ಆರ್ಬಿಐ ಗವರ್ನರ್ ರಾಜೀನಾಮೆಗೆ ಬ್ಯಾಂಕ್ ಅಧಿಕಾರಿಗಳ ಯೂನಿಯನ್ ಆಗ್ರಹ
ಒತ್ತಡದಿಂದಾಗಿ 11 ಬ್ಯಾಂಕ್ ನೌಕರರ ಸಾವು

ಹೊಸದಿಲ್ಲಿ,ನ.21: ತಮ್ಮ ಬಳಿಯಿದ್ದ ಹಳೆಯ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯಿಸಿಕೊಳ್ಳಲು ಬ್ಯಾಂಕುಗಳಲ್ಲಿ ಸರದಿ ಸಾಲುಗಳಲ್ಲಿ ಕಾದು ನಿಂತು ಸಾವನ್ನಪ್ಪಿದವರು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಆದರೆ ಹಣ ನಿಷೇಧ ಕ್ರಮ ಘೋಷಣೆಯಾದಾಗಿನಿಂದ ದಣಿವರಿಯದೆ ದುಡಿಯುತ್ತಿರುವ ಬ್ಯಾಂಕ್ ನೌಕರರ ಸ್ಥಿತಿಯ ಬಗ್ಗೆ ವರದಿಯಾಗಿದ್ದು ತುಂಬ ಕಡಿಮೆ.
ಕಳೆದ 12 ದಿನಗಳಲ್ಲಿ ಒತ್ತಡದಿಂದಾಗಿ 11 ಬ್ಯಾಂಕ್ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ ಅಧಿಕಾರಿಗಳ ಒಕ್ಕೂಟ(ಎಐಬಿಒಸಿ)ದ ಹಿರಿಯ ಉಪಾಧ್ಯಕ್ಷ ಡಿ.ಥಾಮಸ್ ಫ್ರಾಂಕೋ ಹೇಳಿದ್ದಾರೆ. ಎಐಬಿಒಸಿ 2.5 ಲಕ್ಷಕ್ಕೂ ಅಧಿಕ ಬ್ಯಾಂಕ್ ಅಧಿಕಾರಿಗಳನ್ನು ಪ್ರತಿನಿಧಿಸುತ್ತಿದ್ದು, ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವಾಗಿದೆ.
ಹಣ ನಿಷೇಧ ಕ್ರಮ ಬ್ಯಾಂಕ್ ಅಧಿಕಾರಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ. ಶುಕ್ರವಾರವಷ್ಟೇ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನೋಟು ವಿನಿಮಯ ಕರ್ತವ್ಯವನ್ನು ನಿರ್ವಹಿಸುತ್ತಿದ್ದ 46ರ ಹರೆಯದ ಎಸ್ಬಿಐ ಅಧಿಕಾರಿಯೋರ್ವರು ಗ್ರಾಹಕರ ದಟ್ಟಣೆಯ ನಡುವೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ದೇಶದ ಆರ್ಥಿಕತೆಯಲ್ಲಿ ಅಲ್ಲೋಲಕಲ್ಲೋಲವನ್ನುಂಟು ಮಾಡಿದ್ದಕ್ಕಾಗಿ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿರುವ ಫ್ರಾಂಕೋ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತಸಚಿವ ಅರುಣ್ ಜೇಟ್ಲಿ ಅವರು ಆರ್ಥಿಕ ತಜ್ಞರಲ್ಲ,ಆದರೆ ಅವರಿಗೆ ಸಲಹೆ ನೀಡಲು ಆರ್ಥಿಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಜನರು ಆರ್ಬಿಐನಲ್ಲಿದ್ದಾರೆ. ಆದರೆ ಅವರೂ ವಿಫಲರಾಗಿದ್ದಾರೆ ಎಂದಿದ್ದಾರೆ.
ಯಾವುದೇ ಪೂರ್ವಯೋಜನೆಯಿಲ್ಲದೆ ನಿರ್ಣಾಯಕ ಆರ್ಥಿಕ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಪಟೇಲ್ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಅವರ ಈ ನಿರ್ಧಾರ ದೇಶದ ಆರ್ಥಿಕತೆಯ ಜೊತೆಗೆ ಬಹುಜನರ ಬದುಕಿನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ ಎಂದು ಅವರು ಆಪಾದಿಸಿದ್ದಾರೆ. ನೋಟು ನಿಷೇಧ ಕ್ರಮದ ಬಗ್ಗೆ ಹಲವಾರು ಸಂಗತ ಪ್ರಶ್ನೆಗಳನ್ನೂ ಫ್ರಾಂಕೋಎತ್ತಿದ್ದಾರೆ.
500 ರೂ.ನೋಟುಗಳನ್ನು ಮುದ್ರಿಸದಂತೆ ಅವರನ್ನು ತಡೆದವರು ಯಾರು? ಹೊಸ 2,000 ರೂ.ನೋಟುಗಳು ಗಾತ್ರದಲ್ಲಿ ಹಳೆಯ 1,000 ರೂ.ನೋಟಿಗಿಂತ ಕಿರಿದಾಗಿದ್ದು ಇದರಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯು ಎರಡು ಲಕ್ಷಕ್ಕೂ ಅಧಿಕ ಎಟಿಎಂಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರಿಗೆ ಗೊತ್ತಿರಲಿಲ್ಲವೇ? ಹೆಚ್ಚಿನ ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿರುವ ಸಹಕಾರಿ ಬ್ಯಾಂಕುಗಳಿಗೆ ನೋಟು ವಿನಿಮಯ ಮಾಡಲು ಅವರೇಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿರುವ ಫ್ರಾಂಕೋ, ಆರಾಮವಾಗಿ ಕುಳಿತುಕೊಂಡು ನೋಟು ನಿಷೇಧ ಕ್ರಮವನ್ನು ಜಾರಿಗೊಳಿಸಿದವರಿಗೆ ಭಾರತೀಯ ಆರ್ಥಿಕತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ವಹಿವಾಟುಗಳು ಹೇಗೆ ನಡೆಯುತ್ತವೆ ಎಂಬ ಬಗ್ಗೆ ಮೂಲಜ್ಞಾನವೂ ಇಲ್ಲ ಎಂದಿದ್ದಾರೆ.







