಕೊಡುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ. ಇದರಲ್ಲಿ ಸುಮಾರು 56 ಪ್ಲಾಟ್ಗಳಿದ್ದು, ಶೇ.50ರಷ್ಟು ಪ್ಲಾಟ್ಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದರು.
ಆ್ಯಪಲ್ ಹೋಮ್ಸ್ ನಿವಾಸಿ ಸಂತೋಷ್ ಭಟ್, ವೇದಿಕೆಯ ಪ್ರಶಾಂತ್ ಭಟ್ ಕಡಬ, ಸಿರಾಜ್, ನಿವಾಸಿಗಳಾದ ವಹೀದಾ ಅಶ್ಫಾಕ್ ಉಪಸ್ಥಿತರಿದ್ದರು.